ಬೊಮ್ಮಾಯಿ-ದೇವೇಗೌಡ್ರ ಭೇಟಿಗೆ ಆಕ್ರೋಶ: ಪ್ರೀತಂ ಗೌಡ ಬರೀ ಹೆಸರಿಗೆ, ಹಿಂದೆ ಯಾರು?
ಜನತಾ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಸಚಿವ ಸಂಪುಟ ವಿಸ್ತರಣೆಯಾಗುವ ಮುನ್ನವೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಇದೊಂದು ಪ್ರಬುದ್ದ ನಡೆಯೆಂದು ಎಲ್ಲರೂ ಪ್ರಶಂಸಿದ್ದರೂ, ಆದರೆ, ಹಾಸನದ ಯುವ ಬಿಜೆಪಿ ಶಾಸಕ ಪ್ರೀತಂ ಗೌಡ ಅವರಿಗೆ ಇದು ಸಹ್ಯವಾಗಿರಲಿಲ್ಲ. ಕಾರ್ಯಕರ್ತರು ಕೇಳುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಇದನ್ನು ವಿರೋಧಿಸಿದ್ದರು. ಸಿಎಂ ಬೊಮ್ಮಾಯಿಯವರು ಕೂಡಾ ಅವರನ್ನು ಕರೆದು ಮಾತನಾಡಿಸಿದ್ದರು.
ಸಿಎಂ ಜೊತೆ ಮಾತುಕತೆಯ ನಂತರವೂ ಪ್ರೀತಂ ಗೌಡ ಅವರ ನಿಲುವಿನಲ್ಲಿ ಬದಲಾಗಿರಲಿಲ್ಲ. ಸಿಎಂ ಭೇಟಿಯ ವಿಚಾರದಲ್ಲಿ ತಾನು ಆಡಿದ ಮಾತಿಗೆ ವ್ಯಂಗ್ಯವಾಡಿದ್ದ ವಿ.ಸೋಮಣ್ಣ ಅವರಿಗೂ ಪ್ರೀತಂ ತಿರುಗೇಟು ನೀಡಿದ್ದರು. ಆ ಮೂಲಕ, ಗೌಡ್ರ ಕುಟುಂಬದ ನಡುವೆ ಕದನ ವಿರಾಮ ನಡೆಯುವುದಿಲ್ಲ ಎನ್ನುವುದನ್ನು ಸಾರಿದ್ದರು.
ಹಾಸನದ ರಾಜಕೀಯದ ವಿಚಾರಕ್ಕೆ ಬಂದಾಗ, ಗೌಡ್ರ ಕುಟುಂಬಕ್ಕೆ ಪ್ರತಿರೋಧ ವ್ಯಕ್ತ ಪಡಿಸುತ್ತಾ ಬಂದಿದ್ದವರು ಎ.ಮಂಜು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ಮಂಜು ಸೋತ ನಂತರ ಇವರ ಹವಾ ಕಮ್ಮಿಯಾಗುತ್ತಾ ಬಂತು. ಅಲ್ಲಿಂದ, ಗೌಡ್ರ ಕುಟುಂಬದ ವಿರುದ್ದ ಆಕ್ರಮಣಾಕಾರಿ ಧೋರಣೆಯನ್ನು ಮುಂದುವರಿಸಿದವರು ಪ್ರೀತಂ ಗೌಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ, ಸಿಎಂ-ಗೌಡ್ರ ಭೇಟಿಯನ್ನು ಬಹಿರಂಗವಾಗಿಯೇ ಆಕ್ಷೇಪಿಸುತ್ತಾರೆ ಎಂದಾದರೆ, ಇದು ಇವರೊಬ್ಬದ್ದೇ ಧ್ವನಿಯಾ ಎನ್ನುವ ಪ್ರಶ್ನೆ ಮೂಡುವುದು ಸಹಜ.

ವಿಜಯೇಂದ್ರ ಅವರ ಅತ್ಯಂತ ಆಪ್ತ ವಲದಲ್ಲಿ ಗುರುತಿಸಿಕೊಳ್ಳುವ ಪ್ರೀತಂ ಗೌಡ
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಅತ್ಯಂತ ಆಪ್ತ ವಲದಲ್ಲಿ ಗುರುತಿಸಿಕೊಳ್ಳುವ ಪ್ರೀತಂ ಗೌಡ ಅವರು ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಪ್ರಮುಖ ಕಾರಣಕರ್ತರಾಗಿದ್ದರು. ಹಾಸನದಂತಹ ಜೆಡಿಎಸ್ಸಿನ ಭದ್ರಕೋಟೆಯಲ್ಲಿ ರಾಜಕೀಯ ಮಾಡುವುದು ಕಷ್ಟ. ಇಂತಹ ಪರಿಸ್ಥಿತಿ ಅಲ್ಲಿ ಇರುವಾಗ, ಮೊದಲ ಪ್ರಯತ್ನದಲ್ಲೇ ಹಾಸನ ನಗರ ಕ್ಷೇತ್ರದಲ್ಲಿ ಪ್ರೀತಂ ಗೌಡ ಗೆಲ್ಲುವ ಮೂಲಕ ಹೊಸ ಸಂದೇಶ ರವಾನಿಸಿದ್ದಂತೂ ಹೌದು.

