ಬಿಜೆಪಿ ಬಿಟ್ಟು ಕಾಂಗ್ರೆಸ್ನತ್ತ ಮಾಜಿ ಸಚಿವ; ಸಿದ್ದರಾಮಯ್ಯ ಭೇಟಿ!
ಹಾಸನ, ನವೆಂಬರ್ 15; ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ವಿವಿಧ ಪಕ್ಷಗಳ ನಾಯಕರು ಬೇರೆ-ಬೇರೆ ಪಕ್ಷಕ್ಕೆ ಸೇರಲಿದ್ದಾರೆ. ಮಾಜಿ ಸಚಿವರೊಬ್ಬರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ? ಎಂಬ ಸುದ್ದಿಗಳು ಬಲವಾಗಿ ಹಬ್ಬಿದೆ.
ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಎ. ಮಂಜು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಭಾನುವಾರ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ಲೋಕಸಭೆ ಚುನಾವಣೆ ಮೈತ್ರಿಗೆ ಮುನಿಸು : ಎ.ಮಂಜು ಬಿಜೆಪಿಗೆ
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದು 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಾಯಕರಲ್ಲಿ ಎ. ಮಂಜು ಸಹ ಒಬ್ಬರು. 2019ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಎ. ಮಂಜು ಬಿಜೆಪಿ ಸೇರಿದ್ದರು. ಹಾಸನದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದರು.
ಹಾಸನ, ಮಂಡ್ಯ ಕ್ಷೇತ್ರ ಜೆಡಿಎಸ್ಗೆ ಬಿಟ್ಟುಕೊಡಬೇಡಿ
2023ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎ. ಮಂಜು ಕಾಂಗ್ರೆಸ್ಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಸಿದ್ದರಾಮಯ್ಯರನ್ನು ಬೆಂಗಳೂರಿನ ನಿವಾಸದಲ್ಲಿ ಎ. ಮಂಜು ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಪರಿಷತ್ ಚುನಾವಣೆ; ದೇವೇಗೌಡರ ಮೊಮ್ಮಗ ಕಣಕ್ಕೆ?
ವಿಧಾನಸಭೆ ಚುನಾವಣೆ ಸೋಲು
2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಎ. ಮಂಜು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಪಶುಸಂಗೋಪನಾ ಖಾತೆ ಸಚಿವರಾಗಿದ್ದರು. ಸಿದ್ದರಾಮಯ್ಯ ಆಪ್ತರು ಕೂಡಾ ಆಗಿದ್ದರು. ಆದರೆ 2018ರ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ 74,411 ಮತಗಳನ್ನು ಪಡೆದು ಜೆಡಿಎಸ್ನ ಎ. ಟಿ. ರಾಮಸ್ವಾಮಿ ವಿರುದ್ಧ ಸೋಲು ಕಂಡಿದ್ದರು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಈಗ ಪುನಃ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ?.
ಲೋಕಸಭೆ ಚುನಾವಣೆ ಸೋಲು
2019ರ ಲೋಕಸಭೆ ಚುನಾವಣೆ ಹಾಸನದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಕ್ಷೇತ್ರದ ಸಂಸದರಾಗಿದ್ದ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಬಿಜೆಪಿ ಸೇರಿದ್ದ ಎ. ಮಂಜು ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಚುನಾವಣೆಯಲ್ಲಿ 5,35,282 ಮತಗಳನ್ನು ಪಡೆದು ಪ್ರಜ್ವಲ್ ರೇವಣ್ಣ ವಿರುದ್ಧ ಸೋಲು ಕಂಡರು. ಕೆಲವು ದಿನಗಳಿಂದ ಎ. ಮಂಜು ಕಾಂಗ್ರೆಸ್ಗೆ ವಾಪಸ್ ಅಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.
ಡಿ. ಕೆ. ಶಿವಕುಮಾರ್ ಭೇಟಿ
1999ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಎ. ಮಂಜು, 2013ರಲ್ಲಿ ಕಾಂಗ್ರೆಸ್ನಿಂದ ಶಾಸಕರಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು. ಆದರೆ 2019ರಲ್ಲಿ ಪುನಃ ಬಿಜೆಪಿ ಸೇರಿದ್ದರು.
ಎ. ಮಂಜು ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿ ತಮ್ಮ ನಾಯಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎಂಬ ಸುದ್ದಿಗಳು ಜುಲೈನಲ್ಲಿ ಹಬ್ಬಿತ್ತು. ಈಗ ಎ.ಮಂಜು ಸಿದ್ದರಾಮಯ್ಯ ಭೇಟಿ ಮಾಡಿದ್ದು, ಕುತೂಹಲ ಹುಟ್ಟು ಹಾಕಿದೆ.
ಉಹಾಪೋಹ ಎಂದಿದ್ದ ಎ. ಮಂಜು
ಇದೇ ವರ್ಷದ ಜುಲೈ ತಿಂಗಳಿನಲ್ಲಿ ಎ. ಮಂಜು ಮತ್ತೆ ಕಾಂಗ್ರೆಸ್ ಸೇರುವ ಸುದ್ದಿ ಕೇಳಿ ಬಂದಾಗ ಅವರು ಪ್ರತಿಕ್ರಿಯೆ ನೀಡಿದ್ದರು. "ಇದು ಉಹಾಪೋಹ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದರು.
"ನಾನು ಕಾಂಗ್ರೆಸ್ ಸೇರುವ ವದಂತಿಯನ್ನು ವಿರೋಧಿಗಳು ಮಾಧ್ಯಮಗಳಿಗೆ ಹರಿಬಿಡುತ್ತಿದ್ದಾರೆ. ನಾನು ಕ್ಷೇತ್ರದ ಜನರ ವಿಶ್ವಾಸ ಪಡೆದು ಹಂತ-ಹಂತವಾಗಿ ರಾಜಕೀಯವಾಗಿ ಮೇಲೆ ಬಂದಿದ್ದೇನೆ. ಕ್ಷೇತ್ರದ ಜನರ ಸಹಕಾರದ ನೆರವಿನಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಭರವಸೆಯನ್ನು ಹೊಂದಿದ್ದೇನೆ" ಎಂದು ಎ. ಮಂಜು ಸ್ಪಷ್ಟಪಡಿಸಿದ್ದರು.