ಹಾಸನದಲ್ಲಿ ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ದುರಂತ; ಇಬ್ಬರ ಸಾವು
ಹಾಸನ, ಏಪ್ರಿಲ್ 5: ಸ್ಫೋಟಕಗಳನ್ನು ಸಾಗಿಸುವ ಸಂದರ್ಭ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿರುವ ಘಟನೆ ಹಾಸನದಲ್ಲಿ ಭಾನುವಾರ ಸಂಜೆ ನಡೆದಿದೆ.
ಹಾಸನದ ಹೊಳೆ ನರಸೀಪುರ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಸಮೀಪದಲ್ಲಿನ ಸ್ಫೋಟಕಗಳ ಗೋದಾಮಿನಲ್ಲಿ ಈ ದುರ್ಘಟನೆ ನಡೆದಿದೆ.
ಚನ್ನರಾಯಪಟ್ಟಣದ ಶ್ರವಣಬೆಳಗೊಳದ ಬೆಟ್ಟದಹಳ್ಳಿ ಗ್ರಾಮದ ಸಂಪತ್ತು ಮತ್ತು ನಟರಾಜು ಎಂಬುವರು ಮೃತಪಟ್ಟಿದ್ದಾರೆ. ಸಂಪತ್ತು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಟರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಸನದ ಶಾಂತಿಗ್ರಾಮದ ರವಿ ಎಂಬುವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಸಿಪಿ ಪ್ರವೀಣ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಹಿಂದಿನ ಕಾರಣದ ಕುರಿತು ತನಿಖೆ ಕೈಗೊಂಡಿದ್ದಾರೆ.
ಹಾಸನದ ಚಾಕೇನಹಳ್ಳಿ ಸಮೀಪದ ಗೋದಾಮಿನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಸಂಪತ್ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಸ್ಪೋಟಕಗಳನ್ನು ದಾಸ್ತಾನು, ಸಾಗಣೆ ಮಾಡುವಾಗ ಜಾಗರೂಕರಾಗಿರುವಂತೆ ಮನವಿ ಮಾಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಟ್ವೀಟ್ ಮಾಡಿದ್ದಾರೆ.
ಈಚೆಗಷ್ಟೆ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಜೆಲೆಟಿನ್ ಸ್ಫೋಟ ಸಂಭವಿಸಿತ್ತು. ಆ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಮತ್ತೆ ಘಟನೆ ಮರುಕಳಿಸಿದೆ.











Click it and Unblock the Notifications