ಹಾಸನದಲ್ಲಿ ದೇವೇಗೌಡರ ವಿರುದ್ಧ ಬಿಜೆಪಿಯಿಂದ ಸಿ.ಟಿ.ರವಿ ಕಣಕ್ಕೆ?
ಹಾಸನ, ನವೆಂಬರ್ 23 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಪೆಟ್ಟು ಕೊಡಬೇಕು ಎಂದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಸೋಲಿಸಬೇಕು. ಹೌದು, ಕರ್ನಾಟಕ ಬಿಜೆಪಿ 2019ರ ಚುನಾವಣೆಯಲ್ಲಿ ಗೌಡರನ್ನು ಕಟ್ಟಿಹಾಕಲು ತಂತ್ರ ರೂಪಿಸುತ್ತಿದೆ.
ಹಾಸನ ಜೆಡಿಎಸ್ ಭದ್ರಕೋಟೆ. ಈ ಲೋಕಸಭಾ ಕ್ಷೇತ್ರದಿಂದ ದೇವೇಗೌಡ ಅವರು 6 ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. 5 ಬಾರಿ ಗೆಲುವು ಸಾಧಿಸಿದ್ದಾರೆ. 2019ರ ಚುನಾವಣೆಯೇ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ.
ಕರ್ನಾಟಕ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಸೋಲಿಸಿ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಪೆಟ್ಟು ನೀಡಬೇಕು ಮತ್ತು ರಾಷ್ಟ್ರಮಟ್ಟದಲ್ಲಿ ದೇವೇಗೌಡರಿಗೆ ಮುಜುಗರ ಉಂಟು ಮಾಡಬೇಕು ಎಂದು ತಂತ್ರ ರೂಪಿಸುತ್ತಿದೆ. ಇದಕ್ಕಾಗಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ.
2014ರ ಲೋಕಸಭಾ ಚುನಾವಣೆಯಲ್ಲಿಯೇ ಹಾಸನದಲ್ಲಿ ದೇವೇಗೌಡರ ಗೆಲುವಿನ ಅಂತರ ಕಡಿಮೆಯಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಎ.ಮಂಜು ಕಣಕ್ಕಿಳಿದಿದ್ದರು. ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೂ ದೇವೇಗೌಡರಿಗೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.....

ಕಾಂಗ್ರೆಸ್-ಜೆಡಿಎಸ್ ವೈರತ್ವ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. ಆದರೆ, ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರವಾದ ಅಸಮಾಧಾನವಿದೆ. ಮಾಜಿ ಸಚಿವ ಎ.ಮಂಜು ಅವರು ದೇವೇಗೌಡರ ಕುಟುಂಬದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇದನ್ನು ಬಳಸಿಕೊಂಡು ದೇವೇಗೌಡರನ್ನು ಸೋಲಿಸುವುದು ಬಿಜೆಪಿಯ ತಂತ್ರವಾಗಿದೆ.

ಸಿ.ಟಿ.ರವಿ ಕಣಕ್ಕೆ?
ಹಾಸನ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಸಿ.ಟಿ.ರವಿ ಅವರನ್ನು ಈಗಾಗಲೇ ಬಿಜೆಪಿ ಹಾಸನ ಕ್ಷೇತ್ರದ ಸಂಚಾಲಕರನ್ನಾಗಿ ನೇಮಿಸಿದೆ.
2014ರ ಚುನಾವಣೆಯಲ್ಲಿ ಸಿ.ಎಚ್.ವಿಜಯಶಂಕರ್ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆದರೆ, 3ನೇ ಸ್ಥಾನ ಪಡೆದಿದ್ದರು. ಈ ಬಾರಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ, ದೇವೇಗೌಡರನ್ನು ಸೋಲಿಸಿ ಸಮ್ಮಿಶ್ರ ಸರ್ಕಾರಕ್ಕೆ ಮತ್ತು ದೇವೇಗೌಡರಿಗೆ ಮುಜುಗರ ಉಂಟು ಮಾಡಬೇಕು ಎಂಬುದು ಬಿಜೆಪಿ ತಂತ್ರ.

ದೇವೇಗೌಡರು ಕಣಕ್ಕಿಳಿಯಲಿದ್ದಾರಾ?
ಇದು ನನ್ನ ಕೊನೆ ಚುನಾವಣೆ ಎಂದು ಎಚ್.ಡಿ.ದೇವೇಗೌಡರು ಈಗಾಲಗೇ ಘೋಷಣೆ ಮಾಡಿದ್ದಾರೆ. ಆದರೆ, ಅವರು ಹಾಸನ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರಾ? ಎಂದು ಕಾದು ನೋಡಬೇಕಿದೆ. ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಸ್ಪರ್ಧಿಸಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ದೇವೇಗೌಡರು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ಗೆಲುವಿನ ಅಂತರ ಕಡಿಮೆಯಾಗುತ್ತಿದೆ
ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು 6 ಬಾರಿ ಕಣಕ್ಕಿಳಿದಿದ್ದು 5 ಬಾರಿಗೆ ಗೆಲವು ಸಾಧಿಸಿದ್ದಾರೆ. 1991ರಲ್ಲಿ ಮೊದಲ ಬಾರಿಗೆ ಅವರು 31191 ಮತಗಳ ಅಂತರದ ಜಯ ಕಂಡಿದ್ದರು. 1998ರಲ್ಲಿ ಅಂತರ 31 ಸಾವಿರಕ್ಕೆ ಏರಿತ್ತು. 2009ರಲ್ಲಿ 2.91 ಲಕ್ಷದಿಂದ ಗೆದ್ದರು. 2014ರ ಚುನಾವಣೆಯಲ್ಲಿ ಗೆಲುವಿನ ಅಂತರ 1 ಲಕ್ಷಕ್ಕೆ ಇಳಿದಿದೆ.

2014ರ ಫಲಿತಾಂಶ
2014ರ ಚುನಾವಣೆಯಲ್ಲಿ ದೇವೇಗೌಡರು 509841 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ನಿಂದ ಎ.ಮಂಜು ಅವರು ಕಣಕ್ಕಿಳಿದಿದ್ದರು ಅವರು 409379 ಮತ ಪಡೆದಿದ್ದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 165688 ಮತ ಪಡೆದಿದ್ದರು.












Click it and Unblock the Notifications