ಭಕ್ತರ ದರ್ಶನಕ್ಕೆ ತೆರೆದ ಬೇಲೂರು ಚೆನ್ನಕೇಶವ ದೇವಾಲಯ
ಹಾಸನ, ಜುಲೈ 12: ವಿಶ್ವವಿಖ್ಯಾತ ಹಾಗೂ ಹೊಯ್ಸಳರ ಕಾಲದ ಶಿಲ್ಪ ಕಲೆಗೆ ಹೆಸರು ಮಾಡಿರುವ ಬೇಲೂರಿನ ಚೆನ್ನಕೇಶವ ಸ್ವಾಮಿ ದೇವಾಲಯ ಪ್ರವಾಸಿಗರು ಹಾಗೂ ಭಕ್ತರಿಗೆ ತೆರೆದಿದೆ.
ದೇಶ- ವಿದೇಶದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಚೆನ್ನಕೇಶವ ಸ್ವಾಮಿ ದೇವಾಲಯದ ಬಾಗಿಲನ್ನು ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸೋಮವಾರ ತೆರೆದು ಭಕ್ತರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ಈ ವೇಳೆ ಹಾಜರಿದ್ದ ಹಾಸನ ಶಾಸಕ ಕೆ.ಎಸ್. ಲಿಂಗೇಶ್ ಮತ್ತು ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ದ್ವಾರಬಾಗಿಲಿಗೆ ಪೂಜೆ ಸಲ್ಲಿಸಿದರು. ಆ ನಂತರ ಚೆನ್ನಕೇಶವ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಶಾಸಕ ಕೆ.ಎಸ್. ಲಿಂಗೇಶ್ ದೇವರ ದರ್ಶನ ಪಡೆದು, ಅರ್ಚಕ ಸಮೂಹವನ್ನು ಗೌರವಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, "ಕೊರೊನಾ ಮೊದಲ ಮತ್ತು ಎರಡನೇ ಅಲೆ ಕಾರಣದಿಂದ ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು. ಇದೀಗ ಕೊರೊನಾ ಪ್ರಕರಣ ಇಳಿಮುಖ ಕಂಡಿರುವುದರಿಂದ ರಾಜ್ಯ ಸರ್ಕಾರದ ಆದೇಶದಂತೆ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ದೇಗುಲಕ್ಕೆ ಆಗಮಿಸುವ ಭಕ್ತರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುದನ್ನು ಮರೆಯಬಾರದು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು,'' ತಿಳಿಸಿದರು.
Recommended Video
ದೇಗುಲದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ ಮಾತನಾಡಿ, "ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಆದರೆ ದಾಸೋಹದ ವ್ಯವಸ್ಥೆಗೆ ಸರ್ಕಾರದಿಂದ ಆದೇಶ ಬರಬೇಕಿದೆ. ದೇಗುಲಕ್ಕೆ ಬರುವ ಭಕ್ತರು ಕೊರೊನಾ ನಿಯಮ ಪಾಲಿಸಬೇಕೆಂದರು. ಆಗಮಿಕ ಅರ್ಚಕರಾದ ಕೃಷ್ಣ ಸ್ವಾಮಿ ಭಟ್ಟರ್, ಶ್ರೀನಿವಾಸ ಭಟ್ಟರ್ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿ ದೇವರ ದರ್ಶನ ಪಡೆಯಬೇಕೆಂದು,'' ಮನವಿ ಮಾಡಿದರು.












Click it and Unblock the Notifications