ಮುಂಬೈ-ತೆಲಂಗಾಣ, ವೀಕೆಂಡಲ್ಲಿ ಹೋಗಿ ಗ್ರಾಮದ ಬರ ಸಮಸ್ಯೆಗೆ ಪರಿಹಾರ ಕೊಟ್ಟ ಐಆರ್ಎಸ್ ಅಧಿಕಾರಿ
ವೀಕೆಂಡ್ ಬಂದ್ರೆ ಸಾಮಾನ್ಯವಾಗಿ ಎಲ್ಲರೂ ಮಾಡೋದೇನು? ಶಾಪಿಂಗ್, ಸಿನಿಮಾ ಇಲ್ಲವೆಂದರೆ ಸುದೀರ್ಘ ನಿದ್ರೆ. ಎಲ್ಲರೂ ಮಜಾ ಮಾಡಿಯೇ ಹೇಗೆ ವೀಕೆಂಡ್ ಕಳೆಯುವುದೆಂದು ಪ್ಲ್ಯಾನ್ ಮಾಡುತ್ತಾರೆ. ಆದರೆ ಈ ಐಆರ್ಎಸ್ ಅಧಿಕಾರ ಮಾತ್ರ ಎಸಿ ರೂಮಿನಿಂದ ಹೊರ ಬಂದು, ವಾರಾಂತ್ಯದಲ್ಲಿ ಮುಂಬೈನಿಂದ ತೆಲಂಗಾಣದ ಹಳ್ಳಿಗೆ ಪಯಣಿಸಿ ಬರ ಸಮಸ್ಯೆಗೆ ಪರಿಹಾರ ನೀಡಿ, ರೈತರ ಸಮಸ್ಯೆಗೆ ಪ್ರಾಕ್ಟಿಕಲ್ ಪರಿಹಾರ ಕೊಟ್ಟಿದ್ದಾರೆ. ನೀರಿಲ್ಲದೇ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿ, ಪುಣ್ಯ ಕಟ್ಟಿಕೊಂಡಿದ್ದಾರೆ. ಇಂಥ ಪುಣ್ಯಾತ್ಮನ ಯಶೋಗಾಥೆ ಇದು.
ಆದಾಯ ತೆರಿಗೆ ಇಲಾಖೆಯ ಜಂಟಿ ಕಮಿಷನರ್ ಡಾ. ಪಿ. ಸುಧಾಕರ್ ನಾಯಕ್ ಶುಕ್ರವಾರ ಆಫೀಸ್ ಕೆಲಸ ಮುಗಿಸಿ, ಮುಂಬೈನಿಂದ ರಾತ್ರಿ ಬಸ್ ಹತ್ತಿ ತೆಲಂಗಾಣದ ಪುಟ್ಟ ಹಳ್ಳಿ ನಾರಾಯಣಖೇಡ್ಗೆ ಹೊರಡುತ್ತಿದ್ದರು. ಬರೋಬ್ಬರಿ ಕೆಲವು ವಾರಗಳ ಕಾಲ 600 ಕಿ.ಮೀ ದೂರ ಪಯಣಿಸಿ, ಇವರು ಸೃಷ್ಟಿಸಿದ ಕ್ರಾಂತಿ ಮಾತ್ರ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ.

ನಾರಾಯಣಖೇಡ್ ರೈತರ ಸಮಸ್ಯೆ ಏನು?
