ಮದುವೆಗೆ ಹೆಚ್ಚು ಜನ ಸೇರಿದರೆ ಕಲ್ಯಾಣ ಮಂಟಪಕ್ಕೂ ದಂಡ!
ಹಾಸನ, ನವೆಂಬರ್ 25 : ಕರ್ನಾಟಕದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ತಡೆಯಲು ಜನಸಂದಣಿ ಸೇರುವುದನ್ನು ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ವಿವಾಹ ಮತ್ತಿತರ ಸಮಾರಂಭಗಳಿಗೆ ಕಲ್ಯಾಣ ಮಂಟಪಗಳಲ್ಲಿ ಹೆಚ್ಚು ಜನ ಸೇರಿದಂತೆ ದಂಡ ಹಾಕಲಾಗುತ್ತದೆ.
"ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವ ಕಲ್ಯಾಣ ಮಂಟಪದ ಮೇಲೆ ದಂಡ ವಿಧಿಸಿ" ಎಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ನವೀನ್ ರಾಜ್ ಸಿಂಗ್ ನಿರ್ದೇಶನ ನೀಡಿದ್ದಾರೆ.
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನದಲ್ಲಿ ನಡೆಯುವ ಮದುವೆ, ಮತ್ತಿತರ ಸಮಾಂಭದಲ್ಲಿ 200ಕ್ಕೂ ಅಧಿಕ ಜನ ಸೇರಬಾರದು. ಜನರ ಮಿತಿಯನ್ನು ನಿರ್ವಹಣೆ ಮಾಡದ ಮಾಲೀಕರಿಗೆ ನೋಟಿಸ್ ಕೊಟ್ಟು, ದಂಡ ವಿಧಿಸಲಾಗುತ್ತದೆ.

ಜನಸಂದಣಿ ಸೇರದಂತೆ ಕ್ರಮ ಕೈಗೊಳ್ಳಬೇಕು. ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಡುವವರಿಗೆ ದಂಡ ಹಾಕಬೇಕು. ಇದಕ್ಕಾಗಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ.
ಕೋವಿಡ್ ಔಷಧಿ ಶೀಘ್ರದಲ್ಲೇ ಜಿಲ್ಲೆಗೆ ತಲುಪಬಹುದು. ಅದರ ಶೇಖರಣೆಗೆ ಹೆಚ್ಚುವರಿಯಾಗಿ ಘಟಕಗಳನ್ನು ಸ್ಥಾಪಿಸಿ ವಿತರಣೆಗಾಗಿ ವ್ಯವಸ್ಥಿತ ಯೋಜನೆ ರೂಪಿಸಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, "ಮದುವೆ ಮುಂತಾದ ಸಮಾರಂಭದಲ್ಲಿ 200ರವರೆಗೆ ಜನರು ಮಾತ್ರ ಸೇರುವ ಅವಕಾಶವಿದ್ದು ನಿಯಮ ಉಲ್ಲಂಘಿಸಿ ಸಮಾರಂಭ ನೆಡೆಸುವ ಕಟ್ಟಡದ ಮಾಲೀಕರು, ವಧುವರರ ಕುಟುಂಬದ ವಿರುದ್ದ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ" ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications