ಹಾಸನ: ಜನತಾ ಜಲಧಾರೆಯಲ್ಲಿ ಎಚ್ಡಿಕೆ ಕಣ್ಣೀರಧಾರೆ
ಹಾಸನ, ಏಪ್ರಿಲ್ 21: ನಾನು ಬಿಜೆಪಿ ಜೊತೆ ಸರ್ಕಾರ ಮಾಡಿದ್ದರಿಂದ ಎಚ್.ಡಿ. ದೇವೇಗೌಡರ ಆರೋಗ್ಯ ಹಾಳಾಯಿತು ಎಂದು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಅಪ್ಪನ ಆರೋಗ್ಯ ನೆನೆದು ಕಣ್ಣೀರಿಟ್ಟಿದ್ದಾರೆ.
ಹಾಸನದಲ್ಲಿ ಗುರುವಾರ ಜೆಡಿಎಸ್ ಪಕ್ಷವು ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರಧಾರೆ ಹರಿಸಿದ್ದಾರೆ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ನೆನಪಿಸಿಕೊಂಡರು.
"ನನ್ನ ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸವಾಗಲು ನಾನೇ ಕಾರಣನಾದೆ ಎಂದು ಭಾಷಣದ ವೇಳೆ ಭಾವುಕರಾದ ಎಚ್ಡಿಕೆ, ಅಂದು ನಾನು ನನಗೆ ಅಧಿಕಾರ ಬೇಡ, ನನಗೆ ನೀವು ಬೇಕು ಎಂದೆ. ನೀವು ಬೇಕೆಂದು ಕಾಲು ಹಿಡಿದುಕೊಂಡೆ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದರು. ಬಿಜೆಪಿ ಶಾಸಕರು ಅಂಗಲಾಚಿದ್ದರಿಂದ ನಾನು ಸರ್ಕಾರ ಮಾಡಿದೆ," ಎಂದು ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿರುವ ಬಗ್ಗೆ ನೆನಪು ಮಾಡಿಕೊಂಡರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ
ಇನ್ನು ಭಾಷಣದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಎಚ್.ಡಿ. ಕುಮಾರಸ್ವಾಮಿ, "ಪದೇ ಪದೇ ವಚನ ಭ್ರಷ್ಟ ಅಂತೀರಾ, ಯಾವನು ವಚನ ಭ್ರಷ್ಟ ಎಂದು ಪ್ರಶ್ನೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಎಷ್ಟು ಹಣ ಪಡೆದಿದ್ದೀರಿ ಸಿದ್ದರಾಮಯ್ಯನವರೇ? ನಾನು ಹತ್ತಾರು ಭಾರಿ ಪ್ರಶ್ನೆ ಮಾಡಿದೆ ಉತ್ತರ ಕೊಟ್ಟರಾ?," ಎಂದು ಕಿಡಿಕಾರಿದರು.
"ಸಿದ್ದರಾಮಯ್ಯ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ, ನೀವು ನಿಮ್ಮ ಪಕ್ಷ ಹೇಗೆ ಬೇಕಾದರೂ ಕಟ್ಟಿಕೊಳ್ಳಿ. ನಮ್ಮ ಪಕ್ಷದ ವಿಚಾರಕ್ಕೆ ಬರಬೇಡಿ ಎಂದರು. 2018ರಲ್ಲಿ ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡಿದಿರಿ, ಪದೇ ಪದೇ ಬಿಜೆಪಿ 'ಬಿ' ಟಿಂ ಅಂತಿದ್ದೀರಿ, ಮೊನ್ನೆ ಹಾಸನದಲ್ಲೂ ಹೇಳಿದ್ದೀರಿ, ನಿಮಗೆ ನಾಲಗೆ ಹೇಗೆ ಹೊರಳುತ್ತದೆ ದೇವೇಗೌಡರ ಹೆಸರು ಹೇಳಲು, ಈ ಕೆಟ್ಟ ಸರ್ಕಾರ ಬರಲು ಕಾರಣ ಯಾರು?," ಎಂದು ಸಿದ್ದರಾಮಯ್ಯರಿಗೆ ಪ್ರಶ್ನೆ ಮಾಡಿದರು.

