ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು: 5 ದಿನಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಆದಾಯ
ಹಾಸನ ಅಕ್ಟೋಬರ್ 20: ಹಾಸನ ಜಿಲ್ಲೆಯ ಐತಿಹಾಸಿಕ ದೇವಸ್ಥಾನ ಹಾಸನಾಂಬೆ ದೇವರ ದರ್ಶನೋತ್ಸವ ಪ್ರಾರಂಭವಾಗಿ 7 ದಿನಗಳು ಕಳೆದಿದೆ. ಇಂದು 8ನೇ ದಿನದ ದರ್ಶನ ಆರಂಭವಾಗಿದ್ದು, ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ಸುತ್ತ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ.
ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರತಿ ಸಾಲಿನ ಕೆಲವೆಡೆ ನೂಕುನುಗ್ಗಲು, ತಳ್ಳಾಟಗಳು ಸಂಭವಿಸಿದೆ. ನಿನ್ನೆ ಕೆಲ ಸಮಯ ದೇವಾಲಯದ ಮುಂಭಾಗದಲ್ಲಿ ಹೆಚ್ಚಿನ ಜನರು ಆಗಮಿಸಿದ್ದರಿಂದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ವಿಶೇಷ ಘಟನೆಗೆ ಸಾಕ್ಷಿಯಾದ ಹಾಸನಾಂಬೆ ಕ್ಷೇತ್ರ
ನಿನ್ನೆ (ಅಕ್ಟೋಬರ್ 19) ಸರ್ಕಾರಿ ನೌಕರರು ಹಾಗೂ ನ್ಯಾಯಾಂಗ ಇಲಾಖೆಯ ಕುಟುಂಬಸ್ಥರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕಾಗಿ ಭಕ್ತರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಿದ್ದಾರೆ. ಹಾಸನಾಂಬೆ ಭಕ್ತ ಸಾಗರದಲ್ಲಿ ನಿನ್ನೆ (ಅಕ್ಟೋಬರ್ 19) ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ತನ್ನ ವಿಕಲಚೇತನ ಪತ್ನಿಯ ಆಸೆಯನ್ನು ಈಡೇರಿಸಲು ಪತಿ ಹಾಸನಾಂಬೆ ದೇವಾಲಯಕ್ಕೆ ಎತ್ತಿಕೊಂಡು ಬಂದು ದರ್ಶನ ಮಾಡಿಸಿದ ವಿಶೇಷ ಪ್ರಸಂಗ ಕಂಡುಬಂದಿತು.

ಎತ್ತಕೊಂಡು ಬಂದು ಪತ್ನಿಗೆ ದೇವಿಯ ದರ್ಶನ ಮಾಡಿಸಿದ ಪತಿ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಎನ್ನುವವರು ತನ್ನ ಪತ್ನಿ ಗೌರಮ್ಮ ಅವರ ಆಸೆಯನ್ನು ಈಡೇರಿಸಿದ್ದಾರೆ. ವಿಕಲ ಚೇತನ ಪತ್ನಿಯ ಆಸೆಯಂತೆ ನಾಗರಾಜ್ ಗೌರಮ್ಮ ಅವರನ್ನು ಎತ್ತಕೊಂಡು ಹೋಗಿ ಹಾಸನಾಂಬೆಯ ದರ್ಶನ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಕೂಡ ಮಾನವೀಯತೆ ಮೆರೆದಿದ್ದು, ನಾಗರಾಜ್ ಅವರಿಗೆ ನೆರವಾಗಿದ್ದಾರೆ. ಇನ್ನು ಗೌರಮ್ಮ ಅವರ ಭಕ್ತಿ ಹಾಗೂ ನಾಗರಾಜ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ದೇವಿಯ ದರ್ಶನ ಪಡೆದ ವಿವಿಧ ಮಠಾಧೀಶರು
