ಸರ್ಕಾರದಲ್ಲಿ ನಡೆದಿರುವ ಕಮಿಷನ್ ಹಗರಣ ಬಯಲಿಗೆ ತರುತ್ತೇನೆ: ಹಾಸನದಲ್ಲಿ ಕುಮಾರಸ್ವಾಮಿ ಗುಡುಗು
ಹಾಸನ, ಸೆಪ್ಟೆಂಬರ್, 13: ಈ ಸರ್ಕಾರದಲ್ಲಿ ನಡೆದಿರುವ ದೊಡ್ಡ ಹಗರಣವನ್ನು ಬಯಲಿಗೆ ತರಲಾಗುವುದು. ಇನ್ನು ಶೇಕಡಾ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಸದನದ ಕಲಾಪದಲ್ಲಿ ಇಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಸನದಲ್ಲಿ ಎಚ್ಚರಿಕೆ ನೀಡಿದರು.
ನಗರದ ಹೆಚ್.ಪಿ. ಸ್ವರೂಪ್ ನಿವಾಸದಲ್ಲಿ ಮಾತನಾಡಿ ಅವರು, "ಕಳೆದ 2 ತಿಂಗಳಿನಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ ಅತಿವೃಷ್ಠಿ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಅತಿವೃಷ್ಠಿ ಸಮಯದಲ್ಲಿ ಬಿಜೆಪಿ ಸರ್ಕಾರದ ಸಚಿವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ನಾಡಿನ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ತಮ್ಮ ತಾಕತ್ತನ್ನು ತೋರಿಸಬೇಕು. ಇದನ್ನು ಹೊರತುಪಡಿಸಿ ಜನಸ್ಪಂದನ ಕಾರ್ಯಕ್ರಮ ವೇದಿಕೆಯ ಮೇಲೆ ನಡೆದಿರುವ ನೃತ್ಯಗಳು ಅವರ ಸಂಸ್ಕೃತಿ ಬಗ್ಗೆ ಹೇಳುತ್ತವೆ. ಜನಸ್ಪಂದನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ," ಎಂದು ಹರಿಹಾಯ್ದರು.
ಶೇ. 40% ಕಮಿಷನ್ ಬಗ್ಗೆ ಕಲಾಪದಲ್ಲಿ ಚರ್ಚೆ:
ಶೇಕಡಾ 40% ಕಮಿಷನ್ ಬಗ್ಗೆ ಚರ್ಚೆಯನ್ನು ಸದನದ ಕಲಾಪದಲ್ಲಿ ಮಾಡುತ್ತೇನೆ. "ದಾಖಲೆ ಸಂಗ್ರಹ ಮಾಡುವ ಸಮಯದಲ್ಲಿ ಸರ್ಕಾರದ ಒಬ್ಬ ಮಂತ್ರಿ ಅಕ್ರಮದ ದಾಖಲಾತಿ ಫೈಲ್ ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಂಡಿದ್ದಾನೆ." ಈ ಸರ್ಕಾರದಲ್ಲಿ ನಡೆದಿರುವ ದೊಡ್ಡ ಹಗರಣವನ್ನು ಕಲಾಪದಲ್ಲಿ ಬಯಲಿಗೆ ತರುತ್ತೇನೆ. 2008-09ರಲ್ಲಿ ಅಂದಿನ ಮುಖ್ಯಮಂತ್ರಿಗಳು ಭಾಷಣ ಮಾಡುವಾಗ ಅಪ್ಪ ಮಕ್ಕಳನ್ನು ಮುಗಿಸುವುದೆ ಗುರಿ ಎಂದು ಶಪತ ಮಾಡಿದ್ದರು. ಅದನ್ನು ಸವಾಲಾಗಿ ಸ್ವೀಕಾರ ಮಾಡಿ ಅಂದಿನ ಸರ್ಕಾರದ ಭ್ರಷ್ಟಾಚಾರದ ದಾಖಲೆ ಸಂಗ್ರಹಿಸದೆ ಆ ಪ್ರಕರಣ ಜಾತಿಯ ವ್ಯವಸ್ಥೆಯಲ್ಲಿ ಎದುರಿಸಿರು ಎಂದು ಗುಡುಗಿದರು.

"ಹಿಂದಿ ದಿವಸದ ಆಚರಣೆ ಬಗ್ಗೆ ವಿರೋಧಿಸುತ್ತೇನೆ"
ಹಿಂದಿ ದಿವಸದ ಆಚರಣೆ ಬಗ್ಗೆ ನನ್ನ ವಿರೋಧ ಇದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆಗೆ ಆದರದ್ದೇ ಆದ ಗೌರವ ಇದೆ. ಜನರ ತೆರಿಗೆ ಹಣವನ್ನು ಹಿಂದಿ ದಿವಸ ಆಚರಣೆ ಮಾಡಲು ಮತ್ತು ಹೈಕಮಾಂಡ್ ಮನವೊಲಿಸಲು ಮಾತ್ರ ಬಳಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು. ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವಾಗಿ ಯಾರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ ಎಂದು ಸುಮ್ಮನಾದರು.
ಹಾಸನದಲ್ಲಿ ದಿವಂಗತ ಹೆಚ್.ಎಸ್.ಪ್ರಕಾಶ್ ಹುಟ್ಟುಹಬ್ಬ
ಹಾಸನ ನಗರದಲ್ಲಿ ದಿವಂಗತ ಹೆಚ್.ಎಸ್. ಪ್ರಕಾಶ್ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ಇದು ಅತ್ಯಂತ ಅದ್ಭುತ ಕಾರ್ಯಕ್ರಮ ಆಗಿದೆ. ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಇದೆ ಎನ್ನುವುದು ಇದೆ ಪ್ರಮುಖ ಸಂದೇಶ ಆಗಿದೆ. 120 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚಿಸಿದ್ದೇನೆ. ಸುಮಾರು 20-30 ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದ್ದು, ಅದರ ಬಗ್ಗೆ ಸಭೆ ಕರೆದು ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಸರ್ವೇ ಮಾಡಿಸಿದ್ದು, ನಾನು ಮಾಡಿರುವ ಸರ್ವೇ ರಿಪೋರ್ಟ್ ನೋಡಿ ನಂತರ ಅಭ್ಯರ್ಥಿ ಆಯ್ಕೆಯನ್ನು ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ನಾನೇ ಮೊದಲು ಬಿಡುಗಡೆ ಮಾಡುತ್ತೇನೆ ಎಂದರು.

ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಕುರಿತು ಹಿರಿಯರ ಜೊತೆ ಚರ್ಚೆ
ಇನ್ನು ಹಾಸನ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಕುರಿತು ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಮತ್ತು ನಾನು ಎಲ್ಲಾರು ಕುಳಿತು ಚರ್ಚೆ ಮಾಡಿ ತಿರ್ಮಾನ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹೆಚ್.ಪಿ. ಸ್ವರೂಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications