ಆನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದವರಿಗೆ 15 ಲಕ್ಷ ರೂ ಪರಿಹಾರ: ಬಸವರಾಜ ಬೊಮ್ಮಾಯಿ
ಹಾಸನ, ನವೆಂಬರ್ 23: ಮಲೆನಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಹಳೇಬೀಡಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಹಲವಾರು ವರ್ಷ ಬರಗಾಲವಿದ್ದ ಸಂದರ್ಭದಲ್ಲಿ ಆನೆಗಳು ಬಂದಿದ್ದವು ವಾಪಸ್ಸು ಹೋಗಿಲ್ಲ. ಕೆಲವು ಸಂದರ್ಭಗಳಲ್ಲಿ ಮನುಷ್ಯರೂ ಕೂಡ ಕಾಡಿಗೆ ಹೋದಾಗ ಅಹಿತಕರ ಘಟನೆ ನಡೆದಿವೆ. ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಇಂತಹ ಸಮಸ್ಯೆ ಉಂಟಾಗಿದೆ ಎಂದರು.
ಗುಂಪುಗಳಲ್ಲಿ ಆನೆಗಳು ಇದ್ದರೆ ಅವುಗಳನ್ನು ಚದುರಿಸುವುದು ಕಷ್ಟ. ಈ ಬಗ್ಗೆ ಸಭೆ ಕರೆದು ಅರಣ್ಯ ಪಡೆಗಳನ್ನು ರಚಿಸಲಾಗಿದೆ. ಯಾವುದೋ ಒಂದು ಘಟನೆ ಸಂಭವಿಸಿದಾಗ ಕಾರ್ಯಾಚರಣೆ ಮಾಡಿದರೆ ಸೂಕ್ತವಲ್ಲ. ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಕಾರ್ಯಪಡೆ ರಚಿಸಲಾಗಿದೆ. ತರಬೇತಿ, ವಾಹನ, ಸಲಕರಣೆ, ನಿಯಂತ್ರಣಾ ಕೊಠಡಿ ಸ್ಥಾಪಿಸಿ ಪ್ರತಿ ನಿತ್ಯ ಗಸ್ತು ತಿರುಗುವುದು, ಕಾರ್ಯಾಚರಣೆ ಮಾಡುವುದು ಹಾಗೂ ಆನೆಗಳು ಹೆಚ್ಚಿದ್ದ ಕಡೆ ಎಲ್ಲಾ ಪಡೆಗಳು ಹಾಗೂ ನೂರಾರು ಜನ ಸೇರಿ ಆನೆಗಳನ್ನು ಹಿಮ್ಮೆಟ್ಟಿಸಲು ವಾರ, ಹತ್ತುದಿನಗಳ ಕಾಲ ನಿರಂತರ ಪ್ರಯತ್ನ ಮಾಡಲು ಸೂಚಿಸಲಾಗಿದೆ.

ಇದಕ್ಕೆ ಅಗತ್ಯ ಅನುದಾನ ನೀಡಿದ್ದು, ಈ ವರ್ಷದ ಬಜೆಟ್ನಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಬಂಡೀಪುರದಲ್ಲಿ ಹೊಸ ಮಾದರಿಯ ಬೇಲಿಯನ್ನು ಹಾಕಲಾಗುತ್ತಿದೆ. ಆನೆ ಕಾರಿಡಾರ್ಅನ್ನು ಸಂಪೂರ್ಣವಾಗಿ ಕಾಯುವ ಕೆಲಸ ಮಾಡಲಾಗುವುದು ಎಂದರು.
ಇನ್ನು ಆನೆ ತುಳಿತಕ್ಕೆ ಒಳಗಾಗಿ ಸಾವನ್ನು ಅಪ್ಪಿದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಮರಣ ಹೊಂದಿದವರ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಬಗ್ಗೆ ಗಂಭಿರವಾಗಿ ಪರಿಗಣಿಸಲಾಗುವುದು ಎಂದರು.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ
ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ಪ್ರತಿಕ್ರಿಯೆ ನೀಡಿ 18 ಸ್ಲೀಪರ್ ಸೆಲ್ಗಳನ್ನು ಪತ್ತೆ ಹಚ್ಚಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಪಕ್ಕದ ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ತರಬೇತಿ ಪಡೆದು ಬರುವುದು ನಿರಂತರ ಪ್ರಕ್ರಿಯೆ ಆಗಿದೆ. ವಿಶೇಷವಾಗಿ ನರೇಂದ್ರ ಮೋದಿಯವರು ಬಂದ ನಂತರ, ಎಲ್ಲಿಯೂ ಇದಕ್ಕೆ ಅವಕಾಶ ನೀಡಿಲ್ಲ. ಹಿಂದೆ ಬೆಂಗಳೂರು, ಹೈದರಾಬಾದ್ ಮುಂಬೈನಲ್ಲಿ ಆಗಿತ್ತು. ಈಗ ಅವುಗಳಿಗೆ ಕಡಿವಾಣ ಹಾಕಿದ್ದದರೂ ಕರಾವಳಿ ಪ್ರದೇಶದಲ್ಲಿ ಸ್ಲೀಪರ್ಸೆಲ್ಗಳ ಮೇಲೆ ನಿಗಾ ಇರಿಸಲಾಗಿದೆ ಎಂದರು.
ಹಿಂದೆ ನಾನು ಗೃಹ ಮಂತ್ರಿ ಇದ್ದ ಸಂದರ್ಭದಲ್ಲಿ ಎಲ್ಲಾ ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳಿಗೆ ಕರೆ ನೀಡಿದ್ದೆ. ಬಹಳಷ್ಟು ಜನ ಕೃತ್ಯವೆಸಗಿ ಗಡಿದಾಟುತ್ತಾರೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಒಗ್ಗಟ್ಟಿನಿಂದ ಸಮನ್ವಯದೊಂದಿಗೆ ಮಾಹಿತಿ ಹಂಚಿಕೊಳ್ಳುವುದು , ಅಲ್ಲಿರುವ ಸೆಲ್ ಗಳಿಗೆ ಕಡಿವಾಣ ಹಾಕಲು ಸಾಧ್ಯ. ಈಗಲೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಾಗುವುದು ಎಂದರು.












Click it and Unblock the Notifications