ಗೌಡರ ಸೋಲಿಗೆ ಎದುರಾಳಿ, ಬಿಜೆಪಿ ಸಂಸದ ಬಸವರಾಜ್ ಕೊಟ್ಟ ಕಾರಣಗಳು?
ಸತತ ಗೆಲುವಿನಿಂದ ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿ, ಪ್ರಧಾನ ಮಂತ್ರಿ ಅಗಿಯೂ ಕಾರ್ಯ ನಿರ್ವಹಿಸಿದ್ದ ಎಚ್.ಡಿ.ದೇವೇಗೌಡರು ಸಂಸತ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ಗಮನ ಸೆಳೆದಿದ್ದರು. ಸೋಲಿಲ್ಲದ ಸರದಾರನಾಗಿ, ತನ್ನೊಂದಿಗೆ ಇನ್ನೊಂದಷ್ಟು ಸಂಸದರನ್ನು ಕರೆದೊಯ್ಯುತ್ತಿದ್ದ ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು ಎನ್ನುವುದು ಅರಗಿಸಿಕೊಳ್ಳಲಾರದ ವಿಚಾರ.
ಇವತ್ತು ರಾಜ್ಯವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದ ಹಲವು ನಾಯಕರು ಸೋಲು ಕಂಡಿದ್ದಾರೆ. ಆ ನಿಟ್ಟಿನಲ್ಲಿ ನೋಡಿದರೆ ರಾಜ್ಯಕ್ಕೆ ತುಂಬಲಾರದ ನಷ್ಟವೇ. ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪ ಅವರಂತಹ ಘಟಾನುಘಟಿಗಳೇ ಸೋತು ಮನೆ ಸೇರುವಂತಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ.
ದೇವೇಗೌಡ ಅವರಿಗೆ ತುಮಕೂರಲ್ಲ, ಮೈಸೂರು ಬೇಕಿತ್ತು!
ಇದಕ್ಕೆ ಕಾರಣಗಳು ಅನೇಕ ಇರಬಹುದು. ಇವತ್ತಿನ ಯುವ ಜನಾಂಗ ಸುಶಿಕ್ಷಿತರು, ತಿಳಿದವರು, ಹೀಗಾಗಿ ಒಂದಷ್ಟು ಬದಲಾವಣೆಯನ್ನು ಬಯಸಿದರೆ ಅಚ್ಚರಿ ಪಡಬೇಕಾಗಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ, ಸೋಲು ಅನುಭವಿಸಲು ಕಾರಣ ಏನಿರಬಹುದು ಎಂಬುದರ ಬಗ್ಗೆಯೇ ಜನರು ವಿಶ್ಲೇಷಿಸುತ್ತಿದ್ದಾರೆ. ಚುನಾವಣೆ ಮುಗಿದು ತಿಂಗಳು ಕಳೆದರೂ ಈ ಬಗ್ಗೆ ಚರ್ಚೆಗಳು ಮಾತ್ರ ನಿಂತಿಲ್ಲ.
ಗೌಡರ ದ್ವೇಷ ರಾಜಕಾರಣದಿಂದ ಗಂಗೆ ಶಾಪ
ದೇವೇಗೌಡರ ಸೋಲಿಗೆ ಕಾರಣ ಯಾರು ಎಂಬುದನ್ನು ಅವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಹೇಮಾವತಿಯಿಂದ ನೀರು ಹರಿಸಲು ಇರಬಹುದಾದಂತಹ ತೊಡಕುಗಳ ಬಗ್ಗೆ ಪರಿಶೀಲನೆಗೆಂದು ಹಾಸನಕ್ಕೆ ಆಗಮಿಸಿದ್ದ ವೇಳೆ ಹೇಳಿದ್ದಾರೆ. ಹಾಗಾದರೆ ಅವರೇನು ಹೇಳಿದ್ದಾರೆ ಎಂಬುದು ಇಲ್ಲಿದೆ. ದೇವೇಗೌಡರ ಸೋಲಿಗೆ ಜನರಾಗಲೀ ಅಥವಾ ನಾನಾಗಲೀ ಕಾರಣರಲ್ಲ. ಗಂಗೆ ಶಾಪವೇ ಅವರು ಸೋಲಲು ಪ್ರಮುಖ ಕಾರಣ. ಗೌಡರ ದ್ವೇಷದ ರಾಜಕಾರಣದಿಂದಾಗಿ ಗಂಗೆ ಶಾಪ ನೀಡಿ, ಅವರು ಸೋಲು ಅನುಭವಿಸಬೇಕಾಯಿತು. ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣ ಮಾಡಿಕೊಂಡು ಬಂದವರು ಯಾರೂ ಉಳಿದಿಲ್ಲ.
ತೊಂದರೆ ನೀಡಲು ಇರುವ ಏಕೈಕ ವ್ಯಕ್ತಿ ರೇವಣ್ಣ
ತುಮಕೂರಿನ ರೈತರು ನೀರಿಲ್ಲದೆ ಸಾಕಷ್ಟು ಪರಿತಪಿಸುತ್ತಿದ್ದಾರೆ. ಕಳೆದ ವರ್ಷವೂ ಈ ಭಾಗಕ್ಕೆ ಹೇಮಾವತಿಯಿಂದ ನೀರು ಬಿಡುವಂತೆ ಮನವಿ ಮಾಡಲಾಗಿತ್ತು. ಆದರೆ ಗಮನ ಹರಿಸಲಿಲ್ಲ. ಸಚಿವ ಎಚ್.ಡಿ.ರೇವಣ್ಣ ದುರಾಸೆಯ ಮನುಷ್ಯ. ನಮ್ಮ ಕ್ಷೇತ್ರದ ಜನರು ಚೆನ್ನಾಗಿದ್ದರೆ ಸಾಕು, ಇಡೀ ಜಗತ್ತೇ ಹಾಳಾದರೆ ತಮಗೇನು ಎಂಬ ಮನೋಭಾವ ಉಳ್ಳವರು. ನನಗೆ ಮತ್ತು ತುಮಕೂರಿನ ಜನರಿಗೆ ತೊಂದರೆ ಕೊಡಲೆಂದೇ ಇರುವಂತಹ ಏಕೈಕ ವ್ಯಕ್ತಿ ರೇವಣ್ಣ. ಹೇಮಾವತಿಯಿಂದ ತುಮಕೂರಿಗೆ ನೀರು ಬಿಡದಂತೆ ಅಪ್ಪ- ಮಗ ಇಬ್ಬರೂ ಅಡ್ಡಗಾಲು ಹಾಕಿ, ಇಡೀ ತುಮಕೂರು ಜಿಲ್ಲೆಯನ್ನೇ ಹಾಳು ಮಾಡಲು ಹೊರಟಿದ್ದಾರೆ. ಹೇಮಾವತಿ ನದಿಯಿಂದ ತುಮಕೂರಿಗೆ 24 ಟಿಎಂಸಿ ನೀರು ಕೊಡಬೇಕು. ಆದರೆ ಕಳೆದ ವರ್ಷ ನಮಗೆ ಸಿಕ್ಕಿರುವುದು ಕೇವಲ 6 ಟಿಎಂಸಿ ನೀರು. ಇದರಿಂದ ರೈತರು ತಮ್ಮ ಬೆಳೆಗಳಿಗೆ ನೀರು ಸಿಗದೇ ತೀವ್ರ ತೊಂದರೆ ಅನುಭವಿಸಬೇಕಾಗಿದೆ.
ಬಸವರಾಜುಗೆ ಎಂಪಿ ಆಗೋ ಯೋಗ್ಯತೆಯಿಲ್ಲ, ಅವನೊಬ್ಬ ಅನ್ ಫಿಟ್: ರೇವಣ್ಣ ಉವಾಚ
ರಾಜ್ಯದಲ್ಲಿ ಅವರದೆ ಯಜಮಾನಿಕೆ
ಇಡೀ ತುಮಕೂರು ಜಿಲ್ಲೆಯ ರೈತರ ಜೀವಮಾನದಲ್ಲಿ 14 ಟಿಎಂಸಿ ಮೇಲೆ ನೀರು ಬಿಟ್ಟಿಲ್ಲ. ತುಮಕೂರಿನ ರೈತರು ಸಂಕಷ್ಟ ಅನುಭವಿಸಲು ರೇವಣ್ಣ ಮತ್ತು ಅವರ ಕಂಪೆನಿಯೇ ಪ್ರಮುಖ ಕಾರಣ. ರಾಜ್ಯದಲ್ಲಿ ಅವರದೇ ಯಜಮಾನಿಕೆ ಇರುವುದರಿಂದ ಈ ರೀತಿಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬುದಾಗಿ ದೇವೇಗೌಡರು ಮತ್ತು ರೇವಣ್ಣ ವಿರುದ್ಧ ಹರಿಹಾಯ್ದಿದ್ದಾರೆ.
ದೇವೇಗೌಡರು ಸೋಲಲು ಅವರ ಸೊಸೆಯಂದಿರು ಕಾರಣ: ಕಾಂಗ್ರೆಸ್ ಮುಖಂಡ
ಏನು ಮಾಡಬೇಕೆಂದು ಮತದಾರರು ತೋರಿಸುತ್ತಾರೆ
ಮೊದಲೆಲ್ಲ ಚುನಾವಣಾ ವೇಳೆಯಲ್ಲಿ ಮಾತ್ರ ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಾಮೂಲಿಯಾಗಿದೆ. ಟೀಕೆ, ಆರೋಪ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸದಾ ಪ್ರಚಾರದಲ್ಲಿರುವುದು ರಾಜಕಾರಣಿಗಳಿಗೆ ಅಭ್ಯಾಸವಾಗಿದೆ. ರಾಜಕೀಯ ನಾಯಕರು ಏನೇ ಹೇಳಿದರೂ ಸಂದರ್ಭ ಬಂದಾಗ ಏನು ಮಾಡಬೇಕು ಎಂಬುದನ್ನು ಮತದಾರರು ತೋರಿಸುತ್ತಾರೆ. ಈಗಾಗಲೇ ಅದನ್ನು ತೋರಿಸಿದ್ದಾರೆ. ಹೀಗಾಗಿ ನಾಯಕರು ಏನೇ ಹೇಳಿದರೂ ಮತದಾರರು ಪ್ರಬುದ್ಧರಾಗಿದ್ದಾರೆ ಎಂಬುದನ್ನು ಮಾತ್ರ ಮರೆಯಬಾರದು ಎಂದು ಜಿ.ಎಸ್.ಬಸವರಾಜು ಹೇಳಿದ್ದಾರೆ.