ಗುವಾಹತಿ ಬಾಂಬ್ ಸ್ಫೋಟ: ಕಿರುತೆರೆ ನಟ ಸೇರಿ ಇಬ್ಬರ ಬಂಧನ
ಗುವಾಹತಿ, ಮೇ 17: ಇಲ್ಲಿನ ಶಾಪಿಂಗ್ ಮಾಲ್ ಎದುರು ಗ್ರೆನೇಡ್ ಸ್ಫೋಟ ಪ್ರಕರಣ ಆರೋಪದ ಮೇಲೆ ಆಸ್ಸಾಂ ಕಿರುತೆರೆ ನಟ ಹಾಗೂ ಉಲ್ಫಾ ಉಗ್ರ ಸಂಘಟನೆಯ ಹಿರಿಯ ಸದಸ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದುಷ್ಕೃತ್ಯಗಳನ್ನು ಎಸಗಲು ಯತ್ನಿಸುವವರ ಪ್ರಯತ್ನವನ್ನು ಹತ್ತಿಕ್ಕಲಾಗುವುದು ಎಂದು ಸಿಎಂ ಸರ್ಬಾನಂದ್ ಸೋನೋವಾಲ ಹೇಳಿದ್ದಾರೆ.
ಗುವಾಹತಿಯಲ್ಲಿ ಬುಧವಾರ(ಮೇ15) ಸಂಜೆ ಶಾಪಿಂಗ್ ಮಾಲ್ ಬಳಿ ಝೂ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಸ್ಫೋಟದ ಪರಿಣಾಮ ಇಬ್ಬರು ಸಶಸ್ತ್ರ ಸೀಮಾ ಬಲದ ಸಿಬ್ಬಂದಿ ಸೇರಿದಂತೆ 11 ಮಂದಿಗೆ ತೀವ್ರಗಾಯಗಳಾಗಿವೆ.

ಪರೇಶ್ ಬರುವಾ ನೇತೃತ್ವದ ಉಲ್ಫಾ ಉಗ್ರ ಸಂಘಟನೆ ಈ ಘಟನೆಯ ಹೊಣೆ ಹೊತ್ತುಕೊಂಡಿತ್ತು. ಕೇಂದ್ರ ಅಸ್ಸಾಂನ ತೀನ್ ಸುಕಿಯಾದಲ್ಲಿ ಮೂವರು ಉಲ್ಫಾ ಉಗ್ರರನ್ನು ಬಂಧಿಸಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಉಲ್ಫಾ ಪರವಿದ್ದ ನಟ: ಖಚಿತ ಮಾಹಿತಿ ಮೇರೆಗೆ ನಟ ಜಹ್ನವಿ ಸೈಕಿಯಾ ಅವರು ಬಾಡಿಗೆ ಪಡೆದು ತಂಗಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದರು. ಉಲ್ಫಾ ಸಂಘಟನೆಯ ಪ್ರನೋಮೊಯ್ ರಾಜ್ ಗುರು ಕೂಡಾ ಸೆರೆ ಹಿಡಿಯಲಾಗಿದೆ. ಇವರಿಬ್ಬರು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸೋಂ(ULFA) ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಪಿಂಗ್ ಮಾಲ್ ಬಳಿ ಸ್ಫೋಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ದಾಳಿ ವೇಳೆ 20 ಕೆಜಿ ಗನ್ ಪೌಡರ್, ಬಾಂಬ್ ತಯಾರಿಕೆ ವಸ್ತುಗಳು, ಒಂದು ಪಿಸ್ತೂಲ್, 25 ರೌಂಡ್ ಗುಂಡುಗಳು ಪತ್ತೆಯಾಗಿದ್ದು, ಎಲ್ಲವನ್ನು ಜಪ್ತಿ ಮಾಡಲಾಗಿದೆ. 1986ರಲ್ಲಿ ಉಲ್ಫಾ ಸೇರಿದ ರಾಜ್ ಗುರು, ಗುವಾಹತಿ ಹೊರವಲಯದಲ್ಲಿ ಆತಂಕ ಸೃಷ್ಟಿಸುವ ಹೊಣೆ ಹೊತ್ತುಕೊಂಡಿದ್ದ. ಈತನ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಸೈಕಿಯಾ ನೋಡಿಕೊಳ್ಳುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.












Click it and Unblock the Notifications