ಪ್ರೀತಂ ಗೌಡ ಮನೆಗೆ ಮಾಜಿ ಸಚಿವ ಎ.ಮಂಜು ಭೇಟಿ
ಹಾಸನ, ಫೆಬ್ರವರಿ 14 : ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಎ.ಮಂಜು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಮನೆಗೆ ಭೇಟಿ ನೀಡಿದರು. ಕರ್ನಾಟಕದ ರಾಜಕೀಯದಲ್ಲಿ ಈ ಭೇಟಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಗುರುವಾರ ಎ.ಮಂಜು ಅವರು ಪ್ರೀತಂ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಪ್ರೀತಂ ಗೌಡ ಅವರ ಪೋಷಕರಿಗೆ ಭಯಪಡಬೇಡಿ ಎಂದು ಸಲಹೆ ನೀಡಿದರು. ಪ್ರೀತಂ ಗೌಡ ಅವರ ನಿವಾಸದ ಮೇಲೆ ಬುಧವಾರ ಜೆಡಿಎಸ್ ಕಾರ್ಯಕರ್ತರು ಕಲ್ಲಿ ತೂರಾಟ ನಡೆಸಿದ್ದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎ.ಮಂಜು ಅವರು, 'ಇಂತಹ ಘಟನೆ ಎಲ್ಲೂ ಆಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾವು ಪಾಲುದಾರರು. ಮಾಜಿ ಪ್ರಧಾನಿಗಳ ತವರಲ್ಲಿ ಈ ಘಟನೆ ನಡೆದಿರುವುದು ಮತದಾರನಿಗೆ ಮಾಡಿದ ಅವಮಾನ' ಎಂದು ಹೇಳಿದರು.

'ಈ ಹಿಂದೆಯೂ ಕಾಂಗ್ರೆಸ್ ಮೇಲೆ ಈ ರೀತಿಯ ಹಲ್ಲೆ ನಡೆದಿತ್ತು. ರಾಜಕಾರಣದಲ್ಲಿ ಶತ್ರುವೂ ಇಲ್ಲ, ಮಿತ್ರರೂ ಇಲ್ಲ. ಮಾನವೀಯತೆ ದೃಷ್ಠಿಯಿಂದ ಭೇಟಿ ನೀಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ' ಎಂದು ಸ್ಪಷ್ಟಪಡಿಸಿದರು.
'ಸಮ್ಮಿಶ್ರ ಸರ್ಕಾರದಲ್ಲಿ ನಾವು ಭಾಗಿಯಾಗಿದ್ದರಿಂದ ನಮಗೂ ಸಹ ಮುಜುಗರ ಆಗುತ್ತದೆ. ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಕಾರ್ಯವೈಖರಿ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಈ ರೀತಿಯ ಘಟನೆಗಳು ನಡೆದಾಗ ಪಕ್ಷಾತೀತವಾಗಿ ಭೇಟಿ ನೀಡಿ ಧೈರ್ಯ ತುಂಬಿದರೆ ಮುಂದೆ ಇಂತಹ ಘಟನೆ ನಡೆಯುವುದಿಲ್ಲ' ಎಂದು ಎ.ಮಂಜು ತಿಳಿಸಿದರು.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಎ.ಮಂಜು ಅವರು ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇಂದು ಅವರು ಬಿಜೆಪಿ ಶಾಸಕ ಪ್ರೀತಂ ಗೌಡ ಮನೆಗೆ ಭೇಟಿ ಕೊಟ್ಟಿರುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.












Click it and Unblock the Notifications