ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಸೀರೆ, ಹಣ ಹಂಚಿದರೆ?
ಹಾಸನ, ನವೆಂಬರ್ 08 : ಹಾಸನದಲ್ಲಿ ಮಂಗಳವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಸೀರೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗಿದೆ.
ಪರಿವರ್ತನಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾವೇಶ ಮುಗಿದ ಬಳಿಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೀತಮ್ ಗೌಡ ಹೆಸರಿನಲ್ಲಿ ಸೀಲ್ ಹಾಕಿರುವ ಸೀರೆ ಕವರ್ಗಳನ್ನು ಮಹಿಳೆಯರಿಗೆ ವಿತರಣೆ ಮಾಡಲಾಗಿದೆ ಎಂಬುದು ಆರೋಪ.

ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗಿಶ್ ನಡೆಸುತ್ತಿರುವ ಸಹರ ಸಂಸ್ಥೆ ಸೀಲ್ ಇರುವ ಕೂಪನ್ ವಿತರಣೆ ಮಾಡಲಾಗಿದೆ. ಕೂಪನ್ ತೋರಿಸಿದವರಿಗೆ ಇಂತಿಷ್ಟು ಎಂದು ಹಣ ಹಂಚಲಾಗಿದೆ ಎಂಬ ಸುದ್ದಿ ಹಬ್ಬಿದೆ.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರೀತಮ್ ಗೌಡ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, 'ಸಮಾರಂಭದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೂಪನ್, ಸೀರೆ ಹಂಚಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಈ ರೀತಿ ಹಂಚಿಕೆ ಮಾಡಿದ್ದರೆ ಅದು ತಪ್ಪು' ಎಂದು ಹೇಳಿದ್ದಾರೆ.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ನವೆಂಬರ್ 3ರ ಶುಕ್ರವಾರ ತುರುವೇಕೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆದಿತ್ತು. ಅಲ್ಲಿಯೂ ಕಾರ್ಯಕ್ರಮ ಮುಗಿದ ಬಳಿಕ ಕಾರ್ಯಕರ್ತರಿಗೆ ಹಣ ಹಂಚುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ನವೆಂಬರ್ 8ರ ಬುಧವಾರ ಹಾಸನ ಜಿಲ್ಲೆಯ ಅರಕಲಗೋಡು, ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಲಿದೆ. ಗುರುವಾರ ನಾಯಕರು ವಿಶ್ರಾಂತಿ ಪಡೆಯಲಿದ್ದು, ಮಂಗಳೂರಿನಲ್ಲಿ ರಾಜ್ಯ ಕೋರಿ ಕಮಿಟಿ ಸಭೆ ನಡೆಯಲಿದೆ.











Click it and Unblock the Notifications