ಮುಂದಿನ ಸಲವೂ ನಮ್ಮದೇ ಸರಕಾರ, 150 ಸೀಟ್ ಪಕ್ಕಾ: ಸಚಿವ ಬಿಸಿ ಪಾಟೀಲ್
ಹಾಸನ, ಜುಲೈ, 4 : ಮುಂದಿನ ವಿಧಾನ ಸಭೆ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ, 150 ಸ್ಥಾನಗಳನ್ನು ಗೆದ್ದು 5 ವರ್ಷಗಳ ಕಾಲ ಆಡಳಿತ ನಡೆಸುತ್ತೇವೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಸೋಮವಾರ ಹಾಸನದಲ್ಲಿ ಹೇಳಿದ್ದಾರೆ.
ಜಿಲ್ಲೆಯ ಹಾಸನ ತಾಲೂಕಿನ ಕಾರೆಕೆರೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವಸತಿ ನಿಲಯಗಳನ್ನು ಉದ್ಘಾಟಿಸಿ ಮಾಧ್ಯಮದವರ ಜೊತೆಗೆ ಮಾತನಾಡಿದರು. ಕಾಂಗ್ರೆಸ್ ಸಮೀಕ್ಷೆಯಲ್ಲಿ 120 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು , " ಸರ್ವೆ ಮಾಡಿದವರು ಯಾರು, ಅವರವರ ಸರ್ವೆಯನ್ನ ಅವರೇ ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಸರ್ವೆ ಮಾಡುವವರು ರಾಜ್ಯದ ಜನ. ನಮ್ಮ ಸರ್ವೆ ಪ್ರಕಾರ ಬಿಜೆಪಿ ಪಕ್ಷ 150 ಸ್ಥಾನಗಳಲ್ಲಿ ಗೆಲ್ಲುತ್ತದ ಎಂದು ಹೇಳಿದೆ. ಈ ಮೂಲಕ ಮತ್ತೆ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತೇವೆ " ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, "ಈ ಕುರಿತು ನಾನು ಮಾನಾಡಲ್ಲ, ಅದು ಮುಖ್ಯಮಂತ್ರಿಗಳ ಪರಮಾಧಿಕಾರ, ಅದರ ಬಗ್ಗೆ ಸಮರ್ಪಕವಾದ ಉತ್ತರ ಕೊಡಲು ನನಗೆ ಯಾವುದೇ ರೀತಿಯ ಅಧಿಕಾರವಿಲ್ಲ. ಮುಖ್ಯಮಂತ್ರಿಗಳು ಆ ಕುರಿತು ಸರಿಯಾದ ಸಮಯದಲ್ಲಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ," ಎಂದು ಕೃಷಿ ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.

ಪ್ರತ್ಯೇಕ ರಾಜ್ಯಕ್ಕೆ ಇದು ಸೂಕ್ತ ಸಮಯವಲ್ಲ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎನ್ನುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಅಂತಿಲ್ಲ. ಕಾಲೈ ತಸ್ಮೈ ನಮಃ, ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು. ಆ ರೀತಿ ಆಗುವುದೇ ಇಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಈಗ ಅದು ಸೂಕ್ತ ಸಮಯ ಅಲ್ಲಎಂದು ತಿಳಿಸಿದರು.

ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ
120 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಏನು ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಸಾಮೂಹಿಕ ನಾಯಕತ್ವ ಅಂತಾ ಹೇಳ್ತಾರೆ ,ಒಂದು ಕಡೆ ಸಿದ್ದರಾಮೋತ್ಸವ ಅಂತ ಹೇಳ್ತಾರೆ. ಅವರವರಲ್ಲೇ ಹೊಂದಾಣಿಕೆ ಇಲ್ಲ, ಅಲ್ಲಿ ಕಚ್ಚಾಟ ನಡೀತಿದೆ. ಆದರೆ ಅವರ ಕಚ್ಚಾಟ ಅವರ ವೈಯಕ್ತಿಕ ವಿಚಾರ, ಅದಕ್ಕೂ ನಮಗೂ ಸಂಬಂಧ ಇಲ್ಲ. ಆದರೆ ಇವತ್ತು ಕಾಂಗ್ರೆಸ್ ಎಲ್ಲಾ ಕಡೆ ನಿರ್ಣಾಮ ಆಗಿದೆ, ಮಹಾರಾಷ್ಟ್ರದಲ್ಲಿ ಇತ್ತು, ಮೊನ್ನೆ ಅಲ್ಲಿ ಕೂಡ ಹೋಯ್ತು, ಪಂಜಾಬ್ಲಿ ಇತ್ತು ಅಲ್ಲಿಯೂ ಹೋಯ್ತು. ಎಲ್ಲಿಯೂ ಕಾಂಗ್ರೆಸ್ಗೆ ನೆಲೆಯಿಲ್ಲ.ಇಲ್ಲಿ ಉಳಿದುಕೊಳ್ಳುತ್ತೀವಿ ಎಂಬ ಭ್ರಮಾಲೋಕದಲ್ಲಿ ಇದ್ದಾರೆ. ಅದು ಅವರ ಭ್ರಮೆ ಭ್ರಮೆಯಾಗಿಯೇ ಉಳಿಯುತ್ತೆ ಹೊರತು ನಿಜವಾಗುವುದಿಲ್ಲ ಎಂದು ಹೇಳಿದರು.

113 ನಂಬರ್ ಬಂದ್ರೆ ಯಾರುಬೇಕಾದರೂ ಸಿಎಂ ಆಗಬಹುದು
ಮುಂದಿನ ಭಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನೀವೆ ಕುಮಾರಸ್ವಾಮಿಯನ್ನೇ ಕೇಳಬೇಕು,
ಎಷ್ಟು ಸೀಟ್ ತೆಗೆದುಕೊಂಡು ಸಿಎಂ ಆಗ್ತೀರಾ ಎಂದು ಕುಮಾರಸ್ವಾಮಿ ಅವರನ್ನು ಕೇಳಿ. 122 ಸೀಟ್ ತೆಗೆದುಕೊಳ್ಳುತ್ತೀರಾ ? ಜೆಡಿಎಸ್ಗೆ ಮ್ಯಾಜಿಕ್ ನಂಬರ್ 113 ಸ್ಥಾನ ಬರುತ್ತಾ? . 113 ಮ್ಯಾಜಿಕ್ ನಂಬರ್ ಬಂದರೆ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ತಿಳಿಸಿದರು.

ಸರಿಯಾದ ಸಮಯಕ್ಕೆ ಗೊಬ್ಬರ ಪೂರೈಸಲು ಸೂಚನೆ
ಮುಂಗಾರು ಮಳೆ ನಂತರ ರಾಜ್ಯದ ಕೆಲೆವೆಡೆ ಬಿತ್ತನೆಗೆ ರೈತರು ಸಿದ್ಧರಾಗುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ರೈತರಿಗೆ ಸರಿಯಾದ ಸಮಯದಲ್ಲಿ ಗೊಬ್ಬರ, ಬಿತ್ತನೆ ಬೀಜ ಪೂರೈಕೆ ಮಾಡಿದ್ದೇವೆ. ಬಿತ್ತನೆ ಕಾರ್ಯ ಮುಗಿದಿರುವ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ರೈತರಿಗೆ ಅಗತ್ಯವಾದ ಗೊಬ್ಬರ ಪೂರೈಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.












Click it and Unblock the Notifications