ಶಿರಹಟ್ಟಿಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗ: ಪಿಡಿಒ ಅಮಾನತು
ಗದಗ, ಮಾರ್ಚ್ 30: ಸರ್ಕಾರದ ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಯೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಧಿಕಾರ ದುರುಪಯೋಗ ಮತ್ತು ಸರ್ಕಾರಿ ಬೊಕ್ಕಸದ 78.55 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಮೇಲ್ನೋಟಕ್ಕೆ ಸಾಭಿತಾಗಿದೆ. ಅಲ್ಲದೇ ಅಕ್ರಮ ಎಸಗಿರುವ ಕುರಿತು ತನಿಖಾ ಸಮಿತಿಯೊಂದರ ವರದಿ ಕೂಡ ದೃಢಪಪಟ್ಟ ಹಿನ್ನೆಲೆಯಲ್ಲಿ ಪಿಡಿಒ ಸಂಜಯ ಚವಡಾಳ ಅವರನ್ನು ಕಾಯ್ದೆಯಡಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಪಂ ಸಿಇಒ ಸುಶೀಲಾ ಬಿ ಅವರು ಪ್ರಕಟಣೆ ತಿಳಿಸಿದ್ದಾರೆ.

ಪಿಡಿಒ ವಿರುದ್ಧ ನಾನಾ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಪಿಡಿಒ ಸಂಜಯ ಚವಡಾಳ ಕಾರ್ಯನಿರ್ವಹಿಸಿದ 9ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ ಸಮಿತಿಯು, ಪರಿಶೀಲನೆ ನಂತರ ಜಿಪಂ ಸಿಇಒ ಅವರಿಗೆ ವರದಿ ಕೂಡ ಸಲ್ಲಿಕೆ ಮಾಡಿತ್ತು.
ವರದಿಯಲ್ಲಿ ಪಿಡಿಒ ಸಂಜಯ ಎನ್. ಚವಡಾಳ ಹಲವು ಅಕ್ರಮ ಎಸಗಿರುವ ಬಗ್ಗೆ ಬಹಿರಂಗವಾಗಿದ್ದು ,ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಪತ್ನಿ ಹೆಸರಲ್ಲಿ ಏಜನ್ಸಿ ಸೃಷ್ಟಿ ಮಾಡಿ, ಏಜನ್ಸಿ ಖಾತೆಗೆ ಅಕ್ರಮ ಹಣ ವರ್ಗಾವಣೆ, ವೈಯಕ್ತಿಕ ಖರ್ಚಿಗಾಗಿ ಸರ್ಕಾರದ ಲಕ್ಷಾಂತರ ರೂ. ದುರ್ಬಳಕೆ, ಸರ್ಕಾರಿ ಆದೇಶ ಉಲ್ಲಂಘಿಸಿ ಚೆಕ್ ಮುಖಾಂತರ ಹಣ ಪಾವತಿ, ಗ್ರಾಪಂ ಗಳಲ್ಲಿನ ನಾನಾ ವಸ್ತುಗಳ ಖರೀದಿಯ ವೋಚರ್ ಮತ್ತು ಬಿಲ್ಲುಗಳನ್ನು ಲೆಕ್ಕ ತನಿಖೆಗೆ ಒಪ್ಪಿಸದೇ ಇರುವುದು ಸೇರಿದಂತೆ ಸರ್ಕಾರದ ನಾನಾ ಕಾನೂನುಗಳನ್ನು ಉಲ್ಲಂಘನೆ ಮಾಡಿರುವುದು ಸಮಿತಿಯು ವರದಿಯಲ್ಲಿ ಪ್ರಸ್ತಾಪಿಸಿದೆ.
ವರದಿಯಲ್ಲಿ ಪ್ರಸ್ತಾಪಿತ ಅಕ್ರಮಗಳು!
1. ಗ್ರಾಪಂ ಕ್ರಿಯಾ ಯೋಜನೆ, ನಗದು ಪುಸ್ತಕ, ಚೆಕ್ ಕೌಂಟರ್, ಬಿಲ್ಲುಗಳು, ವೋಚರ್ಗಳು ಹಾಗೂ ದಾಸ್ತಾನು ವಹಿಗಳನ್ನು ಲೆಕ್ಕ ತನಿಖೆಗೆ ಹಾಜರು ಪಡಿಸದೇ ಇರುವ ಕಾರಣ 32.52 ಲಕ್ಷ ರೂ ವಸೂಲಿಗೆ ಮುಖ್ಯ ಲೆಕ್ಕಾಧಿಕಾರಿಗಳ ಸೂಚನೆ.
