ನನ್ನದು ಅಭಿವೃದ್ಧಿಯೇ ಐಡಿಯಾಲಜಿ... ಶಾಸಕ ಪ್ರೀತಂಗೌಡ ವಿರುದ್ಧ ರೇವಣ್ಣ ಕಿಡಿ
ಹಾಸನ, ಸೆಪ್ಟೆಂಬರ್ 5: ''ಶಾಸಕ ಪ್ರೀತಮ್ ಗೌಡರ ಐಡಿಯಲಾಜಿ ಏನು ಅಂತಾ ನನಗೆ ಗೊತ್ತಿಲ್ಲ. ಬಿಜೆಪಿ ಮುಖಂಡನಿಗೆ ಮಾನ ಮರ್ಯಾದೆ ಇದ್ದರೆ ಲೂಟಿ ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ಎರಡು ವರ್ಷದಿಂದ ಮುಂದೂಡಲ್ಪಡುತ್ತಿರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಲಿ'' ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ರೇವಣ್ಣ ಅವರ ಹೊಳೆನರಸೀಪುರದ ಐಡಿಯಾಲಜಿ ಹಾಸನ ಕ್ಷೇತ್ರಕ್ಕೆ ಹೊಂದಾಣಿಕೆ ಆಗುವುದಿಲ್ಲ. ಅವರು ಹಾಸನ ಕ್ಷೇತ್ರದಿಂದ ಸ್ಪರ್ಧೆಗಿಳಿದರೆ 50 ಸಾವಿರ ಮತಗಳ ಅಂತರದಿಂದ ಸೋಲಿಸುವೆ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಹೇಳಿದ್ದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ ಅವರು, "ನನಗೆ ಯಾವ ಐಡಿಯಾಲಜಿ ಗೊತ್ತಿಲ್ಲದೆ ಇರುವುದರಿಂದ ಹಾಸನ ನಗರದಲ್ಲಿ ಇಡೀ ಏಷ್ಯಾ ಖಂಡದಲ್ಲೇ ನಂಬರ್ ಒನ್ ಬಸ್ ನಿಲ್ದಾಣ ಮಾಡಿದ್ದೇನೆ. 200 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆ, ಹೈಕೋರ್ಟ್ ಮಾದರಿಯಲ್ಲಿಯೇ ಜಿಲ್ಲಾ ನ್ಯಾಯಾಲಯದ ಸಂಕಿರ್ಣ ನಿರ್ಮಾಣ, ಹಾಸನ - ಬೆಂಗಳೂರು ರೈಲು ಮಾರ್ಗ, ಹಾಸನ - ಮೈಸೂರು ರೈಲು ಮಾರ್ಗದ ಅಭಿವೃದ್ಧಿ ಮಾಡಿದ್ದೇನೆ, ಚನ್ನಪಟ್ಟಣ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹೊಸದಾಗಿ ಬಡಾವಣೆ ನಿರ್ಮಾಣ ಮಾಡಿ ಸಾವಿರಾರು ಮನೆಗಳ ನಿರ್ಮಾಣ ಮಾಡಿಸಿದ ಐಡಿಯಾ ಮಾತ್ರ ನನಗೆ ಗೊತ್ತು, ಆದರೆ ಅವರಂತೆ ಎಲ್ಲಿ ಎಷ್ಟು ಲೂಟಿ ಮಾಡಬೇಕೆಂಬ ಐಡಿಯಾಲಜಿ ಗೊತ್ತಿಲ್ಲ'' ಎಂದು ತಿರುಗೇಟು ನೀಡಿದರು.

