ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು: ಅಸ್ಸಾಂನಲ್ಲಿ ಮತ್ತೊಂದು ಮದರಸಾ ನೆಲಸಮ ಮಾಡಿದ ಸರ್ಕಾರ
ಅಸ್ಸಾಂ, ಆಗಸ್ಟ್ 31: ಅಸ್ಸಾಂನಲ್ಲಿನ ಅಕ್ರಮ ಮದರಸಾಗಳ ವಿರುದ್ಧ ರಾಜ್ಯ ಸರ್ಕಾರದಿಂದ ದಮನ ಮುಂದುವರಿದಿದೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಇದೆ ಎಂಬ ಆರೋಪದ ಮೇಲೆ ಮತ್ತೊಂದು ಮದರಸಾವನ್ನು ಧ್ವಂಸಗೊಳಿಸಲಾಗಿದೆ.
ಅಲ್-ಖೈದಾ (ಎಕ್ಯೂಐಎಸ್) ಮತ್ತು ಬಾಂಗ್ಲಾದೇಶ ಮೂಲದ ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ)ಗೆ ಸಂಬಂಧವಿದೆ ಎಂದು ಆರೋಪಿಸಿ ಬುಧವಾರ ಮತ್ತೊಂದು ಖಾಸಗಿ ಇಸ್ಲಾಮಿಕ್ ಮದರಸಾವನ್ನು ನೆಲಸಮಗೊಳಿಸಲಾಗಿದೆ.
ಅಸ್ಸಾಂ: ಅಲ್-ಖೈದಾ ನಂಟು ಹೊಂದಿರುವ 34 ಜನರ ಬಂಧನ
ಆಗಸ್ಟ್ 21 ರಂದು ನೆರೆಯ ಗೋಲ್ಪಾರಾ ಜಿಲ್ಲೆಯಲ್ಲಿ ಇಬ್ಬರು ಇಮಾಮ್ಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಮದ್ರಸಾದ ಶಿಕ್ಷಕ ಹಫೀಜುರ್ ರೆಹಮಾನ್ರನ್ನು ಆಗಸ್ಟ್ 26 ರಂದು ಬಂಧಿಸಲಾಯಿತು.
ಜಿಹಾದಿ ನಂಟುಗಳ ಆರೋಪದ ಮೇಲೆ ಈ ತಿಂಗಳು ನೆಲಸಮವಾದ ಮೂರನೇ ಖಾಸಗಿ ಮದರಸಾ ಇದಾಗಿದೆ. ಮಂಗಳವಾರ ನಡೆಸಿದ ದಾಳಿಯಲ್ಲಿ ಜಿಹಾದಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಬುಧವಾರ ಬೆಳಿಗ್ಗೆ ಕಬೈತರಿಯಲ್ಲಿರುವ ಮದರಸಾವನ್ನು ಕೆಡವುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ಬೊಂಗೈಗಾಂವ್ ಪೊಲೀಸ್ ಅಧೀಕ್ಷಕ ಸ್ವಪ್ನನೀಲ್ ದೇಕಾ ಹೇಳಿದ್ದಾರೆ.
ಭಯೋತ್ಪಾದನೆಗೆ ಹಣ ಪೂರೈಸುತ್ತಿದ್ದ ಆರೋಪ: ವ್ಯಕ್ತಿ ಬಂಧನ
ಮಂಗಳವಾರ ಧ್ವಂಸ ಕುರಿತು ನೋಟಿಸ್ ಜಾರಿ ಮಾಡಲಾಗಿದ್ದು, ಮದರಸಾದಲ್ಲಿದ್ದ ಸುಮಾರು 200 ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಲಾಗಿದೆ ಅಥವಾ ಹತ್ತಿರದ ಇತರ ಸಂಸ್ಥೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಸ್ವಪ್ನನೀಲ್ ದೇಕಾ ಮಾಹಿತಿ ನೀಡಿದರು.
ಮದರಸಾ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ
"ಮದರಸಾವನ್ನು ಖಾಸಗಿ ಭೂಮಿಯಲ್ಲಿ ನಿರ್ಮಿಸಲಾಗಿದೆ, ಆದರೆ ಅದನ್ನು ಅಗತ್ಯ ನಿಬಂಧನೆಗಳು ಮತ್ತು ಪರವಾನಗಿಗಳನ್ನು ಅನುಸರಿಸದೆ ನಿರ್ಮಿಸಲಾಗಿದೆ. ಆದ್ದರಿಂದ, ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅದನ್ನು ಕೆಡವಲಾಯಿತು," ಎಂದು ಪೊಲೀಸ್ ಅಧೀಕ್ಷಕ ಸ್ವಪ್ನನೀಲ್ ದೇಕಾ ಸಮನಜಾಯಿಷಿ ನೀಡಿದ್ದಾರೆ.
