ಹಾಸನಾಂಬೆ ದೇವಿ ದರ್ಶನ ಅಂತ್ಯ, ಬಾಗಿಲು ಮುಚ್ಚಿದ ದೇವಾಲಯ
ಹಾಸನ, ಅಕ್ಟೋಬರ್ 29 : ಹಾಸನದ ಅದಿ ದೇವತೆ ಹಾಸನಾಂಬೆ ತಾಯಿಯ ದರ್ಶನ ಅಂತ್ಯಗೊಂಡಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.
ಮಂಗಳವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನ 1.20 ಕ್ಕೆ ಬಾಗಿಲನ್ನು ಮುಚ್ಚಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಸಿ. ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ಶಾಸಕ ಪ್ರೀತಂ ಜೆ ಗೌಡ ಮುಂತಾದವರು ಉಪಸ್ಥಿತರಿದ್ದರು.
ಕೊನೆಯ ಕ್ಷಣದಲ್ಲಿಯೂ ಕೂಡ ದೇವಸ್ಥಾನದ ಬಳಿ ಇದ್ದಂತಹ ಭಕ್ತಾಧಿಗಳಿಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತಾಧಿಗಳು ಹಾಸನಾಂಬ ದೇವಿಯ ದರ್ಶನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, "ಹಾಸನಾಂಬ ದೇವಿ ದರ್ಶನ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಸಚಿವರ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದೆ" ಎಂದರು.
300 ಹಾಗೂ 1000 ರೂಪಾಯಿಯ ಟಿಕೆಟ್ ದರ್ಶನದಿಂದ ಸುಮಾರು 1.6 ಕೋಟಿ ಹಣ ಸಂಗ್ರಹವಾಗಿದೆ. ದೇವಸ್ಥಾನದ ಕಾಣಿಕೆ ಹುಂಡಿಕೆ ಕಾರ್ಯವನ್ನು ಅಕ್ಟೋಬರ್ 30 ರಂದು ನಡೆಸಲಾಗುತ್ತದೆ.
ಈ ಬಾರಿ ಒಟ್ಟು 13 ದಿನಗಳ ಕಾಲ ದೇವಿಯ ದರ್ಶನ ಪಡೆಯಲು ಅವಕಾಶ ಸಿಕ್ಕಿತ್ತು. 2020ರ ನವೆಂಬರ್ 5ರಂದು ದೇವಾಲಯ ಪುನಃ ಬಾಗಿಲು ತೆರೆಯಲಿದೆ.











Click it and Unblock the Notifications