ತೆಲಂಗಾಣ ರಾಜ್ಯದ ನಾರಾಯಣಖೇಡ್ ರೈತರಿಗೆ ವರ್ಷಗಳಿಂದ ಒಂದೇ ಚಿಂತೆ, ಕೊಳವೆಬಾವಿಗಳು ಬತ್ತಿ ಹೋಗುತ್ತಿದ್ದವು. ಎಷ್ಟು ಆಳ ಕೊರೆದರೂ ನೀರಿನ ಒರತೆಯೇ ಸಿಗುತ್ತಿರಲಿಲ್ಲ. ಮುಂಗಾರಿನಲ್ಲಿ ಮಳೆ ಬಂದರೂ, ಆ ನೀರು ಭೂಮಿಯೊಳಗೆ ಇಂಗುವ ಮುನ್ನವೇ ಹರಿದು ಹೋಗುತ್ತಿತ್ತು. ಸಿಕ್ಕ ನೀರನ್ನು ಶೇಖರಿಸಿಕೊಳ್ಳುವ ಜಾಣ್ಮೆಯೂ ಈ ಬಡ ಮುಗ್ಧರಿಗೆ ತಿಳಿದಿರಲಿಲ್ಲ. ಇದರಿಂದ ಬೆಳೆ ನಷ್ಟ, ಜೀವನೋಪಾಯದ ಅನಿಶ್ಚಿತತೆ ಸಾಮಾನ್ಯವಾಗಿತ್ತು.
ಸ್ವಇಚ್ಛೆಯಿಂದ ರೈತರ ಸಹಾಯಕ್ಕೆ ಬಂದ ನಾಯಕ್
ಡಾ. ನಾಯಕ್ ಅವರಿಗೆ ಈ ಗ್ರಾಮದ ರೈತರು ಕಾಲಿಗೆ ಬಿದ್ದು ಸಹಾಯ ಮಾಡುವಂತೆ ಏನೂ ಕೇಳಿರಲಿಲ್ಲ. ಅಥವಾ ಹೀಗೆ ಮಾಡೆಂದೂ ಸರಕಾರಿ ಆದೇಶವೂ ಇರಲಿಲ್ಲ. ಆದರೆ 'ಬೇರೆಯವರಿಗಿಂತ ಒಂದು ಹೆಜ್ಜೆ ಮುಂದಿಡಬೇಕು' ಎಂಬ ನಂಬಿಕೆಯಿಂದ ಪರಿಸರವಾದಿ ಪಾಲಡುಗು ಜ್ಞಾನೇಶ್ವರ್, ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಸ್ವ ಇಚ್ಛೆಯಿಂದ ಕೈ ಜೋಡಿಸಿದರು.
ಸರಳ ಆಲೋಚನೆ, ದೊಡ್ಡ ಪರಿಣಾಮ

ದುಬಾರಿ ಯಂತ್ರೋಪಕರಣ ಬೇಡ, ದೊಡ್ಡ ನಿರ್ಮಾಣ ಯೋಜನೆಯೂ ಬೇಡ. ತಂಡ ಸ್ಥಳೀಯ ಸಾಮಗ್ರಿ ಬಳಸಿ ಎರಡು ಸಮುದಾಯದವರು ಸೇರಿ ಇಂಗು ಗುಂಡಿಗಳು, ಕೃಷಿ ಹೊಂಡಗಳು ನಿರ್ಮಿಸಿ ಸಮಸ್ಯೆಗೆ ತಾತ್ಕಾಲಿಕವಲ್ಲ, ಶಾಶ್ವತ ಪರಿಹಾರವನ್ನೇ ನೀಡುವಲ್ಲಿ ಯಶಸ್ವಿಯಾದರು. ಒಟ್ಟು ವೆಚ್ಚ ಕೇವಲ ₹2 ಲಕ್ಷ. ಇದು ಮಳೆ ನೀರು ನಿಧಾನವಾಗಿ ಭೂಮಿಯೊಳಗೆ ಇಂಗಿ, ಅಂತರ್ಜಲ ಮರುಪೂರಣಗೊಳ್ಳಲು ನೆರವಾಯಿತು. ಇದು ಆ ಗ್ರಾಮದ ಜನರಲ್ಲಿ ತಂದ ಉತ್ಸಾಹ ಮಾತ್ರ ಅಷ್ಟಿಷ್ಟಲ್ಲ. ಜೀವನವನ್ನೇ ಬದಲಾಯಿಸಿಬಿಟ್ಟಿತು.
