ಬಿಜೆಪಿ ಶಾಸಕನ ಕಾರಿನಲ್ಲಿ ಇವಿಎಂ ಪತ್ತೆ ಪ್ರಕರಣ: ನಾಲ್ವರ ಅಮಾನತು
ಗುವಾಹಟಿ, ಏಪ್ರಿಲ್ 2: ಬಿಜೆಪಿ ಶಾಸಕ ಹಾಗೂ ಪಾತರ್ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಅವರ ಕಾರಿನಲ್ಲಿ ಇವಿಎಂ ಯಂತ್ರಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಕರೀಂಗಂಜ್ನಲ್ಲಿ ನಿಯೋಜಿಸಲಾಗಿದ್ದ ನಾಲ್ವರು ಚುನಾವಣಾ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಅಲ್ಲದೆ ಮತಗಟ್ಟೆಯಲ್ಲಿ ಮರು ಚುನಾವಣೆ ನಡೆಸುವಂತೆ ಆದೇಶಿಸಲಾಗಿದೆ. ಈ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.
ಚುನಾವಣಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಆಯೋಗ ಆರಂಭಿಸಿದೆ. ತಾವು ಪ್ರಯಾಣಿಸಿದ ವಾಹನವು ಬಿಜೆಪಿ ಅಭ್ಯರ್ಥಿಗೆ ಸೇರಿದ್ದು ಎನ್ನುವುದು ಮತಗಟ್ಟೆ ಅಧಿಕಾರಿಗಲಿಕೆ ತಿಳಿದಿರಲಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸಲ್ಲಿಸಿರುವ ಪ್ರಾಥಮಿಕ ವರದಿ ಹೇಳಿದೆ.
ಇಂದಿರಾ ಎಂವಿ ಶಾಲೆಯ ಮತಕೇಂದ್ರದ ಅಧಿಕಾರಿ ಹಾಗೂ ಇತರೆ ಸದಸ್ಯರು ಸ್ಟ್ರಾಂಗ್ ರೂಂ ಕಡೆ ತೆರಳುವಾಗ ಅವರ ಕಾರು ಹಾಳಾಯಿತು. ಅವರಿಗೆ ಅಲ್ಲಿಂದ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿ ಸಾಗುತ್ತಿದ್ದ ಕಾರ್ ಒಂದರಲ್ಲಿ ಲಿಫ್ಟ್ ಪಡೆದರು. ಆದರೆ ಆ ಕಾರು ಶಾಸಕ ಕೃಷ್ಣೇಂದು ಅವರಿಗೆ ಸೇರಿದ್ದಾಗಿತ್ತು. ಇವಿಎಂ ಯಂತ್ರಗಳ ಸೀಲು ಭದ್ರವಾಗಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಚುನಾವಣಾ ಅಧಿಕಾರಿಗಳಿಗೆ ಕೃಷ್ಣೇಂದು ಪಾಲ್ ಬಗ್ಗೆ ತಿಳಿದಿರಲಿಲ್ಲ ಎಂದು ಅಧಿಕಾರಿ ಸಹಾಬುದ್ದೀನ್ ತಾಲೂಕ್ದಾರ್ ತಿಳಿಸಿದ್ದಾರೆ. 'ನಾವು ಪಾತರ್ಕಂಡಿ ಅವರಲ್ಲ. ನಾವು ಇವಿಎಂನೊಂದಿಗೆ ವಾಪಸ್ ಬರುತ್ತಿದ್ದಾಗ ನಮ್ಮ ವಾಹನ ಹಾಳಾಯಿತು. ಈ ವಾಹನದವರು ನಮಗೆ ಸಹಾಯ ನೀಡುವುದಾಗಿ ತಿಳಿಸಿದ್ದರಿಂದ ಕರೀಮ್ಗಂಜ್ಗೆ ತೆರಳಿದೆವು. ನಮಗೆ ಕೃಷ್ಣೇಂದು ಪಾಲ್ ಗೊತ್ತಿಲ್ಲ' ಎಂದು ಅವರು ಹೇಳಿದ್ದಾರೆ.
ಕೃಷ್ಣೇಂದು ಪಾಲ್ ಅವರಿಗೆ ಸೇರಿದ ಬೊಲೆರೊ ವಾಹನದಲ್ಲಿ ಇವಿಎಂ ಯಂತ್ರಗಳು ಪತ್ತೆಯಾಗಿದ್ದನ್ನು ಕಂಡ ಸ್ಥಳೀಯರು ವಾಹನದ ಮೇಲೆ ಬಡಿಗೆ ಹಾಗೂ ಬಿದಿರಿನ ದಬ್ಬೆಗಳಿಂದ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿತ್ತು.












Click it and Unblock the Notifications