Breaking; ಎರಡು ದಿನದಲ್ಲಿ ಏಕನಾಥ್ ಶಿಂಧೆ ಟೀಂ ಮುಂಬೈಗೆ
ಗುವಾಹಟಿ, ಜೂನ್ 26; ಮಹಾರಾಷ್ಟ್ರ ರಾಜಕೀಯ ಅಸ್ಥಿರತೆ ಇನ್ನೂ ಎರಡು ದಿನ ಮುಂದುವರೆಯುವ ಸೂಚನೆ ಸಿಕ್ಕಿದೆ. ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಶಾಸಕರ ಸಭೆ ನಡೆಸುತ್ತಿದ್ದು, ಇನ್ನೂ ಎರಡು ದಿನದ ಬಳಿಕ ಮುಂಬೈಗೆ ವಾಪಸ್ ಆಗುವ ಸುಳಿವು ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ ಅಸ್ಸಾಂನ ಗುವಾಹಟಿಯ ಹೋಟೆಲ್ನಲ್ಲಿ ಏಕನಾಥ್ ಶಿಂಧೆ ಶಿವಸೇನೆ ಶಾಸಕರ ಜೊತೆ ಸಭೆ ನಡೆಸಿದರು. ಶಾಸಕರು ಕುಟುಂಬ ಸದಸ್ಯರ ಭದ್ರತೆ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಭರವಸೆ ಕೊಟ್ಟರು.
ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಾಸಕರ ನಿವಾಸದ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಮಾಡುವ ವದಂತಿ ಇದೆ. ಈ ಹಿನ್ನಲೆಯಲ್ಲಿ ಶಾಸಕರು ಆತಂಕಗೊಂಡಿದ್ದಾರೆ.

ಏಕನಾಥ್ ಶಿಂಧೆ ಕೇಂದ್ರ ಸರ್ಕಾರಕ್ಕೆ ರಕ್ಷಣೆಗಾಗಿ ಮನವಿ ಮಾಡಲಾಗಿದೆ. ನಿಮ್ಮ ಕುಟುಂಬಕ್ಕೆ ರಕ್ಷಣೆ ನೀಡಲಾಗುತ್ತದೆ. ಎರಡು ದಿನದಲ್ಲಿ ನಾವು ಮುಂಬೈಗೆ ವಾಪಸ್ ಹೋಗಲಿದ್ದೇವೆ ಎಂದು ಶಾಸಕರಿಗೆ ತಿಳಿಸಿದರು.
ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಏಕನಾಥ್ ಶಿಂಧೆ ಜೊತೆಗೆ 40ಕ್ಕೂ ಅಧಿಕ ಶೀವಸೇನೆ ನಾಯಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಭಾನುವಾರ ರಾಜ್ಯದ ಉನ್ನತ & ತಾಂತ್ರಿಕ ಶಿಕ್ಷಣ ಇಲಾಖೆ ಸಚಿವ ಉದಯ್ ಸಮಂತ್ ಶಾಸಕರ ಗುಂಪು ಸೇರಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಶಿವಸೇನೆಯ 15 ಬಂಡಾಯ ಶಾಸಕರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಏಕನಾಥ್ ಶಿಂಧೆ ಕ್ಷೇತ್ರ ಥಾಣೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಜೂನ್ 30ರ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸರ್ಕಾರ ರಚನೆ, ಮುಂದಿನ ಕಾನೂನು ಹೋರಾಟ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಎರಡು ದಿನಗಳ ಬಳಿಕ ಮುಂಬೈಗೆ ಸುರಕ್ಷಿತವಾಗಿ ತೆರಳುವ ಕುರಿತು ಶಾಸಕರು ಏಕನಾಥ್ ಶಿಂಧೆ ಜೊತೆ ಮಾತುಕತೆ ನಡೆಸಿದರು.
ಶಾಸಕರು ಮುಂಬೈಗೆ ಆಗಮಿಸುವ ಕುರಿತು ಸೋಮವಾರ ತೀರ್ಮಾನ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಮಹಾರಾಷ್ಟ್ರ ರಾಜಕೀಯ ಮುಂದಿನ ವಾರವೂ ದೇಶದಲ್ಲಿ ಸುದ್ದಿಯಲ್ಲಿರಲಿದೆ.












Click it and Unblock the Notifications