ನಿನ್ನೆ (ಅಕ್ಟೋಬರ್ 19) ಸಹ ಹಲವು ಗಣ್ಯರು, ಮಠಾಧೀಶರು ಕೂಡ ಆಗಮಿಸಿ ಶ್ರೀ ಹಾಸನಾಂಬೆ ದೇವರ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ದರ್ಶನವನ್ನು ಪಡೆದರು. ಕೆ.ಆರ್ ನಗರ ತಾಲೂಕು ಕರ್ಪೂರ ವಳ್ಳಿಜಂಗಮ ಮಠದ ಮಠಾಧೀಶರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೊಳೇನರಸೀಪುರ ತಾಲೂಕು ತೇಜೂರ್ ಮಠದ ಮಠಾಧೀಶರಾದ ಶ್ರೀ ಕಲ್ಯಾಣ ಸ್ವಾಮೀಜಿ, ಮಾಯಗೋಡನಹಳ್ಳಿ ಮಠದ ಮಠಾಧೀಶರಾದ ಶ್ರೀ ಸೋಮಶೇಖರ ಸ್ವಾಮೀಜಿ, ನಿ. ಪ್ರ. ಸ್ವ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಶನಿವಾರಸಂತೆ, ನಿ. ಪ್ರ. ಸ್ವ ಶ್ರೀ ಅಭಿನವ ರೇವಣಸಿದ್ದ ಮಹಾಸ್ವಾಮಿಗಳವರು ಶ್ರೀ ರೇವಣಸಿದ್ದೇಶ್ವರ ಸಂಸ್ಥಾನ ವಿರಕ್ತಮಠ ರಾಯನಾಳ ಹುಬ್ಬಳ್ಳಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಐದು ದಿನಗಳಲ್ಲಿ ಟಿಕೆಟ್ನಿಂದ 60.56 ಲಕ್ಷರೂ ಸಂಗ್ರಹ
ಹಾಸನಾಂಬೆಯ ದರ್ಶನ ಪ್ರಾರಂಭವಾಗಿ ನಿನ್ನೆ (ಅಕ್ಟೋಬರ್ 19) ಕ್ಕೆ 7 ದಿನಗಳಾಗಿದ್ದು, ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ದೇಗುಲಕ್ಕೆ ಲಕ್ಷಗಟ್ಟಲೆ ಆದಾಯ ಹರಿದು ಬರುತ್ತಿದೆ. ಅಕ್ಟೋಬರ್ 14ರಿಂದ ಐದು ದಿನಗಳಲ್ಲಿ 1 ಸಾವಿರ ಮತ್ತು 300 ರೂಪಾಯಿಗಳ ಟಿಕೆಟ್ಗಳು ಮತ್ತು ಲಡ್ಡು ಮಾರಾಟದಿಂದ 60.56 ಲಕ್ಷ ರೂಪಾಯಿ ಹಣ ದೇವಾಲಯಕ್ಕೆ ಸಂಗ್ರಹವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಕ್ಟೋಬರ್ 14ರಂದು 9.88ಲಕ್ಷ ರೂಪಾಯಿ, ಅಕ್ಟೋಬರ್ 15ರಂದು 9.01 ಲಕ್ಷ ರೂಪಾಯಿ, ಅಕ್ಟೋಬರ್ 16 ರಂದು 23.88 ಲಕ್ಷ ರೂಪಾಯಿ, ಅಕ್ಟೋಬರ್ 17 ರಂದ 7.81 ಲಕ್ಷ ರೂಪಾಯಿ , ಅಕ್ಟೋಬರ್ 18ರಂದು 9.96 ಲಕ್ಷ ರೂಪಾಯಿ ಕೇವಲ ಟಿಕೆಟ್ ಮತ್ತು ಲಡ್ಡು ಮಾರಾಟದಿಂದ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ರಜೆ ಇರುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಹಾಸನಾಂಬೆ ದೇವಾಲಯಕ್ಕೆ ಇನ್ನೂ ಲಕ್ಷ ಲಕ್ಷಗಟ್ಟಲೆ ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications