ಇವಿಎಂ ಬೇಡ, ಬ್ಯಾಲೆಟ್ ಪೇಪರ್ನಲ್ಲೇ ನಡೆಯಲಿ ಚುನಾವಣೆ: ದೇವೇಗೌಡ
ಹಾಸನ, ಮಾರ್ಚ್ 17: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಸಬೇಕೆಂದು ಮಾಜಿ ಪ್ರಧಾನಿ, ರಾಷ್ಟ್ರ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವದ ಹಲವು ರಾಷ್ಟ್ರಗಳಲ್ಲಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಇವಿಎಂ ಯಂತ್ರ ಬಳಸಲಾಗುತ್ತಿದೆ, ಮತಯಂತ್ರದಲ್ಲಿ ಅನೇಕ ಲೋಪ ದೋಷ ಇವೆ ಎಂಬ ಕೂಗಿದೆ ಎಂದರು.
ಆದರೆ ಚುನಾವಣಾ ಆಯೋಗ ಏಕೆ ಇವಿಎಂ ನಲ್ಲೇ ಚುನಾವಣೆ ಮಾಡುತ್ತೇನೆಂದು ಹಠ ಮಾಡುತ್ತಿದೆಯೋ ಎಂದ ಅವರು, ಇವಿಎಂಗಳ ಬಗ್ಗೆ ಪ್ರಶ್ನೆಗಳನ್ನು ಎತ್ತದ ಹಾಗೆ ಚುನಾವಣಾ ಆಯೋಗ ಮಾಡಿದೆ, ಅನುಮಾನಗಳ ಬಗ್ಗೆ ಹೇಳಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಅಂದರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದರು.
ಗುಜರಾತ್ ಚುನಾವಣೆಯಲ್ಲಿ ಬಳಸಲಾದ ಇವಿಎಂ ಯಂತ್ರಗಳನ್ನೇ ರಾಜ್ಯಕ್ಕೆ ತಂದಿರುವುದು ಅನುಮಾನ ಹುಟ್ಟು ಹಾಕಿದೆ ಎಂದ ಅವರು ಬ್ಯಾಲೆಟ್ ಪ್ಯಾಪೆರ್ಗಳಲ್ಲಿ ಚುನಾವಣೆ ಮಾಡಿದರೆ ಉತ್ತಮ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಚುನಾವಣೆ ಮುಗಿದ ಮೇಲೆ ಹೆಚ್ಚು ದಿನ ಹಾಸನದಲ್ಲೇ ಕಳೆಯುವೆ ಎಂದ ಅವರು ನಾನು ಒಂದು ದಿನ ಜನರ ಮಧ್ಯೆ ಇಲ್ಲ ಅಂದರೆ ಹುಚ್ಷನಾಗುತ್ತೇನೆ, ಏಕಾಂಗಿಯಾಗಿರುವುದು ನನಗೆ ಕಷ್ಟಸಾಧ್ಯ, ಅದಕ್ಕೆ ರಾಮಕೃಷ್ಹ ಹೆಗಡೆ ನನ್ನನ್ನು 24 ಗಂಟೆ ರಾಜಕಾರಣಿ ಎನ್ನುತ್ತಿದ್ದರು ಎಂದು ದೇವೇಗೌಡರು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ನಕ್ಸಲ್ ದಾಳಿಗೆ ಬಲಿಯಾದ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ಯೋಧ ಚಂದ್ರ ಅವರ ಬಗ್ಗೆ ಮಾತನಾಡಿದ ದೇವೇಗೌಡ ಅವರು ವಿವಿಧ ಮೂಲಗಳಿಂದ ಯೋಧನ ಕುಟುಂಬಕ್ಕೆ ಸುಮಾರು 90 ಲಕ್ಷ ರೂ ಪರಿಹಾರ ಬರಲಿದೆ, ಇದರಲ್ಲಿ ಏರುಪೇರಾದರೆ ಸಂಸತ್ ನಲ್ಲಿ ಚರ್ಚೆ ಮಾಡುವೆ, ನಮ್ಮ ಪಕ್ಷದಿಂದಲೂ ಸಹಾಯ ಮಾಡಲಾಗುವುದು ಎಂದ ಅವರು ಶೀಘ್ರ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವೆ ಎಂದರು.