ಸಕಲೇಶಪುರ: ಅಂಗನವಾಡಿಗೆ ತೆರಳುವಾಗ ಹಾವು ಕಡಿದುಬಾಲಕ ಸಾವು
ಹಾಸನ, ಡಿಸೆಂಬರ್ 24: ಅಂಗನವಾಡಿಗೆ ತೆರಳುವಾಗ ಹಾವು ಕಡಿದು ಬಾಲಕ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ.
ದೊಡ್ಡಕಲ್ಲೂರು ಗ್ರಾಮದ ಯಶವಂತ್ ಹಾಗೂ ಗೌರಿ ದಂಪತಿಯ ಪುತ್ರ ರೋಷನ್ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಬಾಲಕ ಅಂಗನವಾಡಿಗೆ ತೆರಳುವಾಗ ಹಾವು ಕಚ್ಚಿದ್ದು, ಪೋಷಕರು ಕೂಡಲೇ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ವಾಹನದಲ್ಲಿ ಕರೆತಂದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರಕ್ಕೆ ತೆರಳು ಆಂಬ್ಯುಲೆನ್ಸ್ ಸಿಗದೇ ಬಾಲಕನ ಪೋಷಕರು ಪರದಾಡಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಬಾಲಕ ಸಾವನ್ನಪ್ಪಿದ್ದಾನೆ.

ಸಕಲೇಶಪುರ ತಾಲೂಕಿನಾದ್ಯಂತ ಕೇವಲ ಒಂದೇ ಒಂದು ಆಂಬ್ಯುಲೆನ್ಸ್ ಓಡಾಟ ನಡೆಸುತ್ತಿದೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವೈದ್ಯರು ಚುಚ್ಚುಮದ್ದು ನೀಡಿದ ಒಂದೇ ರಾತ್ರಿಯಲ್ಲಿ ಎತ್ತುಗಳು ಸಾವು
ಪಶುವೈದ್ಯರು ಗಂಟಲುಬೇನೆ ಚುಚ್ಚುಮದ್ದು ನೀಡಿದ ಮರುದಿನವೇ ಲಕ್ಷಾಂತರ ಮೌಲ್ಯದ ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.
ಎತ್ತುಗಳಿಗೆ ಆರೋಗ್ಯ ಹದಗೆಟ್ಟಿದೆ ಎಂದು ರೈತ ಶಂಕರ್ ಎತ್ತುಗಳನ್ನು ಲಿಂಗದಹಳ್ಳಿಯ ಪಶು ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಪರೀಕ್ಷಿಸಿ ಇಂಜೆಕ್ಷನ್ ನೀಡಿ ಕಳುಹಿಸಿದ್ದರು. ಆದರೆ, ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ರಾಸುಗಳು ಬೆಳಗಾವಷ್ಟರಲ್ಲಿ ಸಾವನ್ನಪ್ಪಿದ್ದವು. ವೈದ್ಯರು ಬೇಜವಾಬ್ದಾರಿಯಿಂದ ಯಾವುದೋ ಚುಚ್ಚುಮದ್ದು ನೀಡಿ ಎತ್ತುಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿರುವ ರೈತರು, ಸೂಕ್ತ ನ್ಯಾಯ ಹಾಗೂ ಪರಿಹಾರಕ್ಕಾಗಿ ಎತ್ತುಗಳನ ಮೃತದೇಹವನ್ನು ಆಸ್ಪತ್ರೆ ಮುಂಭಾಗ ಇಟ್ಟು ವೈದ್ಯರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ವೇಳೆ ಲಕ್ಷಾಂತರ ಮೌಲ್ಯದ ಎರಡು ಎತ್ತುಗಳನ್ನ ಕಳೆದುಕೊಂಡ ರೈತ ಶಂಕರ್ ಕಣ್ಣೀರಿಟ್ಟಿದ್ದು, ವೈದ್ಯ ಬಸವರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ವೈದ್ಯ ಬಸವರಾಜ್ ಮಾತನಾಡಿದ್ದು, ಈ ರೀತಿ ರಾಸುಗಳು ಸಾವನ್ನಪ್ಪುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ದನಕರುಗಳು ಸಾವನ್ನಪ್ಪಿವೆ. ಲಿಂಗದಹಳ್ಳಿ ಸುತ್ತಮುತ್ತ 10ಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ
ಲಿಂಗದಹಳ್ಳಿಯ ಪಶು ಆಸ್ಪತ್ರೆ ಹಾಗೂ ರೈತರ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಆಸ್ಪತ್ರೆಯಲ್ಲಿ ಒಂದೇ ಒಂದು ಔಷಧಿ ಇಲ್ಲ. ಪ್ರತಿಯೊಂದನ್ನೂ ಹೊರಗಡೆಯಿಂದ ತನ್ನಿ ಎಂದು ಬರೆದುಕೊಡುತ್ತಾರೆ. ವೈದ್ಯರಿಗೆ ಹಣ ಕೊಟ್ಟರಷ್ಟೆ ಚಿಕಿತ್ಸೆ ಇಲ್ಲವಾದರೆ ಚಿಕಿತ್ಸೆ ನೀಡುವುದಿಲ್ಲ. 500 ರೂಪಾಯಿ ಕೈಗಿಟ್ಟರೆ ಚಿಕಿತ್ಸೆ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಲಕ್ಷಾಂತರ ಮೌಲ್ಯದ ರಾಸುಗಳನ್ನ ಕಳೆದುಕೊಂಡಿದ್ದೇವೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬಳಿಕ ರೈತರು ಎತ್ತುಗಳನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ನಡೆಸಿದ್ದಾರೆ.












Click it and Unblock the Notifications