ರಾಜ್ಯಕ್ಕೆ ಫಸ್ಟ್ ಬಂದವನ ಕಥೆ: ಜೆಇಇ ಬರೆದಿದ್ಯಾರೋ, ಪಾಸ್ ಆಗಿದ್ಯಾರೋ?
ಗುವಾಹಟಿ, ಅಕ್ಟೋಬರ್.29: ಕಳೆದ ಸಪ್ಟೆಂಬರ್ ನಲ್ಲಿ ನಡೆದ ಜೆಇಇ ಪರೀಕ್ಷೆಗೆ ಹಾಜರಾಗಲು ತನ್ನ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕಳುಹಿಸಿದ್ದಕ್ಕಾಗಿ ಬುಧವಾರ ಮುಖ್ಯ ಅಭ್ಯರ್ಥಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಈ ಬೆಳವಣಿಗೆಗೂ ಮುನ್ನ ದಿನ ಗುವಾಹಟಿಯ ಅಜರ್ ಪೊಲೀಸ್ ಠಾಣೆಯಲ್ಲಿ ಮಿತ್ರದೇವ್ ಶರ್ಮಾ ಎಂಬುವವರು ಅಭ್ಯರ್ಥಿ ವಿರುದ್ಧ ದೂರು ಸಲ್ಲಿಸಿದ್ದರು. ಜೆಇಇ ಪರೀಕ್ಷೆಯಲ್ಲಿ ಶೇ.99.80ರಷ್ಟು ಅಂಕ ಗಳಿಸಿದ ಅಭ್ಯರ್ಥಿಯು ಮುಖ್ಯ ಪರೀಕ್ಷೆಗೇ ಹಾಜರಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಜೆಇಇ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ
ಕಳೆದ ಸಪ್ಟೆಂಬರ್.05ರಂದು ನಡೆದ ಜೆಇಇ ಮುಖ್ಯ ಪರೀಕ್ಷೆ ಸಂದರ್ಭದಲ್ಲಿ ತಮ್ಮ ಬದಲಿಗೆ ಬೇರೊಬ್ಬರನ್ನು ಕೂರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಕೇಸ್ ತನಿಖೆಗೆ ವಿಶೇಷ ತಂಡ
ಕಳೆದ ಅಕ್ಟೋಬರ್.23ರಂದು ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅಭ್ಯರ್ಥಿಯು ಭಾರಿ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಮುಖ್ಯ ಪರೀಕ್ಷೆಗೆ ತಮ್ಮ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕೂರಿಸಿದ ಬಗ್ಗೆ ಮುಖ್ಯ ಅಭ್ಯರ್ಥಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಗುವಾಹಟಿ ಪಶ್ಚಿಮ ವಿಭಾಗದ ಹೆಚ್ಚುವರಿ ಡಿಸಿಪಿ ಸುಪ್ರೋತಿವ್ ಲಾಲ್ ಬರುಹಾ ತಿಳಿಸಿದ್ದಾರೆ.
ಮೊಬೈಲ್ ನಲ್ಲಿ ಮಾತನಾಡುತ್ತಾ ತಪ್ಪೊಪ್ಪಿಗೆ
ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅಭ್ಯರ್ಥಿಯು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬದಲಿಗೆ ಬೇರೆಯವವರು ಪರೀಕ್ಷೆಗೆ ಹಾಜರಾಗಿದ್ದರು ಎಂದು ಹೇಳಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಈ ರೀತಿಯ ಯಾವುದೇ ಪ್ರಕರಣಗಳು ಕಂಡು ಬಂದಿರಲಿಲ್ಲ ಎಂದು ಗುವಾಹಟಿ ಪಶ್ಚಿಮ ವಿಭಾಗದ ಹೆಚ್ಚುವರಿ ಡಿಸಿಪಿ ಸುಪ್ರೋತಿವ್ ಲಾಲ್ ಬರುಹಾ ಹೇಳಿದ್ದಾರೆ.
ಹಾಜರಾತಿ ಬಳಿಕ ಅಭ್ಯರ್ಥಿಯೇ ಅದಲು-ಬದಲು
"ಮೊದಲಿಗೆ ಪರೀಕ್ಷಾ ಕೊಠಡಿಯಲ್ಲಿ ಹಾಜರಾಗಿದ್ದ ಅಭ್ಯರ್ಥಿಯು ಬಯೋಮೆಟ್ರಿಕ್ ಹಾಜರಾತಿ ಬಳಿಕ ಮೇಲ್ವಿಚಾರಕರ ಸಹಾಯದಿಂದ ಹೊರ ಬಂದಿದ್ದಾರೆ. ಬಳಿಕ ಅದೇ ಅಭ್ಯರ್ಥಿಯ ಪರವಾಗಿ ಬೇರೊಬ್ಬರು ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆಯನ್ನು ಬರೆದಿರುವ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ" ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಗನ ಬದಲು ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯಲು 20 ಲಕ್ಷ
ಜೆಇಇ ಪರೀಕ್ಷೆಯಲ್ಲಿ ತನ್ನ ಮಗ ಉತ್ತೀರ್ಣರಾಗಬೇಕು ಎಂಬ ಕಾರಣಕ್ಕೆ ವೈದ್ಯರಾಗಿರುವ ಅವರ ತಂದೆಯು 15 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಅಭ್ಯರ್ಥಿಯ ತಂದೆ, ಅವರಿಗೆ ಸಹಾಯ ಮಾಡಿದ ಮೂವರು ವ್ಯಕ್ತಿಗಳು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ.