ಬೆಳೆದ ಮೇಲೆ ಮೇವು ಸಿಕ್ಕಲ್ಲಿಗೆ ಹೋಗುತ್ತಾರೆ: ಅನರ್ಹ ಶಾಸಕರ ವಿರುದ್ಧ ರೇವಣ್ಣ ಕಿಡಿ

Recommended Video

      ತಿಂದು, ಉಂಡು, ಬೆಳೆದ ಮೇಲೆ ಬೇರೆ ಕಡೆ ಮೇವು ತಿನ್ನೋಕೆ ಹೋಗ್ತವೆ ಪಾಪ..? | hd revanna

      ಹಾಸನ, ಸೆಪ್ಟೆಂಬರ್ 6: ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಬೆಳೆದು ಶಾಸಕರಾಗಿ ಆಯ್ಕೆಯಾದವರು ಬಳಿಕ ಬಿಜೆಪಿಯತ್ತ ಹೊರಟಿರುವ ನಾಯಕರ ವಿರುದ್ಧ ಮಾಜಿ ಸಚಿವ ಎಚ್ ಡಿ ರೇವಣ್ಣ ಕಿಡಿಕಾರಿದರು.

      ಬೇಲೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಜೆಡಿಎಸ್ ಪಕ್ಷ ಎಂದರೆ ರಾಜಕೀಯ ನಾಯಕರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಅವರು ಬೆಳೆದ ಮೇಲೆ ಎಲ್ಲಿ ಮೇವು ಸಿಗುತ್ತದೆಯೋ ಅಲ್ಲಿಗೆ ಹೋಗುತ್ತವೆ' ಎಂದು ವ್ಯಂಗ್ಯವಾಡಿದರು.

      'ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಚೆನ್ನಾಗಿ ತಿಂದು ಉಂಡು ಬೆಳೆದ ಶಾಸಕರನ್ನು ಸೆಳೆದುಕೊಂಡು ಬಿಜೆಪಿ ನಾಯಕರು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸಾವಿರಾರು ಕೋಟಿ ರೂಪಾಯಿ ಚೆಲ್ಲಿದ್ದಾರೆ. ಆದರೆ ನಮ್ಮ ಕೆಲಸಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲಸದ ವೇಗ ನಿಧಾನವಾಗಬಹುದು. ನಮ್ಮ ಕೆಲಸಗಳನ್ನು ಪೂರ್ಣಗೊಳಿಸಿಯೇ ತೀರುತ್ತೇವೆ' ಎಂದು ಹೇಳಿದರು.

      ಯಡಿಯೂರಪ್ಪಗೆ ದೇವರೇ ಶಿಕ್ಷೆ ನೀಡುತ್ತಾನೆ

      ಯಡಿಯೂರಪ್ಪಗೆ ದೇವರೇ ಶಿಕ್ಷೆ ನೀಡುತ್ತಾನೆ

      'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಅಧಿಕಾರ ವಹಿಸಿಕೊಂಡ ದಿನದ ಸಂಜೆಯೇ ಕೆಎಂಎಫ್ ಕಡತ ತೆಗೆದರು. ಯಡಿಯೂರಪ್ಪ ಅವರಿಗೆ ದೇವರೇ ಶಿಕ್ಷೆ ನೀಡುವ ಕಾಲ ಬರುತ್ತದೆ' ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

      ಯಡಿಯೂರಪ್ಪ ಅವರದು ಶಿಕಾರಿಪುರ ಬಜೆಟ್ಟಾ?

      ಯಡಿಯೂರಪ್ಪ ಅವರದು ಶಿಕಾರಿಪುರ ಬಜೆಟ್ಟಾ?

      'ಬಿಜೆಪಿ ಶಾಸಕರಿಗೆ ನೈತಿಕತೆ ಇದ್ದರೆ ಯಡಿಯೂರಪ್ಪ ಅವರನ್ನು ಪ್ರಶ್ನಿಸಲಿ. ಮುಖ್ಯಮಂತ್ರಿಯಾದ ಎಂಟೇ ದಿನಕ್ಕೆ ಶಿವಮೊಗ್ಗಕ್ಕೆ ಎರಡು ಸಾವಿರ ಕೋಟಿ ರೂ. ಹಣ ತೆಗೆದಿದ್ದಾರೆ. ಕುಮಾರಸ್ವಾಮಿ ಅವರಿಗೆ ಹಾಸನ ಬಜೆಟ್ ಅನ್ನುತ್ತಿದ್ದರಲ್ಲ, ಯಡಿಯೂರಪ್ಪ ಅವರದು ಶಿಕಾರಿಪುರ ಬಜೆಟ್ಟಾ? ಜಗದೀಶ್ ಶೆಟ್ಟರ್ ಅವರು ಸಮ್ಮಿಶ್ರ ಸರ್ಕಾರವನ್ನು ಟೀಕಿಸುತ್ತಿದ್ದರು. ಈಗ ಅನುದಾನಕ್ಕಾಗಿ ಯಡಿಯೂರಪ್ಪ ಅವರನ್ನು ಕೇಳಲು ಶೆಟ್ಟರ್ ಅವರಿಗೆ ಭಯವೇ? ಸಿಕ್ಕ ಸಚಿವ ಪದವಿಯೂ ಕೈತಪ್ಪಿ ಹೋಗುತ್ತದೆ ಎಂಬ ಭಯದಿಂದ ಜಗದೀಶ್ ಶೆಟ್ಟರ್ ಬಾಯಿ ಮುಚ್ಚಿಕೊಂಡಿದ್ದಾರೆ' ಎಂದು ಲೇವಡಿ ಮಾಡಿದರು.

      ಡಿಕೆ ಶಿವಕುಮಾರ್ ವಿರುದ್ಧ ದ್ವೇಷದ ರಾಜಕಾರಣ

      ಡಿಕೆ ಶಿವಕುಮಾರ್ ವಿರುದ್ಧ ದ್ವೇಷದ ರಾಜಕಾರಣ

      ಡಿಕೆ ಶಿವಕುಮಾರ್ ಅವರು ನಮ್ಮ ಸಮಾಜದವರು. ಅವರು ಕಾಂಗ್ರೆಸ್‌ನಲ್ಲಿ ಬೆಳೆಯುತ್ತಾರೆ ಎಂಬ ಕಾರಣಕ್ಕಾಗಿ ಇ.ಡಿಯಿಂದ ಬಂಧಿಸಲಾಗಿದೆ. ಬೇಕೆಂದೇ ಅವರ ವಿರುದ್ಧ ಹೀಗೆ ಮಾಡಲಾಗುತ್ತಿದೆ. ತಂದೆಗೆ ಎಡೆ ಇಡಬೇಕು ಎಂದು ಕೋರಿದ್ದರೂ ಅದಕ್ಕೆ ಕರುಣೆ ತೋರಿ ಅವಕಾಶ ನೀಡಲಿಲ್ಲ. ನಾನು ಇದೆಲ್ಲವನ್ನೂ ನೋಡುತ್ತಿದ್ದೇನೆ. ಯಡಿಯೂರಪ್ಪ ಅವರ ಮಗ ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದರು. ಆದರೂ ಅವರು ದ್ವೇಷದ ರಾಜಕಾರಣ ಬಿಟ್ಟಿಲ್ಲ ಎಂದು ಆರೋಪಿಸಿದರು.

      ಬಿಜೆಪಿಯಿಂದ 50 ಕೋಟಿ ರೂಪಾಯಿ ಆಮಿಷ

      ಬಿಜೆಪಿಯಿಂದ 50 ಕೋಟಿ ರೂಪಾಯಿ ಆಮಿಷ

      'ತಮ್ಮ ಪಕ್ಷಕ್ಕೆ ಸೇರುವಂತೆ ಬಿಜೆಪಿಯವರು ನನಗೆ 50 ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಜತೆಗೆ ಎಚ್ ಡಿ ರೇವಣ್ಣ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿಯೂ ಹೇಳಿದ್ದರು. ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷರಾಗಿರುವ ಎಚ್ ಕೆ ಕುಮಾರಸ್ವಾಮಿ ಅವರಿಗೆ ಕೂಡ ಅವರ ಪತ್ನಿ ಚಂಚಲಾ ಅವರ ಮೂಲಕ ಆಮಿಷ ಒಡ್ಡಿದ್ದರು' ಎಂದು ಶಾಸಕ ಕೆ.ಎಸ್. ಲಿಂಗೇಶ್ ಆರೋಪಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+