ಹಾಸನ, ಚಿಕ್ಕಮಗಳೂರಿನಲ್ಲಿ ಹಿಜಾಬ್ ಕಿರಿಕ್; ಕೇಸರಿ ಶಾಲು ಧರಿಸಿ ಬಂದವರನ್ನು ತಡೆದ ಪ್ರಾಂಶುಪಾಲ
ಹಾಸನ, ಫೆಬ್ರವರಿ 8: ಹಾಸನದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಬುರ್ಕಾ- ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಹೊರಗೆ ಕಳುಹಿಸಿದ್ದಾರೆ.
ಹಾಸನದಲ್ಲಿ ಹಿಜಾಬ್ಗೆ ಬೆಂಬಲಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆದಿತ್ತು. ಇಂದು ಕೂಡ ಹಿಜಾಬ್ ಪ್ರಕರಣ ತಾರಕ್ಕೇರಿದ್ದು, ಕೇಸರಿ ಶಾಲು, ಬುರ್ಕಾ, ನೀಲಿ ಶಾಲುಗಳು ಸದ್ದು ಮಾಡಿವೆ. ಇನ್ನು ಹಾಸನ ಜಿಲ್ಲೆ ಸಕಲೇಶಪುರ ಕುಡುಗರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಾಲೇಜು ಗೇಟ್ ಬಳಿಯೇ ತಡೆದು ಕಾಲೇಜಿಗೆ ಬರದಂತೆ ಸೂಚನೆ ನೀಡಿದ್ದಾರೆ.
ಹಿಜಾಬ್ ಪ್ರಕರಣ ತಾರಕ್ಕೇರಿದ ಸಂಬಂಧ ಹಾಸನ ಹೋಂ ಸೈನ್ಸ್ ಕಾಲೇಜು ಪ್ರಿನ್ಸಿಪಾಲ್ ಲೀಲಾವತಿ ಮಾತನಾಡಿ, ಪದವಿ ಶಿಕ್ಷಣ ಇಲಾಖೆ ಜೆಡಿ ನಿರ್ದೇಶನಕ್ಕೆ ಕಾಯುತ್ತಿದ್ದೇವೆ, ಅವರ ನಿರ್ದೇಶನ ನಂತರ ಹಿಜಾಬ್, ಕೇಸರಿ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ, ನ್ಯಾಯಾಲಯದ ಆದೇಶಕ್ಕೂ ಕಾಯುತ್ತಿದ್ದೇವೆ ಎಂದರು.

ಸದ್ಯ ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿನ ಆವರಣಕ್ಕೆ ಬಾರದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದೇನೆ, ಕಾಲೇಜಿನ ಸಮವಸ್ತ್ರದಲ್ಲಿಯೇ ಬರಲು ವಿದ್ಯಾರ್ಥಿಗಳಿಗೆ ಹೇಳಿದ್ದೇನೆ, ಕಾಲೇಜಿನಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇನ್ನು ಹಿಜಾಬ್ ಧರಿಸಿ ಬಂದಿದ್ದ ಮೂವರು ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ್ದೇನೆ. ಪ್ರತಿಭಟನೆ ಭಾಗವಹಿಸುವವರು ಸ್ವಇಚ್ಚೆಯಿಂದ ಭಾಗವಹಿಸಿದರೆ ಅಭ್ಯಂತರವಿಲ್ಲ, ಬಲವಂತವಾಗಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳನ್ನು ಕರೆದೊಯ್ಯಲು ಅವಕಾಶವಿಲ್ಲ ಎಂದು ತಿಳಿಸಿದರು.
ಹಿಜಬ್-ಕೇಸರಿ-ನೀಲಿ ಶಾಲು ವಿವಾದ; ಪ್ರತಿಭಟನೆ
ಕೇಸರಿ ಶಾಲು ಧರಿಸಿದ ನೂರಾರು ವಿದ್ಯಾರ್ಥಿಗಳಿಂದ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಿಂದ ಪ್ರತಿಭಟನಾಕಾರರು ಮೆರವಣಿಗೆ ಹೊರಟರು.

ಹೇಮಾವತಿ ಪ್ರತಿಮೆ ಬಳಿ ಕೆಲಕಾಲ ಧರಣಿ ನಡೆಸಿದ ವಿದ್ಯಾರ್ಥಿಗಳು, ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಕಾಲ ಧರಣಿ ನಡೆಸಿದರು. ಒಂದೇ ಭಾರತ, ಜೈ ಶ್ರೀರಾಮ್, ಶಿವಾಜಿ ಮಹಾರಾಜ್ಕೀ ಜೈ ಎಂದು ಘೋಷಣೆ ಕೂಗಿದರು.
ಚಿಕ್ಕಮಗಳೂರಿನಲ್ಲಿ ಕೇಸರಿ ಜೊತೆ ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು
ಕಾಫಿನಾಡು ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಜೊತೆ ನೀಲಿ ಶಾಲನ್ನೂ ಧರಿಸಿ ಆಗಮಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಲ್ಲರೂ ಒಂದೇ ಎಂದಿದ್ದರು, ನಾವೆಲ್ಲಾ ಒಂದೇ. ಕಾಲೇಜಿನಲ್ಲಿ ಹಿಜಾಬ್ ತೆಗೆಯೋವರೆಗೂ, ಕೇಸರಿ ಶಾಲು ತೆಗೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿದೆ. ಹಿಜಾಬ್ ತೆಗೆದರಷ್ಟೆ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ತರಗತಿಯಲ್ಲಿ ಕೂರುವಂತೆ ಸೂಚನೆ ನೀಡಲಾಗಿದೆ. ಹಿಜಾಬ್ ತೆಗೆಯಲ್ಲ ಎಂದು ಆರು ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿರು.

ಕಾಂಪೌಂಡ್ ಹಾರಿ ಕಾಲೇಜು ಪ್ರವೇಶಿಸಿದ ವಿದ್ಯಾರ್ಥಿಗಳು
ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಣೆ ಮಾಡಿದ ಹಿನ್ನೆಲೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಕಾಂಪೌಂಡ್ ಹಾರಿ ಕ್ಯಾಂಪಸ್ ಒಳಗೆ ಪ್ರವೇಶ ಮಾಡಿದ್ದರು. ಇದನ್ನು ಕಂಡು ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಕಕ್ಕಾಬಿಕ್ಕಿಯಾದರು.
ಏಕಾಏಕಿ ಕಾಲೇಜು ಕ್ಯಾಂಪಸ್ ಒಳಗೆ ಪ್ರವೇಶಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ತರಗತಿಗೆ ಅವಕಾಶ ನೀಡುವಂತೆ ಪಟ್ಟುಹಿಡಿದ ವಿದ್ಯಾರ್ಥಿಗಳು, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಾ ನಿರತರನ್ನು ಕಾಲೇಜು ಪ್ರಾಂಶುಪಾಲರು ಮನವೊಲಿಸಿ ಕೇಸರಿ ಶಾಲು ತೆಗೆದು ತರಗತಿಗೆ ತೆರಳುವಂತೆ ಸೂಚನೆ ನೀಡಿದ್ದರು.












Click it and Unblock the Notifications