2. ಸರ್ಕಾರದ ಆದೇಶ ಉಲ್ಲಂಘಿಸಿ 21.12 ಲಕ್ಷ ರೂ.ಗಳ ಚೆಕ್ ವ್ಯವಹಾರ.
3. ಮುಂಡರಗಿ ತಾಲೂಕಿನ ವೆಂಕಟಾಪುರ ಗ್ರಾಮದ ಮುಖ್ಯಮಂತ್ರಿ ಮಾದರಿ ಗ್ರಾಮವಿಕಾಸ ಯೋಜನೆಯಲ್ಲಿ 6.93 ಲಕ್ಷ ರೂ.ಗಳನ್ನು ನಿಯಮಬಾಹಿರವಾಗಿ ಸಮೃದ್ಧಿ ಎಂಟರ್ ಪ್ರಾಯಿಜಿಸ್ಗೆ ವರ್ಗಾವಣೆ.
4. ಸಮೃದ್ಧಿ ಎಂಟರ್ ಪ್ರಾಯಿಜಸ್ ಗೆ 15 ನೇ ಹಣಕಾಸು ಯೋಜನೆಯಲ್ಲಿ 11.39 ಲಕ್ಷ ರೂ ನಿಯಮ ಬಾಹಿರ ವರ್ಗಾವಣೆ, ಕರ್ತವ್ಯಲೋಪ.
5. ಹಳ್ಳಿಕೇರಿ ಗ್ರಾಪಂ ನಲ್ಲಿ ವಿವಿಧ ಏಜನ್ಸಿಗಳಿಗೆ ಸರ್ಕಾರದ ಖರೀದಿ ನಿಯಮ ಉಲ್ಲಂಘಿಸಿ 14.19 ರೂ ಲಕ್ಷ ಪಾವತಿ
6. ಹಳ್ಳಿಕೇರಿ ಗ್ರಾಪಂ ನಿಂದ ವರ್ಗಾವಣೆಗೊಂಡರು ಹಳ್ಳಿಕೇರಿಯಲ್ಲಿ ಅಧಿಕಾರಿ ಸ್ವೀಕರಿಸಿದ ಪಿಡಿಒಗೆ ಅಧಿಕಾರ ಹಸ್ತಾಂತರ ಮಾಡದ ಸಂಜಯ ಚವಡಾಳ.
7. ವೈಯಕ್ತಿಕ ಉದ್ದೇಶಕ್ಕೆ ಸರ್ಕಾರದ 9 ಲಕ್ಷ ರೂ ಹಣ ದುರ್ಬಳಕೆ
8. ಒಟ್ಟಾರೆ 4.87 ರೂ ಕೋಟಿ ಆಕ್ಷೇಪಣೆ ಮೊತ್ತ ಹಾಗೂ 7.55 ಲಕ್ಷ ವಸೂಲಾತಿ ಮೊತ್ತ ಉಲ್ಲೇಖ
ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ, ಹಮ್ಮಗಿ, ಹೆಸಾರೂರ, ಕಲಕೇರಿ, ಹಿರೇವಡ್ಡಟ್ಟಿ, ಹಾರೋಗೇರಿ, ಬೀಡನಾಳ, ಜಂತಲಿ, ಶಿರೂರು, ಪೇಠಾಲೂರು, ಹಳ್ಳಿಕೇರಿ ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಎಂದು ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಸಂಜಯ ಚವಡಾಳ ಅವರು ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಅಲ್ಲದೇ ಅಕ್ರಮ ಎಸಗಿರುವ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು.
ಸಮಿತಿಯು ವರದಿ ನೀಡಿದ್ದು ಆ ವರದಿಯಲ್ಲಿ ಸಂಜಯ ಚವಡಾಳ ಅವರು ಅಕ್ರಮ ಎಸಗಿರುವುದು ದೃಢಪಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಕಾಯ್ದೆಯಡಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಪಂ ಸಿಇಒ ಸುಶೀಲಾ ಬಿ ಅವರು ಪ್ರಕಟಣೆ ತಿಳಿಸಿದ್ದಾರೆ.












Click it and Unblock the Notifications