ಮಾನವೀಯತೆ ಇಲ್ಲದ ಬಿಜೆಪಿ ಸರ್ಕಾರ
ಕೊರೊನಾ ಕಾಲದಲ್ಲಿ ಹೆಣದ ರಾಶಿ ಬಿದಿದ್ದರು ಬಿಜೆಪಿಯವರು ದುಡ್ಡು ಹೊಡೆದರು. ಅದೇ ದುಡ್ಡಿನಲ್ಲಿ ಶಾಸಕರೆಲ್ಲರಿಗೂ ಊಟ ಏರ್ಪಾಡು ಮಾಡಿದ್ದರು. ಬಿಜೆಪಿಯ ಕೆಲ ಒಳ್ಳೆಯ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದರು, ಅವರು ಹೇಳಿದರು ಕೋವಿಡ್ನಲ್ಲೂ ಹಣ ತಿಂದರಲ್ಲ ಅದರಲ್ಲಿ ಊಟ ಹಾಕುತ್ತಿದ್ದಾರೆ ಎಂದು ಬಿಜೆಪಿ ಸ್ನೇಹಿತರು ಹೇಳಿದ್ದರು.

ಶಾಸಕ ಶಿವಲಿಂಗೇಗೌಡ ಜೆಡಿಎಸ್ಗೆ ಗುಡ್ಬೈ ಹೇಳುತ್ತಾರಾ?
ಹಾಸನದಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಯಾತ್ರೆ, ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ವಿರುದ್ಧ ಬಹಿರಂಗ ವೇದಿಕೆಯಲ್ಲೇ ವಾಗ್ದಾಳಿ ನಡೆಸಿದರು. ಸಮಾವೇಶಕ್ಕೆ ಗೈರಾಗಿದ್ದ ಶಾಸಕ ಶಿವಲಿಂಗೇಗೌಡ ವಿರುದ್ಧ ಕಿಡಿಕಾರಿದ ನಾಯಕರಿಬ್ಬರೂ ಬೇರೆ ಏನಾದರು ರಾಜಕಾರಣ ಮಾಡೋಣ. ಆದರೆ ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಮಾಡಬಾರದು ಎಂದು ಎಚ್.ಡಿ. ಕುಮಾರಸ್ವಾಮಿ ಮಾತಾಡುವಾಗ ಮೈಕ್ ಪಡೆದು, ಎಚ್.ಡಿ. ದೇವೇಗೌಡ ಹೇಳಿದರು.

ಕುತ್ತಿಗೆ ಕೊಯ್ಯುವ ಕೆಲಸ ಮಾಡಬೇಡಿ
ನಾನು ತೆಂಗಿನ ವಿಚಾರವಾಗಿ ಪ್ರತಿಭಟನೆ ಮಾಡುತ್ತೇನೆ. ನೀವು 3 ದಿನ ಬಿಟ್ಟು ಬಂದು ಕುಮಾರಸ್ವಾಮಿಗೆ ಹೇಳಿ ಏನಾದರೂ ಪರಿಹಾರ ಕೊಡಿಸಿ ಅಂದಿದ್ದರು. ಶಿವಲಿಂಗೇಗೌಡರದ್ದು ಎಂತಹ ಡ್ರಾಮಾ ಎಂದು ಎಚ್.ಡಿ. ದೇವೇಗೌಡ ವಿಷಾದಿಸಿದರು. ಈ ವೇಳೆ ಬಹುಶಃ ಇಂತಹವರು ಜಿಲ್ಲೆಯಲ್ಲಿ ಮತ್ತೆ ಹುಟ್ಟಲಾರರು. ಶಿವಲಿಂಗೇಗೌಡ ಸದನದಲ್ಲಿ ಮಾತಾಡುವುದು ಡ್ರಾಮಾನೇ. ಕ್ಷೇತ್ರದ ಜನ ನೋಡಲಿ ಅಂತಾ ಡ್ರಾಮಾ ಮಾಡುತ್ತಾರೆ ಎಂದು ದೇವೇಗೌಡರ ಮಾತಿಗೆ ಕುಮಾರಸ್ವಾಮಿ ಧ್ವನಿಗೂಡಿಸಿದರು.
ತಪ್ಪು ಸರಿ ಮಾಡಿಕೊಳ್ಳಿ, ನಾನು ಯಾರಿಗೂ ದಮ್ಮಯ್ಯಾ ಅನ್ನಲ್ಲ. ತಪ್ಪು ತಿದ್ದಿಕೊಂಡು ಪಕ್ಷದಲ್ಲಿ ಇರುವುದಾದರೆ ಇರಿ. ಪಕ್ಷದಲ್ಲಿ ಇದ್ದು ಕುತ್ತಿಗೆ ಕೊಯ್ಯುವ ಕೆಲಸ ಮಾಡಬೇಡಿ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡಗೆ ಎಂದು ಎಚ್.ಡಿ. ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದರು.












Click it and Unblock the Notifications