'ಹಲವು ಅಚ್ಚರಿಗಳು ನಡೆಯಲಿವೆ, ಕಾದು ನೋಡಿ': ಬಿಜೆಪಿ ಶಾಸಕ ಪ್ರೀತಂ ಗೌಡ
ಹಾಸನ, ಏಪ್ರಿಲ್ 24: ಹಾಸನದ ಶಕ್ತಿದೇವತೆ ಪುರದಮ್ಮನಿಗೆ ನಾಲ್ಕು ನೂರು ಹೋತವನ್ನು ಬಲಿಕೊಟ್ಟು ಹರಕೆ ತೀರಿಸಿದ್ದ ಶಾಸಕ ಪ್ರೀತಂ ಗೌಡ, ಜಿಲ್ಲೆಯ ರಾಜಕೀಯದಲ್ಲಿ ಹಲವು ಆಶ್ಚರ್ಯಕರ ಘಟನೆಗಳು ನಡೆಯಲಿವೆ, ಕಾದು ನೋಡಿ ಎಂದು ಹೇಳಿದ್ದಾರೆ.
"ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳು ನಡೆಯಲಿವೆ, ಯಾರ್ಯಾರು ಯಾವಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿದೆ. ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿಯವರು ಹಾಸನದಲ್ಲಿ ಸ್ಪರ್ಧಿಸುವಂತಿದ್ದರೆ, ಸ್ಪರ್ಧಿಸಲಿ"ಎಂದು ಪ್ರೀತಂ ಗೌಡ ಹೇಳಿದ್ದಾರೆ.
"ಹಾಸನದಿಂದ ಯಾರು ಸ್ಪರ್ಧಿಸಬೇಕೆಂದು ಶಕ್ತಿದೇವತೆ ಹಾಸನಾಂಬೆ ಮತ್ತು ಪುರದಮ್ಮನ ಬಳಿ ಪ್ರಾರ್ಥಿಸಿದ್ದೇನೆ. ಹಲವು ಜೆಡಿಎಸ್ ಶಾಸಕರು ಪಕ್ಷ ಬಿಡಲಿದ್ದಾರೆ ಎನ್ನುವುದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಮನೆಯ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಬೇಕಲ್ಲವೇ"ಎಂದು ಪ್ರೀತಂ ಗೌಡ ಪ್ರಶ್ನಿಸಿದ್ದಾರೆ.

"ನಮ್ಮ ಪಕ್ಷವನ್ನು ಸೇರಿಕೊಳ್ಳಿ ಎಂದು ನಾವು ಯಾರಿಗೂ ಆಹ್ವಾನವನ್ನೂ ನೀಡುತ್ತಿಲ್ಲ, ಬಲವಂತವೂ ಮಾಡುತ್ತಿಲ್ಲ. ಹಾಸನದಿಂದ ಸ್ಪರ್ಧಿಸುವಂತೆ ನಾನೇ ರೇವಣ್ಣ ಮತ್ತು ಭವಾನಿಯವರಿಗೆ ಆಹ್ವಾನ ನೀಡುತ್ತೇನೆ. ನಾನೇನೋ ರೆಡಿಯಾಗಿದ್ದೇನೆ, ತಯಾರಾಗಬೇಕಾದವರು ಅವರು"ಎಂದು ಪ್ರೀತಂ ಗೌಡ ಹೇಳಿದ್ದಾರೆ.
"ಹಾಸನ ಕ್ಷೇತ್ರದಲ್ಲಿ ನಾನು ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ, ನನ್ನ ಕೆಲಸದಿಂದ ಜನರಿಗೆ ತೃಪ್ತಿಯಾಗಿದ್ದರೆ ಜನರು ನನಗೆ ಮತ ನೀಡುತ್ತಾರೆ. ರೇವಣ್ಣ ಅವರ ಕೆಲಸ ಜನರಿಗೆ ತೃಪ್ತಿಯಾಗಿದ್ದರೆ, ಅವರಿಗೇ ಜನರು ಮತ ನೀಡಲಿ"ಎಂದು ಪ್ರೀತಂ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
"ಹಾಸನದಲ್ಲಿ ಸುಸಜ್ಜಿತ ತಾಲೂಕು ಕಚೇರಿ ನಿರ್ಮಿಸಬೇಕೆನ್ನುವ ಅಭಿಲಾಶೆಯನ್ನು ನಾನು ಹೊಂದಿದ್ದೇನೆ. ಇದಕ್ಕೆ ರೇವಣ್ಣ ಅವರ ಅನುಮತಿ ಯಾಕೆ, ಹಾಸನ ಯಾರ ಮನೆಯ ಆಸ್ತಿಯೂ ಅಲ್ಲ. ನಾನೇನೂ ಹೆಬ್ಬೆಟ್ಟಲ್ಲ, ನನ್ನ ವ್ಯಾಪ್ತಿಯ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ತೊಡಗಿಸಲು ನಾನೇಕೆ ಅವರ ಅನುಮತಿ ಕೇಳಬೇಕು"ಎಂದು ಪ್ರೀತಂ ಗೌಡ ಅವರು ರೇವಣ್ಣ ವಿರುದ್ದ ಕಿಡಿಕಾರಿದ್ದಾರೆ.












Click it and Unblock the Notifications