ಸೋಮವಾರ, ಬಾರ್ಪೇಟಾ ಜಿಲ್ಲೆಯ ಅಧಿಕಾರಿಗಳು ಖಾಸಗಿ ಮದರಸಾವನ್ನು ಕೆಡವಿದರು ಮತ್ತು ಮೊರಿಗಾಂವ್ ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಮತ್ತೊಂದು ಮದರಸಾವನ್ನು ನೆಲಸಮಗೊಳಿಸಲಾಯಿತು.
ಜಿಹಾದಿ ಚಟುವಟಿಕೆಗಳಿಗೆ ಮದರಸಾಗಳ ಬಳಕೆ ಆರೋಪ
ಎಕ್ಯೂಐಎಸ್ ಮತ್ತು ಎಬಿಟಿ ಸದಸ್ಯರು ಎರಡೂ ಸ್ಥಳಗಳನ್ನು ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
2022ರ ಮಾರ್ಚ್ನಿಂದ, ಎಕ್ಯೂಐಎಸ್ ಮತ್ತು ಎಬಿಟಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ರಾಜ್ಯದಲ್ಲಿ ಜಿಹಾದಿ ಸ್ಲೀಪರ್ ಸೆಲ್ಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ಬಾಂಗ್ಲಾದೇಶದ ಪ್ರಜೆ ಸೇರಿದಂತೆ ಸುಮಾರು 40 ಜನರನ್ನು ಅಸ್ಸಾಂನ ಪೊಲೀಸರು ಬಂಧಿಸಿದ್ದಾರೆ.
ಆತಂಕ ವ್ಯಕ್ತಪಡಿಸಿದ್ದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ರಾಜ್ಯವು ಇಸ್ಲಾಮಿಕ್ ಮೂಲಭೂತವಾದದ ಕೇಂದ್ರವಾಗಿದೆ ಮತ್ತು ಬಾಂಗ್ಲಾದೇಶದಲ್ಲಿ ಅಲ್ ಖೈದಾ-ಸಂಯೋಜಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಐದು ಜಿಹಾದಿ ಮಾಡ್ಯೂಲ್ಗಳನ್ನು ಮಾರ್ಚ್ನಿಂದ ಭೇದಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಗಸ್ಟ್ ತಿಂಗಳ ಆರಂಭದಲ್ಲಿ ಹೇಳಿದ್ದರು.
"ಭಯೋತ್ಪಾದನೆಯ ಎಲ್ಲಾ ಚಟುವಟಿಕೆಗಳ ಕೇಂದ್ರವು ಪ್ರಸ್ತುತವಾಗಿ 'ಮದರಸಾಗಳು' ಎಂದು ತೋರುತ್ತದೆ. ನಾನು ವಿಷಯವನ್ನು ಸಾಮಾನ್ಯೀಕರಿಸುತ್ತಿಲ್ಲ, ಆದರೆ ಇಲ್ಲಿಯವರೆಗೆ ಬಂಧಿಸಲ್ಪಟ್ಟವರು ಮದರಸಾಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಅಥವಾ ಕೆಲವು ಮಸೀದಿಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ," ಎಂದು ಶರ್ಮಾ ಹೇಳಿದರು.
ಭಯೋತ್ಪಾದನೆ ಸಂಘಟನೆ ಜೊತೆ ನಂಟು, ಹಲವರ ಬಂಧನ
"ಅಸ್ಸಾಂನಲ್ಲಿ ಬಂಧಿಸಲ್ಪಟ್ಟ ಆರೋಪಿಗಳು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸಾರುಲ್ ಬಾಂಗ್ಲಾ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.
ಮೋರಿಗಾಂವ್, ಗೋಲ್ಪಾರಾ, ಗುವಾಹಟಿ ಮತ್ತು ಬರ್ಪೇಟಾದಿಂದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹಲವು ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 'ಜಿಹಾದಿ ಸಾಹಿತ್ಯ ಮತ್ತು ವಿಡಿಯೋಗಳು' ಸೇರಿದಂತೆ ಹಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.