Gundlupet Elections: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕೈ-ಕಮಲ ಹಣಾಹಣಿ! ಹ್ಯಾಟ್ರಿಕ್ ಗೆಲುವು ಯಾರಿಗೆ?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಅರೆಮಲೆನಾಡು ಪ್ರದೇಶ ಮತ್ತು ರಾಜ್ಯದಲ್ಲಿಯೇ ಪ್ರಥಮ ಮುಂಗಾರು ಮಳೆಯು ಇಲ್ಲಿ ಬೀಳುವುದೆಂದು ಗುರುತಿಸಲ್ಪಟಿದೆ. ಈ ನಗರವು ಪ್ರಮುಖವಾಗಿ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಹಾಗೂ ಬಂಡೀಪುರ ಅರಣ್ಯ ಪ್ರದೇಶಕ್ಕೆ ಹೆಸರು ವಾಸಿಯಾಗಿದೆ.
ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿದ್ದು, ಇಲ್ಲಿ ಚಳಿಗಾಲದಲ್ಲಿ ಅತೀ ಚಳಿ ಇರುವುದು ಹಾಗೂ ಬೇಸಿಗೆ ಯಲ್ಲಿ ತಂಪಾದ ವಾಯುಗುಣ ಹೊಂದಿದ್ದು, 2023 ರ ಚುನಾವಣಾ ವೇದಿಕೆ ಮಾತ್ರ ಬಿಸಿಯಾಗಿದೆ.

ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾದ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಜತೆಗೆ ಜೆಡಿಎಸ್ನಲ್ಲೂ ಟಿಕೆಟ್ಗಾಗಿ ಪೈಪೋಟಿ ಎದುರಾಗಿದೆ. ಬಿಜೆಪಿಯಿಂದ ಸಹಜವಾಗಿಯೇ ಹಾಲಿ ಶಾಸಕ ಸಿ.ಎಸ್. ನಿರಂಜನ್ಕುಮಾರ್ ಅವರು ಟಿಕೆಟ್ ಆಕಾಂಕ್ಷಿ ಯಾಗಿದ್ದು, ಮತ್ತೊಂದು ಗೆಲುವಿಗೆ ಹಾತೊರೆಯುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ನಿರಂಜನ ಕುಮಾರ್ಗೆ ಪ್ರಬಲ ಪೈಪೋಟಿ ನೀಡಲು ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಹಾಗೂ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಸುಪುತ್ರ ಎಚ್.ಎಂ.ಗಣೇಶಪ್ರಸಾದ್ ಎಲ್ಲ ರೀತಿಯ ಕಾರ್ಯ ತಂತ್ರ ರೂಪಿಸಿ ಸರ್ವಸನ್ನದ್ಧರಾಗಿದ್ದಾರೆ. ಆದರೆ ಮತ್ತೆ ಕ್ಷೇತ್ರದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಿರಂಜನ- ಕುಮಾರ್ ಹೆಗಲಿಗಿರುವ ಕಾರಣ ಅವರು ಸಹ ತಮ್ಮ ಅವಧಿಯ ಅಭಿವೃದ್ಧಿಯ ಕೆಲಸಗಳನ್ನು ಮತದಾರರ ಮುಂದಿಟ್ಟು ಎರಡನೇ ಬಾರಿಗೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ!
ಬಿಜೆಪಿ ಶಾಸಕ ನಿರಂಜನ ಕುಮಾರ್ ತಮ್ಮ 5 ವರ್ಷದ ಆಡಳಿತ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಸಾಕಷ್ಟು ಒತ್ತಡ ತಂದು ನೂರಾರು ಕೋಟಿ ಅನುದಾನ ತಂದು ಕೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ಶಾಸಕರಿಗೆ ಬಂಡಾಯದ ಬಿಸಿ ತಟ್ಟಿದೆ. ಇನ್ನೂ ಈ ಮಧ್ಯೆ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಸುನಿಲ್ ಹೇಳಿಕೆ ನೀಡಿರುವುದು ಹಾಲಿ ಶಾಸಕ ನಿರಂಜನ ಕುಮಾರ್ಗೆ ತಲೆನೋವಾಗಿದೆ.
ಸಿ.ಎಸ್.ನಿರಂಜನ ಕುಮಾರ್ ಹಾಲಿ ಶಾಸಕರಾಗಿರುವ ಹಿನ್ನೆಲೆ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಏಕೆಂದರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿರಂಜನ ಕುಮಾರ್ ಅವರನ್ನು ಈ ಬಾರಿ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಎಂಬ ಸೂಚನೆಯನ್ನು ಕಾರ್ಯಕರ್ತರಿಗೆ ನೀಡುವ ಮೂಲಕ ನಿರಂಜನಕುಮಾರ್ಗೆ ಟಿಕೆಟ್ ಖಚಿತವಾಗಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ನಿಂದ ಗಣೇಶ ಪ್ರಸಾದ್ ಟಿಕೆಟ್ ಫಿಕ್ಸ್?
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಲ್ಲಿ ಟಿಕೆಟ್ಗಾಗಿ ಪೈಪೋಟಿ ಮುಂದುವರೆದಿದ್ದು, ಎಚ್.ಎಸ್.ನಂಜಪ್ಪ ಎಚ್.ಎಂ.ಗಣೇಶಪ್ರಸಾದ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವೇಳೆ ಎಚ್.ಎಸ್. ಮಹದೇವ ಪ್ರಸಾದ್ ಅವರ ಪುತ್ರ ಗಣೇಶ ಪ್ರಸಾದ್ ಅವರ ಕೈಗಳನ್ನು ಎತ್ತುವ ಮೂಲಕ, ಇವರನ್ನು ನೀವೆಲ್ಲಾ ಬೆಂಬಲಿಸಬೇಕು ಸೂಚಿಸಿದ್ದಾರೆ. ಬಹುತೇಕ ಗಣೇಶ ಪ್ರಸಾದ್ ಅಭ್ಯರ್ಥಿ ಎಂದು ಖಚಿತವಾಗಿದ್ದು, ಇನ್ನು ಉಳಿದಿರುವುದು ಅಧಿಕೃತ ಘೋಷಣೆ ಬಾಕಿ ಉಳಿದಿದೆ.
ಜೆಡಿಎಸ್ನಿಂದ ಕಡಬೂರು ಮಂಜುನಾಥ್ ಕಣಕ್ಕೆ
ರೈತ ಸಂಘದಲ್ಲಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿರುವ ಕಡಬೂರು ಮಂಜು ನಾಥ್ಗೆ ಈ ಬಾರಿಯ ಜೆಡಿಎಸ್ ಟಿಕೆಟ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ವತಃ ಘೋಷಣೆ ಮಾಡಿರುವ ಹಿನ್ನೆಲೆ ಜೆಡಿಎಸ್ನಲ್ಲೂ ಸಹ ಚುನಾವಣೆಗೆ ಕಣ ರಂಗೇರುವಂತೆ ಮಾಡಿದೆ.
ಮತ್ತೆ ಪ್ರಭುತ್ವ ಸ್ಥಾಪಿಸಲು ಕಾಂಗ್ರೆಸ್ ಯತ್ನ
ಗುಂಡ್ಲುಪೇಟೆ ವಿಧಾನ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಗೆಲುವು ಸಾಧಿಸಿ ಶಾಸಕ, ಸಚಿವರಾಗಿದ್ದ ದಿ.ಹೆಚ್.ಎಸ್.ಮಹದೇವಪ್ರಸಾದ್ ಕುಟುಂಬ ಸದಸ್ಯರು ಕಳೆದ 2018ರ ಸಾರ್ವತ್ರಿಕ ಚುನಾವಣೆ ಯಲ್ಲಿ ಸೋಲು ಅನುಭವಿಸಿದ್ದರು. ನಂತರ ಅಧಿಕಾರ ಇಲ್ಲದಿದ್ದರೂ ಸಹ ಕಳೆದ 5 ವರ್ಷಗಳಿಂದ ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಸುಪುತ್ರ ಎಚ್.ಎಂ.ಗಣೇಶಪ್ರಸಾದ್ ಕ್ಷೇತ್ರದ ಮತದಾರರ ಸಂಪರ್ಕದಲ್ಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications