ಹಾಸನಾಂಬ ಜಾತ್ರೆ; ಭಕ್ತರಿಗೆ ಸಿಹಿಸುದ್ದಿ ಕೊಟ್ಟ ಸಚಿವರು
ಹಾಸನ, ಅಕ್ಟೋಬರ್ 26; ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಈ ಬಾರಿ ಸಾರ್ವಜನಿಕರಿಗೆ ಅವಕಾಶ ದೊರೆಯಲಿದೆ. ಅಕ್ಟೋಬರ್ 28ರಂದು ಈ ಬಾರಿ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.
ಮಂಗಳವಾರ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಸಾರ್ವಜನಿಕ ಭಾವನೆಗಳನ್ನು ಗೌರವಿಸಿ ದೇವಾಲಯದ ಬಾಗಿಲು ತೆರೆಯುವ ಅಕ್ಟೋಬರ್28 ರಂದು ಹಾಗೂ ಬಾಗಿಲು ಮುಚ್ಚುವ ದಿನವಾದ ನವೆಂಬರ್ 6ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ದರ್ಶನಕ್ಕೆ ಅಕವಾಶ ನೀಡಲಾಗಿದೆ" ಎಂದರು.

"ದೇವಿಯ ಭಕ್ತರು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆವರೆಗೆ ದೇವಿಯ ದರ್ಶನ ಪಡೆಯಲು ಅವಕಾಶ ನೀಡಲಾಗುವುದು" ಎಂದು ಕೆ. ಗೋಪಾಲಯ್ಯ ಹೇಳಿದರು.
"ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಸಾರ್ವಜನಿಕರು ಸಹ ಸಹಕರಿಸಬೇಕು. ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು" ಎಂದು ಸಚಿವರು ಕರೆ ನೀಡಿದರು.
ಲಸಿಕೆ ಪಡೆದಿರುವುದು ಕಡ್ಡಾಯ; ಹಾಸನಾಂಬೆ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ ಮತ್ತು ಈ ಬಗ್ಗೆ ಚಿಕಿತ್ಸೆ ದಾಖಲೆ ಇರಿಸಿಕೊಂಡು ತಪಾಸಣಾ ತಂಡ ಕೇಳಿದಾಗ ತೋರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಭಕ್ತರು ಕಡ್ಡಾಯವಾಗಿ ಮೊದಲ ಮತ್ತು ಎರಡನೇ ಡೋಸ್ ಕೋವಿಡ್ ಸೋಂಕಿನ ವಿರುದ್ಧದ ತೆಗೆದುಕೊಂಡಿರಬೇಕು ಹಾಗೂ ಈ ಬಗ್ಗೆ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸುವುದರ ಜೊತೆಗೆ ಆಧಾರ್ ಕಾರ್ಡ್, ಐಡಿ ಕಾರ್ಡ್ ತೋರಿಸಿ ಪ್ರವೇಶ ಪಡೆಯಬಹುದು.
ಈ ಹಿಂದಿನ ಪದ್ಧತಿಗಳಂತೆ ಈ ವರ್ಷವೂ ವಿಶೇಷ ದರ್ಶನದ ಅವಕಾಶಗಳು ಇರಲಿವೆ. 1000 ರೂ. ಹಾಗೂ 300 ರೂ. ಗಳ ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ. ಸಾಮಾನ್ಯ ದರ್ಶನಕ್ಕೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ ನೀಡಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಕೋವಿಡ್ ಲಸಿಕೆ ಹಾಕದವರನ್ನು ಪರಿಶೀಲಿಸಲು ಹಲವು ತಂಡಗಳನ್ನು ರಚಿಸಲಾಗುವುದು. ಯಾವುದೇ ಗೊಂದಲಗಳಿಲ್ಲದೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಭಕ್ತಾದಿಗಳು ಮಕ್ಕಳನ್ನು ಕರೆದುಕೊಂಡು ಬರದೇ ಇರುವುದು ಸೂಕ್ತ ಎಂದು ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಭೇಟಿ; ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ದೇವಾಲಯಕ್ಕೆ ಭೇಟಿ ನೀಡಿದರು. ಸಮರ್ಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೂವಿನ ಅಲಂಕಾರ, ದೀಪಾಲಂಕಾರ, ಬ್ಯಾರಿಕೆಡ್ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ಆಕರ್ಷಕವಾಗಿ ಮಾಡುವುದರ ಜೊತೆಗೆ ಕೋವಿಡ್ ಲಸಿಕೆ ಪಡೆಯಿರಿ ಹಾಗೂ ಅಜಾದಿ ಕಾ ಅಮೃತ್ ಮಹೋತ್ಸವ ಎಂಬ ವ್ಯಾಕ್ಯಗಳನ್ನು ವಿದ್ಯುತ್ ದೀಪಗಳಿಂದ ಮೂಡಿಬರುವಂತೆ ವ್ಯವಸ್ಥಿತವಾಗಿ ನಿರ್ಮಿಸಲು ತಿಳಿಸಿದರು.
ಕನ್ನಡ ರಾಜ್ಯೋತ್ಸವ; ಕೆ. ಗೋಪಾಲಯ್ಯ ಮಾತನಾಡಿ, "66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾತಾಡ್ ಮಾತಾಡ್ ಕನ್ನಡ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಇದೇ 24ನೇ ತಾರೀಖಿನಿಂದ 30ನೇ ತಾರೀಖಿನವರೆಗೆ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ" ಎಂದು ಹೇಳಿದರು.
'ಮಾತಾಡ್ ಮಾತಾಡ್ ಕನ್ನಡ' ಕಾರ್ಯಕ್ರಮದ ಭಾಗವಾಗಿ ಅಕ್ಟೋಬರ್ 28ನೇ ತಾರೀಖು ಬೆಳಗ್ಗೆ 11 ಗಂಟೆಗೆ ಹಾಸನ ಜಿಲ್ಲೆಯಾದ್ಯಂತ ಮೂರು ಕನ್ನಡ ಗೀತೆಗಳನ್ನು ಹಾಡುವ ಲಕ್ಷ ಕಂಠ ಗಾಯನ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳ ಪ್ರಮುಖ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು ಒಳಗೊಂಡು ಸುಮಾರು 15 ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಸುಮಾರು 25 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯಿಂದ ಭಾಗವಹಿಸುತ್ತಿದ್ದಾರೆ.












Click it and Unblock the Notifications