ಅವರಿಂದ ನಮಗೆ ಗೌರವವು ಬೇಡ? ಏನೂ ಬೇಡ? ಅಭಿವೃದ್ಧಿ ಕೆಲಸ ಮಾಡಲಿ ಸಾಕು. ಅವರ ಐಡಿಯಲಾಜಿ ಯಾವುದು ಎಂಬುದು ನನಗೆ ಗೊತ್ತಿಲ್ಲ. 2023ರ ಚುನಾವಣೆಯಲ್ಲಿ ಜನ ಅದಕ್ಕೆಲ್ಲಾ ಉತ್ತರ ಕೊಡಲಿದ್ದಾರೆ. ಅಧಿಕಾರಿಗಳು ದುಡ್ಡಿನ ಅಮಲಿನಲ್ಲಿ ಮೆರೆಯುತ್ತಿದ್ದಾರೆ. ಅವರಿಗೆ ದೇವರು ಶಿಕ್ಷೆ ಕೊಡುವ ಕಾಲ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ಐಡಿಯಾಲಜಿ ಇರುವವರು 10 ವರ್ಷದಿಂದ ಹಾಸನ-ಸಕಲೇಶಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಏಕೆ ಪೂರ್ಣಗೊಳಿಸಿಲ್ಲ? ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಲು ಬಿಜೆಪಿ ಮುಖಂಡರಿಗೆ ಐಡಿಯಾ ಕೊಡಲಿ ಎಂದು ಪ್ರೀತಂ ಜೆ.ಗೌಡರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಜಿಪಂ, ತಾಪಂಗಳಿಗೆ ಚುನಾವಣೆ ನಡೆಸಲಿ ಎಂದು ಆಗ್ರಹಪಡಿಸಿದರು.
ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ
ಕಳೆದ ಒಂದು ತಿಂಗಳಿಂದ ಹೆಚ್ಚಿನ ಮಳೆ ಬಂದು ಕೋಟ್ಯಂತರ ರೂ. ನಷ್ಟವಾಗಿದೆ. ಬೇಲೂರು ಸಕಲೇಶಪುರ, ಆಲೂರು ಕಟ್ಟಾಯ ಹೋಬಳಿಯಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಪಾರ ಬೆಳೆ ಹಾಗೂ ಮನೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವಂತೆ ಮನವಿ ಮಾಡಿದ್ದೇನೆ. ಕೋವಿಡ್ ಸಂಕಷ್ಟದಿಂದ ರೈತರು ಇನ್ನೂ ಸುಧಾರಿಸಿಕೊಂಡಿಲ್ಲ. ಬೆನ್ನ ಹಿಂದೆಯೇ ಜಿಲ್ಲೆಯಲ್ಲಿ ಶೇ.80 ರಷ್ಟು ಆಲೂಗಡ್ಡೆ ಬೆಳೆ ನಾಶವಾಗಿದೆ. ಆಲೂ ಬಿತ್ತನೆ ಪ್ರಾರಂಭದಿಂದಲೂ ಮಳೆ ಬಂದು ಹಾನಿಯಾಗಿದೆ. ಜೊತೆಗೆ ಶುಂಠಿ ಹಾಗೂ ಮೆಕ್ಕೆ ಜೋಳವು ಹಾನಿಯಾಗಿದೆ. ಕಳೆದ ಹತ್ತಾರು ವರ್ಷದಲ್ಲಿ ಇಂತಹ ಮಳೆಯನ್ನೇ ನಾವು ನೋಡಿಲ್ಲ. ರಸ್ತೆ ರಿಪೇರಿಗೆ ಬಿಡಿಗಾಸು ಹಣ ನೀಡಿಲ್ಲ. ಶಾಲಾ ಕಟ್ಟಡ ಬಿದ್ದು ಹೊಗುವ ಹಂತ ತಲುಪಿವೆ. ಹೊಳೆನರಸೀಪುರ ಕ್ಷೇತ್ರದಲ್ಲಿ 250ಕ್ಕು ಹೆಚ್ಚು ಕಟ್ಟಗಳು ಯಾವಾಗ ಬೇಕಾದರೂ ಬಿದ್ದು ಹೋಗುವ ಸ್ಥಿತಿಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದಿನ ಜಿಲ್ಲಾಧಿಕಾರಿ ಅವರು, ಮಳೆಯಿಂದ ಸುಮಾರು 450 ಕೋಟಿ ರೂ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದುವರೆಗೂ ಒಂದು ರೂ. ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಈ ಬಾರಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೆಲವು ಏರಿಗಳು ಒಡೆಯುವ ಆತಂಕದಲ್ಲಿವೆ. ಮೋದಿಯವರು ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ಮಾಡಲಿ ಎಂದು ಆಹ್ವಾನಿಸಿದರು.












Click it and Unblock the Notifications