ಹಾಸನದ ಕಲ್ಯಾಣಿ ಪುನಶ್ಚೇತನ ಕಾರ್ಯ ರಾಜ್ಯದಾದ್ಯಂತ ವ್ಯಾಪಿಸಲಿ!
ಹಾಸನ, ಜುಲೈ 01 : ಇತ್ತೀಚೆಗಿನ ವರ್ಷಗಳಲ್ಲಿ ವಾಡಿಕೆಯ ಮಳೆಯಾಗುತ್ತಿಲ್ಲ. ಪರಿಣಾಮ ಅಂತರ್ಜಲ ಮಟ್ಟ ಕುಸಿದು ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇವತ್ತು ಅಂತರ್ಜಲ ಇಷ್ಟೊಂದು ಕುಸಿಯಲು ಕಾರಣವೇನು ಎಂಬುದರ ಬಗ್ಗೆ ಸರ್ಕಾರವಾಗಲೀ, ಜನರಾಗಲೀ ತಲೆಕೆಡಿಸಿಕೊಳ್ಳುತ್ತಿಲ್ಲ.
ಅಷ್ಟೇ ಅಲ್ಲ ಹಿಂದಿನ ಕಾಲದವರು ಅಂತರ್ಜಲವನ್ನು ಹಿಡಿದಿಡುವ ಕಾರಣಕ್ಕಾಗಿ ಊರು, ಕೇರಿಗಳಲ್ಲಿ ನಿರ್ಮಿಸಿದ್ದ ಕೆರೆ, ಬಾವಿ, ಕಲ್ಯಾಣಿಗಳನ್ನು ರಕ್ಷಿಸುವ ಕಾರ್ಯವನ್ನು ನಾವು ಮಾಡುತ್ತಿಲ್ಲ. ಇದರ ಪರಿಣಾಮವೇ ಮಳೆ ಬಂದರೂ ನೀರು ಭೂಮಿಯನ್ನು ಸೇರದೆ ಹರಿದು ಹೋಗುತ್ತಿದೆ ಇದರಿಂದ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ಯೂಟ್, ಕ್ಯೂಟ್! ಚಕ್ಕರ್ ಹಾಕೋ ಮಗೂನಾ ಸ್ಕೂಲಿಗೆ ಕಳಿಸೋದು ಹೀಗೆ!
ಇವತ್ತು ಪಟ್ಟಣ ಪ್ರದೇಶಗಳಲ್ಲಿದ್ದ ಬಹುತೇಕ ಕೆರೆಗಳು ನಿವೇಶನಗಳಾಗಿ, ಬಡಾವಣೆಗಳಾಗಿ ಮಾರ್ಪಟ್ಟಿವೆ. ಇರುವ ಕೆರೆ ಜಾಗಕ್ಕೆ ಮಣ್ಣು ಕಲ್ಲು ಸುರಿದು ಮುಚ್ಚುವ ಪ್ರಯತ್ನ ಮಾಡುತ್ತಿದ್ದೇವೆಯೇ ಹೊರತು ಅದರ ಹೂಳು ತೆಗೆದು ನೀರು ಸಂಗ್ರಹವಾಗಲು ಅನುವು ಮಾಡಿಕೊಡುತ್ತಿಲ್ಲ.
ಇನ್ನು ಗ್ರಾಮಗಳಲ್ಲಿದ್ದ ತೆರೆದ ಬಾವಿಗಳನ್ನು ಮುಚ್ಚಲಾಗಿದೆ. ದೇವಸ್ಥಾನಗಳ ಮುಂದೆ ಇದ್ದ ಕಲ್ಯಾಣಿಗಳು ಪಾಳು ಬಿದ್ದಿವೆ. ಅವುಗಳನ್ನು ಶುಚಿಗೊಳಿಸಿ ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಕೈ ಹಾಕುತ್ತಿಲ್ಲ. ಹಿಂದಿನ ಕಾಲದವರು ಏನೇ ಮಾಡಿದ್ದರೂ ಅದು ಅನುಭವದಿಂದ ಮಾಡಿರುತ್ತಿದ್ದರು. ಜತೆಗೆ ಪ್ರಕೃತಿಗೆ ಪೂರಕವಾಗಿರುತ್ತಿದ್ದವು.
106 ಅಡಿಗೆ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ಹಾಸನ ಜಿಲ್ಲೆಯಾದ್ಯಂತ ಹಲವಾರು ಕಲ್ಯಾಣಿಗಳಿದ್ದು ಅವುಗಳಲ್ಲಿ ಬಹುತೇಕ ಕಲ್ಯಾಣಿಗಳು ಪಾಳು ಬಿದ್ದಿವೆ. ಇಂತಹ ಕಲ್ಯಾಣಿಗಳ ಪುನಶ್ಚೇತನಕ್ಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ.
ನೀರು ಸಂಗ್ರಹವಾಗುತ್ತಿತ್ತು
ದೇವಸ್ಥಾನಗಳ ಬಳಿ ಕಲ್ಯಾಣಿ, ಗ್ರಾಮದಲ್ಲೊಂದು ಕೆರೆ, ಕೇರಿಗೊಂದು ಬಾವಿ ಹೀಗೆ ಇರುತ್ತಿದ್ದವು. ಮಳೆಗಾಲದಲ್ಲಿ ಮಳೆ ಬಂದಾಗ ನೀರು ಅದರಲ್ಲಿ ಸಂಗ್ರಹವಾಗುತ್ತಿತ್ತಲ್ಲದೆ, ಅದು ಜನಜಾನುವಾರುಗಳ ಉಪಯೋಗಕ್ಕೆ ಬರುವುದಲ್ಲದೆ, ಅಂತರ್ಜಲವನ್ನು ಕೂಡ ಹಿಡಿದಿಡುತ್ತಿತ್ತು. ಆದರೆ, ಇತ್ತೀಚೆಗೆ ಅವುಗಳನ್ನು ನಾವು ಅಭಿವೃದ್ಧಿಗೊಳಿಸದ ಕಾರಣದಿಂದ ಅವು ಅಸ್ಥಿತ್ವ ಕಳೆದುಕೊಂಡಿದ್ದು, ಇದರಿಂದ ಅಂತರ್ಜಲದ ಸಮಸ್ಯೆ ಎದುರಾಗುತ್ತಿದೆ. ಜತೆಗೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಸನದಲ್ಲಿ ಶ್ಲಾಘನೀಯ ಕಾರ್ಯ
ಭವಿಷ್ಯದ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆಯನ್ನು ಅರಿತು ಹಾಸನದಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳನ್ನು ಕೆರೆ, ಕಲ್ಯಾಣಿಗಳನ್ನು ಶ್ರಮದಾನಗಳ ಮೂಲಕ ಸ್ವಚ್ಛಗೊಳಿಸುವ ಕಾಯಕಕ್ಕೆ ಮುಂದಾಗಿದ್ದು, ಇತರೆ ಜಿಲ್ಲೆಗಳಿಗೆ ಇವರ ಕಾರ್ಯ ವೈಖರಿ ಮಾದರಿಯಾಗಿದೆ. ಹಾಸನ ಜಿಲ್ಲೆಯಾದ್ಯಂತ ಹಲವಾರು ಕಲ್ಯಾಣಿಗಳಿದ್ದು ಅವುಗಳಲ್ಲಿ ಬಹುತೇಕ ಕಲ್ಯಾಣಿಗಳು ಪಾಳು ಬಿದ್ದಿವೆ. ಇಂತಹ ಕಲ್ಯಾಣಿಗಳ ಪುನಶ್ಚೇತನಕ್ಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ.
ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯ
ಪ್ರಸಕ್ತವರ್ಷ ಬಹುಬೇಗ ಮುಂಗಾರು ಆರಂಭವಾಗಿದೆ ಮತ್ತು ಆಶಾದಾಯಕವಾಗಿರುತ್ತದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆಯಿಂದ ಪಡೆದ ಹಸಿರು ಭೂಮಿ ಪ್ರತಿಷ್ಠಾನದ ಸದಸ್ಯರು ಬೇಸಿಗೆಯಲ್ಲಿಯೇ ತಮ್ಮ ಕಾಯಕವನ್ನು ಆರಂಭಿಸಿದರು. ವಾರಕ್ಕೊಮ್ಮೆ ಎಲ್ಲರೂ ಸೇರಿ ಜಿಲ್ಲೆಯ ಯಾವುದಾದರೊಂದು ತಾಲೂಕಿಗೆ ತೆರಳಿ ಗ್ರಾಮಗಳಲ್ಲಿರುವ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈ ಹಾಕಿದರು. ಇವರ ಕಾರ್ಯ ನೋಡಿ ಸ್ಥಳೀಯರು, ಸಂಘ ಸಂಸ್ಥೆಗಳು ಕೈ ಜೋಡಿಸಿದರು. ಹೀಗಾಗಿ ಇವತ್ತು ಹಲವು ಕಲ್ಯಾಣಿ, ಕೆರೆಗಳು ಪುನಶ್ಚೇತನ ಕಾಣಲು ಸಾಧ್ಯವಾಗಿದೆ.
ಶ್ರಮದಾನದ ಮೂಲಕ ಸ್ವಚ್ಚತೆ
ಈ ನಡುವೆ ಏಕಲವ್ಯ ರೋವರ್ ಮುಕ್ತದಳ ಕೂಡ ಕಲ್ಯಾಣಿಗಳ ಪುನಶ್ಚೇತನಕ್ಕೆ ಮುಂದಾಗಿದ್ದು, ಹೊಳೆನರಸೀಪುರ ತಾಲೂಕು ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವನೂರಿನಲ್ಲಿ ಪಾಳುಬಿದ್ದಿದ್ದ ಪಂಚಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸಿದ್ದಾರೆ. ಹಿಂದಿನ ಕಾಲದಲ್ಲಿ ಈ ಪಂಚಕಲ್ಯಾಣಿಗಳಿಂದ ಜಲವನ್ನು ಕೊಂಡೊಯ್ದು ಪಂಚಲಿಂಗೇಶ್ವರ ದೇವರಿಗೆ ಜಲಾಭಿಷೇಕ ಮಾಡುತ್ತಿದ್ದರೆಂಬ ಪ್ರತಿತಿಯಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಕಲ್ಯಾಣಿಗಳತ್ತ ಸ್ಥಳೀಯ ಆಡಳಿತ ಮತ್ತು ಜನ ಗಮನಹರಿಸದ ಕಾರಣದಿಂದಾಗಿ ಪಾಳುಬಿದ್ದಿದ್ದವು. ಈಗ ಪಾಳುಬಿದ್ದಿದ್ದ ಪಂಚಕಲ್ಯಾಣಿಗಳನ್ನು ಏಕಲವ್ಯ ರೋವರ್ ಮುಕ್ತದಳದ ಸುಮಾರು 100ಕ್ಕೂ ಹೆಚ್ಚು ರೋವರ್ಸ್ ರೇಂಜರ್ಸ್ ಮತ್ತು ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಿದ್ದಾರೆ.
ಮಳೆ ಬಂದು ಕಲ್ಯಾಣಿ ತುಂಬಲಿ
ಈ ಬಾರಿ ಮಳೆಯೂ ಉತ್ತಮವಾಗಿರುವುದರಿಂದ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿರುವುದು ಸಾರ್ಥಕವಾಗಿದೆ. ಉತ್ತಮ ಮಳೆಯಾಗಿ ಕಲ್ಯಾಣಿಗಳಲ್ಲಿ ನೀರು ತುಂಬಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಹಾಸನದಲ್ಲಿ ಆರಂಭವಾಗಿರುವ ಈ ಸಾಮಾಜಿಕ ಕಾರ್ಯ ಇತರ ಜಿಲ್ಲೆಗಳಿಗೂ ವ್ಯಾಪಿಸುವಂತಾಗಲಿ.