ಕಾಂಗ್ರೆಸ್ಗೆ ನಾಯಕರೂ ಇಲ್ಲ, ನೀತಿಯೂ ಇಲ್ಲ, ಸಿದ್ಧಾಂತವೂ ಇಲ್ಲ; ಮೋದಿ
ಗುವಾಹಟಿ, ಮಾರ್ಚ್ 18: ಕಾಂಗ್ರೆಸ್ ಪಕ್ಷಕ್ಕೆ ನಾಯಕರೂ ಇಲ್ಲ, ನೀತಿಯೂ ಇಲ್ಲ, ಸಿದ್ಧಾಂತವೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಯುಕ್ತ ಗುರುವಾರ ಕರಿಂಗಂಜ್ನಲ್ಲಿ ಆಯೋಜಿಸಿದ್ದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, "ಒಂದೆಡೆ ಬಿಜೆಪಿಗೆ ನೀತಿ, ನಾಯಕತ್ವ ಹಾಗೂ ಒಳ್ಳೆಯ ಉದ್ದೇಶವಿದೆ. ಮತ್ತೊಂದೆಡೆ ಕಾಂಗ್ರೆಸ್ಗೆ ನಾಯಕನಾಗಲೀ, ನೀತಿಯಾಗಲೀ, ಸಿದ್ಧಾಂತವಾಗಲೀ ಏನೂ ಇಲ್ಲ" ಎಂದು ಹೇಳಿದರು.
ಎಐಯುಡಿಎಫ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರ ವಿರುದ್ಧವೂ ಕಿಡಿಕಾರಿದ ಅವರು, ಯಾವ ಮಟ್ಟಕ್ಕೆ ಹೋಗಲೂ ಕಾಂಗ್ರೆಸ್ ಸಿದ್ಧವಿದ್ದು, ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳುವಷ್ಟು ದುರ್ಬಲವಾಗಿದೆ. ಪಕ್ಷಕ್ಕೆ ಯಾವುದೇ ಸ್ಥಿರ ಚಿಂತನೆ ಇಲ್ಲ. ಹೀಗಿರುವಾಗ ಅಸ್ಸಾಂನಲ್ಲಿ ಸ್ಥಿರ ಸರ್ಕಾರವನ್ನು ಕಾಂಗ್ರೆಸ್ ಹೇಗೆ ರೂಪಿಸಬಲ್ಲದು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಹಾಗೂ ಅದರ ನೀತಿಗಳು ಅಸ್ಸಾಂ ಅನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಹಾಗೂ ರಾಜಕೀಯವಾಗಿ ನಾಶಪಡಿಸಿದೆ. ಪ್ರತಿ ದಿಕ್ಕಿನಲ್ಲೂ ಕಾಂಗ್ರೆಸ್ ಅಸ್ಸಾಂ ಸಂಪರ್ಕ ಕಡಿತಗೊಳಿಸಿತ್ತು. ಬಿಜೆಪಿ ಆ ಎಲ್ಲ ಸಂಪರ್ಕವನ್ನೂ ಒಟ್ಟುಗೂಡಿಸಿತು ಎಂದರು.
ಕಳೆದ ಐದು ವರ್ಷಗಳಲ್ಲಿ ಎನ್ಡಿಎ ಸರ್ಕಾರದ ಅಡಿಯಲ್ಲಿ ಅಸ್ಸಾಂನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮಾತನಾಡಿ, ಅಸ್ಸಾಂನಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದರು.
ಅಸ್ಸಾಂನಲ್ಲಿ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಚುನಾವಣೆ ಆರಂಭವಾಗಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications