Breaking: ಅತ್ಯಾಚಾರ ಮತ್ತು ಕೊಲೆ ಆರೋಪಿಯನ್ನು ಹೊಡೆದು ಕೊಂದ ಜನ
ಗುವಾಹಟಿ, ಆಗಸ್ಟ್ 18: ಮಂಗಳವಾರ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ಗುರುವಾರ ಗುಂಪೊಂದು ಹೊಡೆದು ಕೊಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ರಾಜು ಬರುವಾ ಅಲಿಯಾಸ್ ಗಿರ್ಜೈ, ಗಿಲಮಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲಕಿಲಿ ಗ್ರಾಮದ ಹೊಳೆ ಬಳಿ ಅಡಗಿಕೊಂಡಿದ್ದನ್ನು ಕೆಲವು ಸ್ಥಳೀಯ ಗ್ರಾಮಸ್ಥರು ಗಮನಿಸಿದ್ದಾರೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಮುನ್ನ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ.
"ಘಟನೆಯ ಬಗ್ಗೆ ನಮಗೆ ಗುರುವಾರ ತಿಳಿಯಿತು. ಪೊಲೀಸ್ ತಂಡ ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನನಾಗಿದ್ದ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಆದರೆ ತೀವ್ರ ಗಾಯಗಳಿಂದ ಸಾವನ್ನಪ್ಪಿದರು" ಎಂದು ಲಖಿಂಪುರ ಪೊಲೀಸ್ ಅಧೀಕ್ಷಕ ಬಿಎಂ ರಾಜ್ಖೋವಾ ಹೇಳಿದರು.

"ಆರೋಪಿಯು ಈ ಪ್ರದೇಶದಲ್ಲಿ ಕುಖ್ಯಾತ ಕ್ರಿಮಿನಲ್ ಆಗಿದ್ದಾರೆ. ಅವನ ವಿರುದ್ಧ ಡಜನ್ಗೂ ಹೆಚ್ಚು ಡಕಾಯಿತಿ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ದಾಖಲಾಗಿವೆ. ಆತನ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಸ್ಥಳೀಯರಿಗೆ ತುಂಬಾ ಚೆನ್ನಾಗಿ ತಿಳಿದಿತ್ತು" ಎಂದು ಪೊಲೀಸ್ ಅಧೀಕ್ಷಕ ಹೇಳಿದರು.
ಘಟನೆ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಹಲ್ಲೆ ನಡೆಸಿದವರ ಪತ್ತೆಗೆ ಯತ್ನಿಸುತ್ತಿದ್ದಾರೆ. ಆದರೆ, ಇನ್ನೂ ಯಾರನ್ನು ಬಂಧಿಸಿಲ್ಲ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಮತ್ತು ಇತರ ಇಬ್ಬರು ಆರೋಪಿಗಳನ್ನು ಢಕುಖಾನಾ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸ್ ಕಸ್ಟಡಿಯಿಂದ ಎಲ್ಲರೂ ತಪ್ಪಿಸಿಕೊಂಡು ಓಡಿಹೋಗಿದ್ದರು. ಅವರಲ್ಲಿ ಒಬ್ಬನನ್ನು ಬುಧವಾರ ಸೆರೆಹಿಡಿಯಲಾಗಿದ್ದು, ಮೂರನೆಯವರಿಗಾಗಿ ಶೋಧ ನಡೆಯುತ್ತಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪೊಲೀಸರ ಎನ್ಕೌಂಟರ್ನಲ್ಲಿ ಆರೋಪಿ ರಾಜು ಬರುವಾ ಗಾಯಗೊಂಡಿದ್ದರು. ಇದಾದ ಮೇಲೆ ಈ ವರ್ಷದ ಜನವರಿಯಲ್ಲಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುವಾಗಲು ವಾರ್ಡ್ನಿಂದ ಓಡಿಹೋಗಿದ್ದರು. ಮತ್ತೆ ಅವರನ್ನು ಬಂಧಿಸಲಾಗಿತ್ತು. ಈ ಬಾರಿ ತಪ್ಪಿಸಿಕೊಂಡು ಹೋಗಿ ಜನರ ಕೈಗಿ ಸಿಲುಕಿ ಸಾವನ್ನಪ್ಪಿದ್ದಾರೆ.












Click it and Unblock the Notifications