ಲೋಕಸಭೆ ಚುನಾವಣೆ: ಪ್ರಜ್ವಲ್ ರೇವಣ್ಣಗೆ ದೇವೇಗೌಡ ಗ್ರೀನ್ ಸಿಗ್ನಲ್
ಬೆಂಗಳೂರು, ಡಿಸೆಂಬರ್ 29: ಚುನಾವಣಾ ರಾಜಕೀಯ ಅಖಾಡಕ್ಕೆ ಧುಮುಕಲು ಹರಸಾಹಸ ಪಡುತ್ತಿದ್ದ ಪ್ರಜ್ವಲ್ ರೇವಣ್ಣಗೆ ಅಂತೂ ಗ್ರೀನ್ ಸಿಗ್ನಲ್ ದೊರೆತಿದೆ.
ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಮೂಲಕ ದೇವೇಗೌಡ ಕುಟುಂಬದ ಐದನೇ ವ್ಯಕ್ತಿ ಚುನಾವಣೆ ರಾಜಕೀಯಕ್ಕೆ ಬರುವಂತಾಗಿದೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, ಪ್ರಜ್ವಲ್ ರೇವಣ್ಣ, ಹಾಸನದಲ್ಲಿ ಕೆಲಸ ಮಾಡಿದ್ದಾರೆ, ಹಾಗಾಗಿ ಅವರು ಅಲ್ಲಿಯೇ ಲೋಕಸಭೆ ಚುನಾವಣೆಗೆ ನಿಲ್ಲಲಿ ಎಂದು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಯಾವ ಶಾಸಕರು ರಾಜೀನಾಮೆ ಕೊಡಲ್ಲ, ಸರ್ಕಾರ ಸುಭದ್ರ : ದೇವೇಗೌಡ
ಪ್ರಸ್ತುತ ದೇವೇಗೌಡ ಅವರು ಹಾಸನದ ಸಂಸದರಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನೇ ಮೊಮ್ಮಗನಿಗೆ ಬಿಟ್ಟುಕೊಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ವಿಧಾನಸಭೆ ಚುನಾವಣೆ ಸಮಯ ರಾಜರಾಜೇಶ್ವರಿ ನಗರದ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದರು, ಆದರೆ ಅದನ್ನು ನಿರಾಕರಿಸಲಾಗಿತ್ತು.
ಮುಂದುವರೆದು ಮಾತನಾಡಿದ ದೇವೇಗೌಡ ಅವರು, ಬೆಂಗಳೂರು ಉತ್ತರ, ಮಂಡ್ಯ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಿದ್ದಾರೆ, ಮಂಡ್ಯದಲ್ಲಿ ತಮ್ಮಣ್ಣ, ಪುಟ್ಟರಾಜು ಅವರೊಂದಿಗೆ ಚರ್ಚಿಸಿ ಅಭ್ಯರ್ಥಿ ಅಂತಿಮ ಮಾಡಬೇಕಿದೆ ಎಂದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ : 12 ಸ್ಥಾನಕ್ಕೆ ದೇವೇಗೌಡರ ಬೇಡಿಕೆ
ಪ್ರಜ್ವಲ್ ರೇವಣ್ಣ ಚುನಾವಣೆಗೆ ಇಳಿದ ಬೆನ್ನಲ್ಲೆ ನಿಖಿಲ್ ಕುಮಾರಸ್ವಾಮಿ ಸಹ ಚುನಾವಣೆ ರಾಜಕೀಯಕ್ಕೆ ಧುಮುಕುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ ಇದೆ.