ಚಿನ್ನಕ್ಕಾಗಿ ಪಕ್ಕದ ಮನೆ ಮಹಿಳೆ ಕೊಂದು, 52 ದಿನ ಪೊಲೀಸರನ್ನೇ ಯಾಮಾರಿಸಿದ್ದ ಖತರ್ನಾಕ್ ಬಂಧನ
ಹಾಸನ, ಸೆಪ್ಟೆಂಬರ್ 22: ಸೇನೆಯಲ್ಲಿ 9 ವರ್ಷದಿಂದ ಕೆಲಸ ಮಾಡುತ್ತಿರುವ ಆ ಸೈನಿಕನ ತಾಯಿ ಜುಲೈ 20ರಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ತಮ್ಮ ಪಕ್ಕದೂರಿನ ವ್ಯಕ್ತಿಯೊಬ್ಬನ ಮೇಲೆ ಕೊಲೆ ಅನುಮಾನದಿಂದ ಮನೆಯವರು ದೂರನ್ನೂ ಕೊಟ್ಟಿದ್ದ ಎರಡು ತಿಂಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಅಸ್ತಿ ಪಂಜರ ಪತ್ತೆಯಾಗಿತ್ತು. ಚಿನ್ನಾಭರಣಕ್ಕಾಗಿ ಪಕ್ಕದ ಮನೆಯಾಕೆಯನ್ನು ಕೊಂದು ತಾನೇ ಸಾಂತ್ವನ ಹೇಳುವಂತೆ ಮನೆಯವರ ಜೊತೆಗೆ ಇದ್ದು ಪ್ರಕರಣವನ್ನೇ ತಿರುಚಿದ್ದ ಖತರ್ನಾಕ್ ಈಗ ಜೈಲು ಸೇರಿದ್ದಾನೆ.
ಹಾಸನ ತಾಲ್ಲೂಕಿನ ನಾರಾಯಣಪುರದಿಂದ ನಾಪತ್ತೆಯಾಗಿದ್ದ ಮಹಿಳೆ ರತ್ಮಮ್ಮ(53)ಳಿಗಾಗಿ ಸತತ 52 ದಿನಗಳ ಹುಡುಕಾಟ ನಡೆಸಲಾಗಿತ್ತು. ಕೊನೆಗೆ ನಾರಾಯಣಪುರದ ಜಗದೀಶ್ ರವರ ಜೋಳದ ಹೊಲದಲ್ಲಿ ಅಸ್ತಿಪಂಜರವಾಗಿ ಪತ್ತೆಯಾಗಿದ್ದರು. ಚಿನ್ನಾಭರಣಕ್ಕಾಗಿ ಪಕ್ಕದೂರಿನ ಮಹೇಶ್ ಎಂಬಾತ ಕೊಲೆಮಾಡಿ ಮೃತದೇಹ ಇಲ್ಲಿ ಬಿಸಾಡಿದ್ದಾನೆ ಎಂದು ಮನೆಯವರ ಆರೋಪ ಮಾಡಿದ್ದರು. ಪೊಲೀಸರು ಹಲವು ಬಾರಿ ಆತನನ್ನ ಕರೆತಂದು ವಿಚಾರಣೆ ಮಾಡಿದ್ದರು. ಆದರೆ ಆತನ ಮೇಲಿನ ಆರೋಪ ಮಾತ್ರ ಸಾಬೀತಾಗಿರಲಿಲ್ಲ.
ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಕಡೆಗೆ ಮಂಪರು ಪರೀಕ್ಷೆಗೆ ನ್ಯಾಯಾಲಯದಿಂದ ಅನುಮತಿ ಪಡೆದು ಮಹೇಶ್ ಮಂಪರು ಪರೀಕ್ಷೆಯ ತಯಾರಿಯಲ್ಲಿದ್ದ ಪೊಲೀಸರು ಅನುಮಾನದ ಮೇಲೆ ಅದೇ ಊರಿನ ಮಧುರಾಜ್ ಆಲಿಯಾಸ್ ರಾಜು ಎಂಬ ಯುವಕನನ್ನು ಕರೆತಂದು ವಿಚಾರಣೆ ಮಾಡಿದ್ದರು. ರತ್ಮಮ್ಮ ಕಾಣೆಯಾದ ದಿನದಿಂದಲೂ ಅವರ ಮನೆಯವರೊಟ್ಟಿಗೆ ಇದ್ದು, ಮಹೇಶನೇ ಕೊಲೆಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದ ಇದೇ ಮಧುರಾಜ್, ರತ್ಮಮ್ಮ ಕಾಣೆಯಾದ ದಿನ ಒಡವೆ ಅಡವಿಟ್ಟು ಮತ್ತೊಂದು ಕಡೆ ಅಡವಿಟ್ಟ ಒಡವೆ ಬಿಡಿಸಿಕೊಂಡಿದ್ದ. ಆತನ ಮೊಬೈಲ್ನಲ್ಲಿ ಸಿಕ್ಕ ಅದೊಂದು ಗಿರವಿ ಇಟ್ಟ ಒಡವೆಯ ಮಾಹಿತಿಯ ಸಂದೇಶ ಬೆನ್ನತ್ತಿದ ಸಿಪಿಐ ಸುರೇಶ್ ನೇತೃತ್ವದ ತಂಡ ಕಡೆಗೂ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಮಧುರಾಜ್ ಅಡವಿಟ್ಟ ತನ್ನ ತಾಯಿಯ ಒಡವೆ ಬಿಡಿಸಿಕೊಳ್ಳುವುದಕ್ಕೆ ರತ್ಮಮ್ಮರನ್ನ ಕೊಂದು ಒಡವೆ ಅಡವಿಟ್ಟು ತನ್ನ ತಾಯಿ ಒಡವೆ ಬಿಡಿಸಿ ತಂದಿದ್ದ. ಯಾರಿಗೂ ಅನುಮಾನ ಬಾರದಂತೆ ಮನೆಯವರೊಟ್ಟಿಗೆ ಇದ್ದು ಅವರ ಕಷ್ಟಕ್ಕೆ ನೆರವಾಗುವ ನಾಟಕ ಮಾಡಿದ್ದ, ತನ್ನಮೇಲೆ ಅನುಮಾನ ಬಾರದಿರಲಿ ಎಂದು ರತ್ಮಮ್ಮನಿಗೆ ಪರಿಚಯವಿದ್ದ ಮಹೇಶ್ ಮೇಲೆ ಅನುಮಾನ ಬರುವಂತೆ ಮಾಡಿ ಪ್ರಕರಣವನ್ನೇ ತಿರುಚಿ ಕಡೆಗೆ ತಾನೇ ಸಿಕ್ಕಿಬಿದ್ದಿದ್ದಾನೆ.
ಜುಲೈ 20ರಂದು ಹಸು ಮೇಯಿಸಲೆಂದು ಜಮೀನಿನ ಬಳಿ ಹೋಗಿದ್ದ ರತ್ಮಮ್ಮ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ದೇಶದ ಗಡಿ ಕಾಯುತ್ತಿರುವ ಸೈನಿಕನ ತಾಯಿಗೆ ರಕ್ಷಣೆ ಇಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದರು. ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿಲ್ಲ, ಮಹೇಶ್ ಎಂಬಾತನ ಮೇಲೆ ಅನುಮಾನ ಇದ್ದರೂ ಅವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದ ಮನೆಯವರು ರತ್ಮಮ್ಮಳ ಅಸ್ಥಿಪಂಜರ ಸಿಕ್ಕಾಗಲು ಪೊಲೀಸರ ಮೇಲೆ ಕಿಡಿಕಾರಿದ್ದರು. ಈಗಲಾದರೂ ಮಹೇಶನನ್ನು ಬಂಧಿಸಿ ಎಂದು ಒತ್ತಡ ಹೇರಿದ್ದರು.
