ಅಸ್ಸಾಂನಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ತೈವಾನ್ ಚಹಾ ತೋಟದ ಫೋಟೋ!
ಗುವಾಹಟಿ, ಮಾರ್ಚ್.04: ಅಸ್ಸಾಂ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಬಳಸಿಕೊಂಡಿರುವ ಎರಡು ಚಹಾ ತೋಟಗಳಿಗೆ ಸಂಬಂಧಿಸಿದ ಫೋಟೋಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.
ಕಾಂಗ್ರೆಸ್ ಪಕ್ಷವು ಅಸ್ಸಾಂ ಪ್ರಚಾರದ ಪುಟದಲ್ಲಿ ಬಳಸಿಕೊಂಡಿರುವ ಫೋಟೋ ತೈವಾನ್ ಚಹಾ ತೋಟಕ್ಕೆ ಸೇರಿದ್ದಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ರಾಜ್ಯ ಹಣಕಾಸು ಸಚಿವ ಹಿಮಂತಾ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಕಲಿ ಫೋಟೋಗಳನ್ನು ಬಳಸಿರುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
"ಅಸ್ಸಾಂ ಬಚಾವೋ" ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಚಾರ ಪುಟದಲ್ಲಿ ತೈವಾನ್ ಮೂಲದ ಚಹಾ ತೋಟದ ಫೋಟೋಗಳನ್ನು ಅಪ್ ಲೋಡ್ ಮಾಡಿದೆ. ಕಾಂಗ್ರೆಸ್ ನಾಯಕರಿಗೆ ಕನಿಷ್ಠ ಅಸ್ಸಾಂ ರಾಜ್ಯವನ್ನು ಗುರುತಿಸುವುದಕ್ಕೂ ಆಗುವುದಿಲ್ಲವೇ. ಇದು ಅಸ್ಸಾಂ ಹಾಗೂ ರಾಜ್ಯದ ಚಹಾ ತೋಟದಲ್ಲಿ ದುಡಿಯುವ ಕಾರ್ಮಿಕರಿಗೆ ಮಾಡಿದ ಅವಮಾನ" ಎಂದು ಸಚಿವ ಹಿಮಂತಾ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
|
ಅಸ್ಸಾಂ ರಾಜ್ಯದ ಬಗ್ಗೆ ಕಾಂಗ್ರೆಸ್ ಗೆ ಗೊತ್ತಿಲ್ಲವೇ?
"ಮೊದಲು ಕಾಂಗ್ರೆಸ್ ನಾಯಕರು ಅಸ್ಸಾಂ ರಾಜ್ಯವನ್ನು ಗುರುತಿಸಲು ಆಗಲಿಲ್ಲ. ಈಗ ಕಾಂಗ್ರೆಸ್ ನಾಯಕರಿಗೆ ಅಸ್ಸಾಂ ಜನರನ್ನೂ ಕೂಡಾ ಗುರುತಿಸುವುದಕ್ಕೆ ಆಗುತ್ತಿಲ್ಲ. ಈ ಚಿತ್ರಗಳು ಮತ್ತದೇ ತೈವಾನ್ ಗೆ ಸೇರಿದ ಫೋಟೋಗಳಾಗಿವೆ. ಕಾಂಗ್ರೆಸ್ ನಾಯಕರು ಅಸ್ಸಾಂನ್ನು ಮರೆತು ಬಿಟ್ಟಿದ್ದಾರೆ. ಅಸ್ಸಾಂನ ಭೂಮಿ ಎಷ್ಟು ಸುಂದರವಾಗಿದೆ ಎನ್ನುವುದಕ್ಕೆ ಕಾಂಗ್ರೆಸ್ ನಾಯಕರಿಗೆ ನಾವು ತೋರಿಸೋಣ" ಎಂದು ಸಚಿವ ಹಿಮಂತಾ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಚಹಾ ಕಾರ್ಮಿಕರನ್ನು ಒಲಿಸಿಕೊಳ್ಳುವುದಕ್ಕೆ ಪ್ರಯತ್ನ
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಲಕ್ಷ್ಯ ಚಹಾ ಕಾರ್ಮಿಕರ ಮೇಲೆ ನೆಟ್ಟಿದೆ. ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಇರುವುದೇ ಚಹಾ ಕಾರ್ಮಿಕರು. ಈ ಹಿನ್ನೆಲೆ ಚಹಾ ತೋಟ ಮತ್ತು ಕಾರ್ಮಿಕರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಚಾರ ನಡೆಸುತ್ತಿವೆ.

ಚಹಾ ತೋಟದ ಮಹಿಳಾ ಕಾರ್ಮಿಕರಿಗೆ 365 ರೂ ಕೂಲಿ
ಅಸ್ಸಾಂ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದರೆ ಚಹಾ ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಕನಿಷ್ಠ ದಿನಗೂಲಿ ಮೊತ್ತವನ್ನು 365 ರೂಪಾಯಿಗೆ ಹೆಚ್ಚಿಸಲಾಗುತ್ತದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ ರಾಜ್ಯದ ಪ್ರತಿಯೊಂದು ಮನೆ ಮಹಿಳೆಯರಿಗೆ "ಗೃಹಿಣಿ ಸಮ್ಮಾನ್" ಯೋಜನೆಯಡಿ ಪ್ರತಿತಿಂಗಳೂ 2000 ರೂಪಾಯಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ
ಅಸ್ಸಾಂ ವಿಧಾನಸಭೆಯ 126 ಸ್ಥಾನಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಘೋಷಿಸಿದೆ. ಮಾರ್ಚ್ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ.












Click it and Unblock the Notifications