ಇಟ್ಟ ನಂಬಿಕೆಗೆ ಸಿಕ್ಕ ಜಯ
ಆರಂಭದಲ್ಲಿ ಗ್ರಾಮಸ್ಥರಿಗೆ ಈ ಅಧಿಕಾರಿಯ ಮಾತಲ್ಲಿ ನಂಬಿಕೆಯೇ ಇರಲಿಲ್ಲ. ಆದರೆ ಡಾ. ನಾಯಕ್ ಪ್ರತಿ ವಾರ ರಾತ್ರಿ ಇಡೀ ಪ್ರಯಣಿಸಿ, ದೂರದೂರಿಗೆ ಬಂದು, ಎಲ್ಲರ ಜೊತೆ ಬಿಸಿಲಿನಲ್ಲಿಯೇ ನಿಂತು ಕಲ್ಲು, ಮಣ್ಣೆಂದು ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡಿದ್ದರಿಂದ ಬಹುಬೇಕ ಸಮಸ್ಯೆಗೊಂದು ಪರಿಹಾರ ಸಿಕ್ಕುವಂತಾಯಿತು. ಅಷ್ಟೇ ಅಲ್ಲ ಗ್ರಾಮಸ್ಥರಿಗೂ ಈ ಅಧಿಕಾರ ಮೇಲೆ ನಂಬಿಕೆ ಬಂದು, ಸಂಪೂರ್ಣ ಕೈ ಜೋಡಿಸಿದರು. ಕೇವಲ ಏಳೇ ಏಳು ವಾರಗಳಲ್ಲಿ ನಿರೀಕ್ಷಿತ ಪಲಿತಾಂಶ ದೊರೆದು, ರೈತರ ಮುಖದಲ್ಲಿ ಮಂದಹಾಸ ಮೂಡಿತು.

ಅಧಿಕಾರ ನಡೆ ಎಲ್ಲರಿಗೂ ಸ್ಫೂರ್ತಿ:
* ಬದಲಾವಣೆಗೆ ಯಾವಾಗಲೂ ದೊಡ್ಡ ಬಜೆಟ್ ಬೇಕಿಲ್ಲ - ಸ್ಥಳೀಯ ಸಂಪನ್ಮೂಲವೇ ಸಾಕಾಗಬಹುದು
* ಸಮುದಾಯದ ನಂಬಿಕೆ ಗಳಿಸಲು ಮಾತಿಗಿಂತ ಕೃತಿ ಮುಖ್ಯ
* ಒಬ್ಬ ವ್ಯಕ್ತಿಯ ನಿರಂತರ ಪ್ರಯತ್ನ ಇಡೀ ಗ್ರಾಮದ ಭವಿಷ್ಯ ಬದಲಿಸಬಲ್ಲದು
ಇಂದು ನಾರಾಯಣಖೇಡ್ನಲ್ಲಿ ಒಂದು ಕಾಲದಲ್ಲಿ ವ್ಯರ್ಥವಾಗುತ್ತಿದ್ದ ಮಳೆನೀರು ಭೂಮಿಯ ಒಡಲು ಸೇರುತ್ತಿದೆ. ಡಾ. ನಾಯಕ್ ಅವರ ಕಥೆ ಹೇಳುವುದಿಷ್ಟೇ - ಶಾಶ್ವತ ಬದಲಾವಣೆ ದೊಡ್ಡ ಘೋಷಣೆಗಳಿಂದಲ್ಲ, ಒಂದು ವಾರಾಂತ್ಯವನ್ನು ಸಮಾಜಕ್ಕಾಗಿ ಮೀಸಲಿಡುವ ಮನಸ್ಸಿನಿಂದ ಆರಂಭವಾಗುತ್ತದೆ.












Click it and Unblock the Notifications