ಬಿಜೆಪಿ ನಾಯಕರ/ ಸಂಘ ಪರಿವಾರದ ಒಳಧ್ವನಿ ಇದೆಯಾ ಎನ್ನುವ ಪ್ರಶ್ನೆ
ಮೇಲ್ನೋಟಕ್ಕೆ ಪ್ರೀತಂ ಗೌಡ ಅವರ ಆಕ್ಷೇಪ ಕಾರ್ಯಕರ್ತರ ಪರವಾಗಿದ್ದದ್ದು ಎನ್ನುವುದು ಒಪ್ಪಿಕೊಳ್ಳುವ ವಿಚಾರ. ಯಾಕೆಂದರೆ ದಿನಂಪ್ರತಿ ಕಾರ್ಯಕರ್ತರು ಜೆಡಿಎಸ್ ಎದುರು ಹಾಕಿಕೊಳ್ಳುವ ಸ್ಥಿತಿ ಅಲ್ಲಿ ಇರುವುದರಿಂದ. ಆದರೂ, ಆಗತಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿವರ ನಡೆಯನ್ನೇ ಬಹಿರಂಗವಾಗಿಯೇ ಆಕ್ಷೇಪಿಸುತ್ತಾರೆ ಎಂದರೆ? ಇವರ ಹಿಂದೆ ಬಿಜೆಪಿ ನಾಯಕರ/ ಸಂಘ ಪರಿವಾರದ ಒಳಧ್ವನಿ ಇದೆಯಾ ಎನ್ನುವ ಪ್ರಶ್ನೆ ಕಾಡುವುದು ಸಹಜ.

ಬಿಜೆಪಿ ಹೈಕಮಾಂಡಿನ ಮೂಲ ಆಯ್ಕೆ ಬಸವರಾಜ ಬೊಮ್ಮಾಯಿ ಆಗಿರಲಿಲ್ಲ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರ ಮತ್ತು ಬಿಜೆಪಿ ಹೈಕಮಾಂಡಿನ ಮೂಲ ಆಯ್ಕೆ ಬಸವರಾಜ ಬೊಮ್ಮಾಯಿ ಆಗಿರಲಿಲ್ಲ ಎನ್ನುವುದು ಬಿಜೆಪಿಯ ಒಳಗುಟ್ಟು. ಬೊಮ್ಮಾಯಿಯವರು ಅತ್ಯಂತ ಸ್ಪಷ್ಟವಾಗಿ ಯಡಿಯೂರಪ್ಪನವರ ಆಯ್ಕೆಯಾಗಿತ್ತು. ಮೂಲ ಬಿಜೆಪಿಗ ಜೊತೆಗೆ ಸಂಘಕ್ಕೆ ದುಡಿದ ಇನ್ನೊಂದು ಹೆಸರನ್ನೇ ಆರ್ ಎಸ್ ಎಸ್ ಸೂಚಿಸಿತ್ತು. ಆದರೆ, ಕೊನೆಯ ಕ್ಷಣದ ಬದಲಾವಣೆಯಾಗಿ ಬೊಮ್ಮಾಯಿ ಆಯ್ಕೆಯಾದರು.

ಕಟ್ಟಾ ಬಿಜೆಪಿಗರು/ಸಂಘದವರು ಬೊಮ್ಮಾಯಿ ಆಯ್ಕೆಗೆ ವಿಜ್ರುಂಭಿಸಿರಲಿಲ್ಲ
ಜನತಾ ಪರಿವಾರದ ಹಿನ್ನಲೆಯ ಬೊಮ್ಮಾಯಿಯವರು ಸಿಎಂ ಆಗುವುದು ಮೂಲ ಬಿಜೆಪಿಗರು ಬಯಸಿದ್ದರೋ, ಇಲ್ಲವೋ ಎನ್ನುವುದು ಆಮೇಲಿನ ಪ್ರಶ್ನೆ. ಆದರೂ, ಪ್ರೀತಂ ಗೌಡ ಆಕ್ರೋಶದ ಹಿಂದೆ ಬೇರೆ ಶಕ್ತಿಗಳು ಇವೆಯಾ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು. ಯಾಕೆಂದರೆ, ಕಟ್ಟಾ ಬಿಜೆಪಿಗರು/ಸಂಘದವರು ಬೊಮ್ಮಾಯಿ ಆಯ್ಕೆಗೆ ವಿಜ್ರುಂಭಿಸಿರಲಿಲ್ಲ.












Click it and Unblock the Notifications