ಜೆಡಿಎಸ್ ಒಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಾರ್ಟಿ: ಬೇಲೂರಿನಲ್ಲಿ ಮೋದಿ ವಾಗ್ದಾಳಿ
ಹಾಸನ, ಏಪ್ರಿಲ್, 30: ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಪ್ರಚಾರದ ಸುರಿಮಳೆಯನ್ನೇ ಹರಿಸಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳ ಅಬ್ಬರದ ಪ್ರಚಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯರು ಇಂದು ಹಾಸನ ಜಿಲ್ಲೆಯ ಬೇಲೂರಿನಲ್ಲೂ ಪ್ರಚಾರ ಮುಂದುವರೆಸಿದ್ದಾರೆ. ಅಲ್ಲದೆ ಅವರು ಜೆಡಿಎಸ್ ವಿರುದ್ಧವೂ ಕೆಂಡಕಾರಿದ್ದಾರೆ. ಹಾಗಾದರೆ ಮೋದಿಯವರು ಯಾವ ವಿಚಾರಕ್ಕೆ ಜೆಡಿಎಸ್ಗೆ ತರಾಟೆ ತೆಗೆದುಕೊಂಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಜೆಡಿಎಸ್ ಒಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಆಗಿದೆ. ಈ ಪಕ್ಷದ ಒಂದು ದೊಡ್ಡ ವ್ಯಕ್ತಿತ್ವ ಕೇವಲ ತಮ್ಮ ಕುಟುಂಬದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದರು.

ಪ್ರತಿಭಾವಂತರನ್ನು ಬಿಜೆಪಿ ಸರ್ಕಾರ ಗೌರವಿಸುತ್ತದೆ. ಕರ್ನಾಟಕದ ಭವ್ಯ ಸಂಸ್ಕೃತಿಯ ಬಗ್ಗೆ ಕಾಂಗ್ರೆಸ್ಗೆ ಕಾಳಜಿಯಿಲ್ಲ. ಆದರೆ ಬಿಜೆಪಿ ಸರ್ಕಾರ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿದೆ. ಮೇ 10ರಂದು ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
ಇನ್ನು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ರಸಗೊಬ್ಬರದಲ್ಲೂ ಭ್ರಷ್ಟಾಚಾರ ಮಾಡಿ ರೈತರಿಗೆ ಕಾಂಗ್ರೆಸ್ ನಷ್ಟ ಮಾಡಿತ್ತು. ಆದರೆ ನಾವು ರೈತರ ಹಿತಾಸಕ್ತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯೂರಿಯಾ ಗೊಬ್ಬರ ಕೇವಲ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದ್ದೇವೆ. ಅಲ್ಲದೆ ನ್ಯಾನೋ ಯೂರಿಯಾ ಸದ್ಭಳಕೆಯಿಂದ ಹಣ ರೈತರಿಗೆ ಹೆಚ್ಚು ಉಳಿತಾಯ ಆಗುತ್ತದೆ ಎಂದು ಒತ್ತಿ ಹೇಳಿದರು.
ಅಲ್ಲದೆ ಕರ್ನಾಟಕದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಹೆಚ್ಚಿಸಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತ ಆಗುತ್ತದೆ. ಕರ್ನಾಟಕವನ್ನು ನಂಬರ್ 1 ಮಾಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.












Click it and Unblock the Notifications