ದೇವೇಗೌಡರ ಕಲ್ಲಡ್ಕ ಪಾದಯಾತ್ರೆಗೆ ಜಿಲ್ಲಾಡಳಿತ ಬ್ರೇಕ್, ಗೌಡರ ಅಸಮಾಧಾನ
ಹಾಸನ, ಜುಲೈ 14: ಗಲಭೆ ಪೀಡಿತ ಮಂಗಳೂರಿನಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ ದೇವೇಗೌಡರು ನಡೆಸಲುದ್ದೇಶಿಸಿದ್ದ ಪಾದಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಶಾಂತಿಯುತ ಉದ್ದೇಶಕ್ಕೆ ನಡೆಸಲು ಹೊರಟಿದ್ದ ಪಾದಯಾತ್ರೆಗೆ ಅನುಮತಿ ನಿರಾಕರಿಸಿದ್ದಕ್ಕೆ ದೇವೇಗೌಡರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡದ ಮಂಗಳೂರಿನಿಂದ ಕಲ್ಲಡ್ಕದವರೆಗೆ ಇದೇ ಜುಲೈ 15ರಂದು ಪಾದಯಾತ್ರೆ ನಡೆಸಲು ಎಚ್.ಡಿ.ದೇವೇಗೌಡರು ಉದ್ದೇಶಿಸಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

ಅನುಮತಿ ನಿರಾಕರಿಸಿದ ಬೆನ್ನಿಗೆ ಗುರುವಾರ ಹಾಸನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌರು ಜಿಲ್ಲಾಡಳಿತದ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ. "ಕಾನೂನು ಮತ್ತು ಸುವ್ಯವಸ್ಥೆ ನೆಪದಲ್ಲಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವುದರಿಂದ ಬೇಸರವಾಗಿದೆ. ಇನ್ನೆರಡು ದಿನ ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು," ಎಂದು ಹೇಳಿದ್ದಾರೆ.
"ಯಾವುದೇ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ಪಾದಯಾತ್ರೆಯಲ್ಲಿ ಯಾವುದೇ ಪಕ್ಷದ ಬ್ಯಾನರ್, ಪೋಸ್ಟರ್ ಹಾಕಬಾರದು ಎಂದು ಸೂಚನೆ ನೀಡಲಾಗಿತ್ತು. ವಿವಿಧ ಧರ್ಮಗಳ ಗುರುಗಳು, ಬುದ್ಧಿಜೀವಿಗಳು, ಸ್ವಾತಂತ್ರ್ಯ ಹೋರಾಟಗಾರರು, ಎಲ್ಲ ಪಕ್ಷಗಳ ನಾಯಕರಿಗೆ ಈ ಪಾದಯಾತ್ರೆಯಲ್ಲಿ ಆಹ್ವಾನ ನೀಡಲಾಗಿತ್ತು," ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ವಿವಿಧ 'ಧರ್ಮಗಳ ಧರ್ಮಗುರುಗಳ ಜತೆ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಾಮರಸ್ಯ ಮೂಡಿಸಲು ನಾವು ಸಿದ್ಧರಿದ್ದೇವೆ' ಎಂದು ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದ್ದಾರೆ. ಈ ಕುರಿತು ಎಲ್ಲಾ ಸ್ವಾಮೀಜಿಗಳ ಜತೆ ಚರ್ಚೆ ಜಾರಿಯಲ್ಲಿದೆ ಎಂದೂ ಅವರು ಮಾಹಿತಿ ನೀಡಿದರು.












Click it and Unblock the Notifications