100% ಕೆ.ಆರ್.ಪೇಟೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಹಣ ಹಂಚುತ್ತಿದ್ದಾರೆ: ಆರೋಪ
ಹಾಸನ, ಡಿ 4: ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಮತದಾನ ನಾಳೆ (ಡಿ 5) ನಡೆಯಲಿದೆ. ಮೂರೂ ಪಕ್ಷಗಳು ಹಣ, ಇತರ ವಸ್ತುಗಳನ್ನು ಹಂಚುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ವಿರುದ್ದ ಗುರುತರ ಆರೋಪವನ್ನು ಮಾಡಿದ್ದಾರೆ. ಜೊತೆಗೆ, ಮೈಸೂರು ಐಜಿಪಿ ವಿರುದ್ದವೂ ಕಿಡಿಕಾರಿದ್ದಾರೆ.
"ಕೆ.ಆರ್.ಪೇಟೆ ಗಡಿ ದಡದಳ್ಳಿ ಎನ್ನುವಲ್ಲಿ ಖುದ್ದಾಗಿ ಡಿಸಿಎಂ ಹಣ ಹಂಚಿದ್ದಾರೆ. ಅಲ್ಲೇ ವಾಸ್ತವ್ಯ ಹೂಡಿ, ಹಣ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಐಜಿಪಿ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ" ಎಂದು ರೇವಣ್ಣ ಆರೋಪಿಸಿದ್ದಾರೆ.

"ಮೈಸೂರು ಐಜಿಪಿ, ಎಲ್ಲಾ ಪೊಲೀಸ್ ಭದ್ರತೆಗಳನ್ನು ನೀಡಿ, ಅಶ್ವಥ್ ನಾರಾಯಣ ಅವರಿಗೆ ದುಡ್ಡು ಹಂಚುವ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸವನ್ನೂ ಮಾಡುತಿದ್ದಾರೆ" ಎಂದು ರೇವಣ್ಣ ಕಿಡಿಕಾರಿದ್ದಾರೆ.
"ನನ್ನ ಮಗನ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಎ1 ಮಾಡಲಾಗಿದೆ. ಕೂಡಲೇ ಐಜಿಪಿಯನ್ನು ಬದಲಾಯಿಸಬೇಕು. ಇಲ್ಲದಿದ್ದರೆ, ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ" ಎಂದು ರೇವಣ್ಣ, ಆಯೋಗಕ್ಕೆ ಮನವಿ ಮಾಡಿದ್ದಾರೆ.
ಬಿಜೆಪಿ ಮುಖಂಡನ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಪೊಲೀಸರು ಸೂರಜ್ ರೇವಣ್ಣ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕೆ. ಆರ್. ಪೇಟೆ ಗಡಿ ಭಾಗದ ನಂಬಿಹಳ್ಳಿಯಲ್ಲಿ ಬೆಂಗಳೂರಿನ ಪಾಲಿಕೆ ಸದಸ್ಯನ ಕಾರಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications