'ರಾಜ್ಯದ ಭವಿಷ್ಯದ ಆಸ್ತಿ' ಎಂದು ರೇಪ್ ಆರೋಪಿ ವಿದ್ಯಾರ್ಥಿಗೆ ಜಾಮೀನು ನೀಡಿದ ಹೈಕೋರ್ಟ್
ನವದೆಹಲಿ, ಆಗಸ್ಟ್ 25: ದೂರು ನೀಡಿದ ವ್ಯಕ್ತಿ ಹಾಗೂ ಆರೋಪಿತ ವ್ಯಕ್ತಿ ಇಬ್ಬರು ರಾಜ್ಯದ ಮುಂದಿನ ಭವಿಷ್ಯ ಎಂದು ಹೇಳಿ ಗುವಾಹಟಿ ಹೈಕೋರ್ಟ್ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಅತ್ಯಾಚಾರ ಆರೋಪಿತ ವಿದ್ಯಾರ್ಥಿಗೆ ಜಾಮೀನು ಮಂಜೂರು ಮಾಡಿದೆ.
ಆಗಸ್ಟ್ 13 ರಂದು ಗುವಾಹಟಿ ಹೈಕೋರ್ಟ್ ಮಾರ್ಚ್ನಲ್ಲಿ ಅತ್ಯಾಚಾರ ಆರೋಪಕ್ಕೆ ಒಳಗಾದ ಐಐಟಿ ವಿದ್ಯಾರ್ಥಿ ಉತ್ಸವ್ ಕದಮ್ಗೆ ಜಾಮೀನು ನೀಡಿದೆ. ಈ ಜಾಮೀನು ನೀಡುವ ಸಂದರ್ಭದಲ್ಲಿ, ನ್ಯಾಯಮೂರ್ತಿ ಅಜಿತ್ ಬೂರ್ತಾಕುರ್, "ಸಂತ್ರಸ್ತೆ ಹಾಗೂ ಅತ್ಯಾಚಾರಿ ಆರೋಪಿಯು ಇಬ್ಬರೂ ಐಐಟಿ ವಿದ್ಯಾರ್ಥಿಗಳು ಆಗಿರುವ ಕಾರಣ ಇಬ್ಬರೂ ರಾಜ್ಯಗಳ ಮುಂದಿನ ಭವಿಷ್ಯ," ಎಂದು ಹೇಳಿದ್ದಾರೆ.
ಯುಪಿಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನು
"ಗುವಾಹಟಿಯ ಐಐಟಿಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಇಬ್ಬರೂ ವಿದ್ಯಾರ್ಥಿಗಳು ಕೂಡಾ ಪ್ರತಿಭಾವಂತರು. ಹಾಗೆಯೇ 19 ರಿಂದ 21 ವಯಸ್ಸಿನೊಳಗಿನವರು. ಇನ್ನು ಈ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಕ್ಕೆ ಸೇರಿದವರು. ರಾಜ್ಯದ ಭವಿಷ್ಯದ ಆಸ್ತಿ," ಎಂದು ನ್ಯಾಯಮೂರ್ತಿ ಅಜಿತ್ ಬೂರ್ತಾಕುರ್ ಆರೋಪಿಗೆ ಜಾಮೀನು ನೀಡುವ ಸಂದರ್ಭ ತಿಳಿಸಿದ್ದಾರೆ.
ಇನ್ನು ನ್ಯಾಯಾಲಯಕ್ಕೆ ಎಫ್ಐಆರ್, ವೈದ್ಯಕೀಯ ವರದಿ ಮತ್ತು ಸಾಕ್ಷ್ಯಗಳ ಹೇಳಿಕೆಗಳಿಂದ ಆರೋಪಿತ ವಿದ್ಯಾರ್ಥಿ ತಪ್ಪತಸ್ಥ ಎಂದು ತಿಳಿದು ಬಂದಿದೆ. ಆದರೂ ಯುವಕ, ಯುವತಿ ಇಬ್ಬರೂ ರಾಜ್ಯದ ಭವಿಷ್ಯದ ಆಸ್ತಿ ಎಂದು ಜಾಮೀನು ನೀಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
"ಎರಡು ಕಡೆಯವರ ವಾದವನ್ನು ಆಲಿಸಿದ ಬಳಿಕ, ಇದಕ್ಕೆ ಸಂಬಂಧಿಸಿದ ದಾಖಲೆಗಳಾದ ಎಫ್ಐಆರ್, ವೈದ್ಯಕೀಯ ವರದಿ ಮತ್ತು ಸಾಕ್ಷ್ಯಗಳ ಹೇಳಿಕೆಗಳಿಂದ, ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದ್ದ ಅಂಶಗಳಿಂದ, ಫಾಕ್ಟ್ ಫೈಂಡಿಂಗ್ ಕಮಿಟಿ ರಿಪೋರ್ಟ್ ಮೊದಲಾದವುಗಳಿಂದ ಆರೋಪಿತ ವಿದ್ಯಾರ್ಥಿಯು ಅಪರಾಧಿ ಎಂಬುವುದು ಸಾಬೀತಾಗಿದೆ," ಎಂದು ಕೂಡಾ ನ್ಯಾಯಮೂರ್ತಿ ಅಜಿತ್ ಬೂರ್ತಾಕುರ್ ಮಾಹಿತಿ ನೀಡಿದ್ದಾರೆ.
ತ್ರಿಪುರಕ್ಕೆ ಭೇಟಿ ನೀಡಿದ್ದ ಪ್ರಶಾಂತ್ ತಂಡದ 23 ಮಂದಿಗೆ ಜಾಮೀನು
ಈ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ ಗುವಾಹಟಿ ಹೈಕೋರ್ಟ್, "ಸಾಕ್ಷ್ಯಗಳ ಹೇಳಿಕೆಯನ್ನು ಪರಿಶೀಲನೆ ಮಾಡಿದಾಗ, ಆರೋಪಿತ ವಿದ್ಯಾರ್ಥಿಯು ಜಾಮೀನಿನ ಮೇಲೆ ಬಿಡುಗಡೆಯಾದರೆ ಆತ ಸಾಕ್ಷ್ಯವನ್ನು ನಾಶ ಮಾಡುವ ಮತ್ತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಇಲ್ಲ ಎಂಬುವುದು ಸ್ಪಷ್ಟವಾಗಿದೆ," ಎಂದು ಹೈಕೋರ್ಟ್ ಗಮನಿಸಿದೆ.
ಸಾಮಾನ್ಯ ಜಾಮೀನು ನಿಯಮದಂತೆ ಅತ್ಯಾಚಾರ ಆರೋಪಿತ ವಿದ್ಯಾರ್ಥಿ ಉತ್ಸವ್ ಕದಮ್ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇನ್ನು ಕೋರ್ಟ್ ನಿಗದಿ ಮಾಡಿದ ಎಲ್ಲಾ ನಿರ್ದಿಷ್ಟ ದಿನಗಳಲ್ಲಿ ಆರೋಪಿತ ವಿದ್ಯಾರ್ಥಿಯು ಕೋರ್ಟ್ಗೆ ಹಾಜರಾಗಬೇಕು ಎಂದು ಗುವಾಹಟಿ ಹೈಕೋರ್ಟ್ ಆದೇಶಿಸಿದೆ. ಹಾಗೆಯೇ ದೂರುದಾರರಿಗೆ ಯಾವುದೇ ಬೆದರಿಕೆ ನೀಡದಂತೆ ಎಚ್ಚರಿಕೆಯನ್ನು ಕೋರ್ಟ್ ನೀಡಿದೆ.
ವಿದ್ಯಾರ್ಥಿ ಉತ್ಸವ್ ಕದಮ್ ವಕೀಲರು ಹೇಳುವುದೇನು?
ಉತ್ಸವ್ ಕದಮ್ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 328 (ವಿಷ ಇತ್ಯಾದಿ ವಸ್ತುಗಳ ಮೂಲಕ ನೋವುಂಟು ಮಾಡುವುದು, ಅಪರಾಧ ಮಾಡುವ ಉದ್ದೇಶದಿಂದ), 307 (ಕೊಲೆ ಯತ್ನ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣದ ದಾಖಲು ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ಮಾರ್ಚ್ 28 ರಂದು ದಾಖಲಾದ ಎಫ್ಐಆರ್ ಪ್ರಕಾರ, ಹಣಕಾಸು ಮತ್ತು ಅರ್ಥಶಾಸ್ತ್ರ ಕ್ಲಬ್ನ ಜಂಟಿ ಕಾರ್ಯದರ್ಶಿಯಾಗಿ ತನ್ನ ಜವಾಬ್ದಾರಿಗಳ ಬಗ್ಗೆ ಚರ್ಚಿಸುವ ನೆಪದಲ್ಲಿ ಕದಂಬ್ ವಿದ್ತಾರ್ಥಿನಿಯನ್ನು ಭೇಟಿಯಾಗಿದ್ದಾನೆ. ಆದರೆ ಬಳಿಕ ಆಕೆಗೆ ಒತ್ತಾಯಪೂರ್ವಕವಾಗಿ ಮದ್ಯ ನೀಡಿ, ಆಕೆ ಮದ್ಯದ ನಶೆಯಲ್ಲಿ ಇರುವಾಗ ಅತ್ಯಚಾರ ಎಸಗಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಉತ್ಸವ್ ಕದಮ್ನ ವಕೀಲರು ಕದಮ್ಗೆ ಜಾಮೀನು ನೀಡುವಂತೆ ಒತ್ತಾಯ ಮಾಡಿದ್ದಾರೆ. ಈ ಮನವಿಯನ್ನು ಮಾಡುವ ಸಂದರ್ಭದಲ್ಲಿ, "ಕದಮ್ 21 ವರ್ಷದ ಸಣ್ಣ ವರ್ಷದ ಯುವಕ ಹಾಗೆಯೇ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪ್ರತಿಭಾವಂತ ವಿದ್ಯಾರ್ಥಿ," ಎಂದು ಹೇಳಿದ್ದಾರೆ. ಹಾಗೆಯೇ ಕದಮ್ ವಿಚಾರಣೆಯ ನಿಟ್ಟಿನಲ್ಲಿ ಸುಮಾರು 120 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾನೆ ಎಂದು ಕೂಡಾ ವಕೀಲರು ಹೇಳಿದ್ದಾರೆ.
ಈ ಬಳಿಕ ತೀರ್ಪು ನೀಡಿದ ನ್ಯಾಯಾಲಯ, "ಆತನ ಪ್ರತಿಭೆಗೆ ಈ ಜೈಲು ಶಿಕ್ಷೆ ತೊಂದರೆಯನ್ನು ಉಂಟು ಮಾಡಬಾರದು. ಇಬ್ಬರೂ ಕೂಡಾ ರಾಜ್ಯದ ಭವಿಷ್ಯದ ಆಸ್ತಿ," ಎಂದು ಹೇಳಿ ಜಾಮೀನು ಮಂಜೂರು ಮಾಡಿದೆ.
(ಒನ್ ಇಂಡಿಯಾ ಸುದ್ದಿ)