ಮೊದಲು ಮಿಸ್ಸಿಂಗ್ ಪ್ರಕರಣ ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಾಂತಿಗ್ರಾಮ ಪೊಲೀಸರು ಸಿಪಿಐ ಸುರೇಶ್ ನೇತೃತ್ವದಲ್ಲಿ ತನಿಖೆ ನಡೆಸಿದ್ದರು. ಊರ ಸುತ್ತಮುತ್ತ ಇಂಚಿಂಚೂ ಶೋಧ ನಡೆಸಿದ್ದರು. ಎಲ್ಲೆಡೆ ಸುತ್ತಾಡಿ ಮಾಹಿತಿ ಬಗ್ಗೆ ಕಲೆ ಹಾಕಿದ್ದರು. ಮಹೇಶ್ನನ್ನು ಕರೆದೊಯ್ದು ವಿಚಾರಣೆ ಮಾಡಿ, ಆದರೆ ಯಾವುದೇ ಮಾಹಿತಿ ಮಾತ್ರ ಲಭ್ಯವಾಗಲಿಲ್ಲ, ವಿಚಾರಣೆ ದಿಕ್ಕನ್ನೇ ಬದಲಿಸಿದ್ದ ಪೊಲೀಸರು ನಾರಾಯಣಪುರ ಸುತ್ತಮುತ್ತ ಕ್ರಿಮಿನಲ್ ಹಿನ್ನೆಲೆಯ ಯಾರಾದರೂ ಇದ್ದಾರಾ ಎಂದು ಪರಿಶೀಲಗಿಳಿದಾಗ, ರತ್ಮಮ್ಮನ ಮನೆಯವರ ಜೊತೆಗೆ ಇದ್ದ, ಸದಾ ಪ್ರಕರಣದಲ್ಲಿ ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಕಿಡಿಕಾರುತ್ತಿದ್ದ ಮಧುರಾಜ್ ಮೇಲೆ ಅನುಮಾನ ಪಟ್ಟಿದ್ದಾರೆ.
ಮಧುರಾಜ್ ಕೆಲ ತಿಂಗಳ ಹಿಂದೆ ಶಾಂತಿಗ್ರಾಮ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕೆಲಸ ಮಾಡುತ್ತಿದ್ದರ ಮೇಲೆ ಗುಂಡಿನ ದಾಳಿಮಾಡಿದ ಆರೋಪದಲ್ಲಿ ಮೂರನೇ ಆರೋಪಿಯಾಗಿದ್ದ. ಬೇಟೆಯಾಡಲು ಹೋಗಿ ಹಾರಿಸಿದ್ದ ಗುಂಡು ರೈತನಿಗೆ ತಗುಲಿ ಈತ ಜೈಲು ಸೇರಿ ಬೇಲ್ ಮೇಲೆ ಬಿಡುಗಡೆಯಾಗಿದ್ದ, ಯಾವುದಕ್ಕೂ ಇರಲಿ ಎಂದು ಅವನನ್ನೆ ಕರೆತಂದು ವಿಚಾರಣೆ ಮಾಡಿದ್ದಾರೆ. ಅವನ ಮೊಬೈಲ್ ಪರಿಶೀಲನೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ. ರತ್ಮಮ್ಮನನ್ನ ಕೊಂದು ಒಡವೆ ದೋಚಿ ಅದನ್ನ ಅಡವಿಟ್ಟು ತನ್ನ ಕಷ್ಟ ತೀರಿಸಿಕೊಂಡಿದ್ದಾನೆ ಎಂಬುದು ಬಹಿರಂಗಗೊಂಡಿದೆ.
ಪೊಲೀಸರ ತನಿಖೆಯಿಂದ ನಿಜವಾದ ಆರೋಪಿ ಬಂಧನವಾಗಿದ್ದರೆ, ಕೊಲೆ ಆರೋಪ ಹೊತ್ತು ಹಲವುಬಾರಿ ಠಾಣೆ ಮೆಟ್ಟಿಲೇರಿದ್ದ ನಿರಪರಾಧಿ ಮಹೇಶ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮ್ಮದೇ ಜೊತೆಗಿದ್ದು ತಮ್ಮನ್ನೇ ದಿಕ್ಕು ತಪ್ಪಿಸಿ ತಾಯಿ ಕೊಂದ ಪಾಪಿ ವಿರುದ್ದ ಕಠಿಣ ಕ್ರಮವಾಗಲಿ ಎಂದು ಕುಟುಂಬಸ್ತರು ಆಗ್ರಹ ವ್ಯಕ್ತಪಡಿಸಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.