ಮಳೆ ನೀರಲ್ಲಿ ಕೊಚ್ಚಿಹೋದ ನೂರಾರು ಮಡಿಕೆಗಳು; ಗದಗದಲ್ಲಿ ವೃದ್ಧೆ ಕಣ್ಣೀರು
ಗದಗ, ಸೆಪ್ಟೆಂಬರ್, 13: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಕಾರಣ ಕುಂಬಾರಿಕೆಗೆ ಹೊಡೆತ ಬಿದ್ದಿದೆ. ಇತ್ತೀಚೆಗೆ ಮಡಿಕೆಗಳನ್ನು ಬಳಸುವವರೇ ಕಡಿಮೆ. ಅದರಲ್ಲೂ ವ್ಯಾಪಾರಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಇಂತಹ ಸಮಯದಲ್ಲಿ ಮಳೆರಾಯ ಅಟ್ಟಹಾಸ ಮೆರೆದಿದ್ದು, ಮಡಕೆ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ಒಕ್ಕಲಿಗರ ಓಣಿಯಲ್ಲಿನ ವೃದ್ಧೆ ದೇವಕ್ಕ ಚಕ್ರಸಾಲಿ ಎಂಬಾಕೆ ಲಕ್ಷಾಂತರ ರೂಪಾಯಿ ಮೌಲ್ಯದ ಮಡಿಕೆಗಳನ್ನು ಸಂಗ್ರಹ ಮಾಡಿದ್ದು, ಅವುಗಳು ಇದೀಗ ನೀರುಪಾಲಾಗಿವೆ.
ಲಕ್ಷ ರೂಪಾಯಿ ಮೌಲ್ಯದ ಮಡಿಕೆಗಳು ನೀರುಪಾಲು
ಮಡಿಕೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಕುಂಬಾರಿಕೆಯ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಯಾವುದೇ ದಾರಿ ತೋಚದೇ ದೇವಕ್ಕ ಚಕ್ರಸಾಲಿ ಎಂಬ ವೃದ್ಧೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಗದಗ ನಗರದ ಒಕ್ಕಲಿಗರ ಓಣಿಯಲ್ಲಿನ ವೃದ್ಧೆ ದೇವಕ್ಕ ಚಕ್ರಸಾಲಿ ಎಂಬಾಕೆ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದಳು.
ಕಾಲಕ್ಕೆ ತಕ್ಕಂತೆ, ಹಬ್ಬ ಹರಿದಿನಗಳಲ್ಲಿ ಮಡಿಕೆ, ಕುಡಿಕೆ, ಹಣತೆಗಳನ್ನ ಮಾರಾಟ ಮಾಡುವುದು ಇವರ ಉದ್ಯೋಗವಾಗಿದೆ. ಅದರಲ್ಲೂ ಮದುವೆಗಾಗಿ ವಿಶೇಷವಾಗಿರುವ ಮಡಿಕೆಗಳನ್ನು ಸಂಗ್ರಹಸಿದ್ದರು. ಒಂದೊಂದು ಮಡಿಕೆಗಳು 200 ರಿಂದ 300 ರೂಪಾಯಿವರೆಗೂ ಮಾರಾಟ ಆಗುತ್ತಿದ್ದವು.
ನಾಲ್ಕು ವರ್ಷಗಳ ಹಿಂದೆ ವೃದ್ಧೆ ದೇವಕ್ಕ ಚಕ್ರಸಾಲಿ ಅವರ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಗಂಡ ಸಂಗ್ರಹ ಮಾಡಿದ್ದ ಮಡಿಕೆಗಳೇ ಹೆಚ್ಚಾಗಿದ್ದವು. ಸಂಗ್ರಹಿಸಿದ ಮಡಿಕೆಗಳು ಸಹ ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ವೃದ್ಧೆ ಕಣ್ಣೀರಿಡುತ್ತಿದ್ದಾರೆ. ವೃದ್ಧೆ ಮೊದಲು ಮಡಿಕೆಗಳನ್ನು ಮಾರಾಟ ಮಾಡುತ್ತಿರಲಿಲ್ಲ.
ದೇವಕ್ಕ ಚಕ್ರಸಾಲಿ ಅವರ ಗಂಡನೇ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಆತನೇ ಸಂಗ್ರಹ ಮಾಡಿದ್ದ ಮಡಿಕೆಗಳು ಬಹಳ ಇದ್ದವು. ಹಗರಿ ಬೊಮ್ಮನಹಳ್ಳಿಯಿಂದ ಮಡಿಕೆಗಳನ್ನು ತರಿಸಿಕೊಳ್ಳುತ್ತಿದ್ದರು. ಒಟ್ಟು ನಾಲ್ಕೈದು ಲಕ್ಷ ರೂಪಾಯಿಯಷ್ಟು ಮಡಿಕೆಗಳು ಇದ್ದವು.

ಇತ್ತೀಚೆಗೆ ದಿನಬಳಕೆಗಿಂತ ಫ್ಯಾನ್ಸಿಯಾಗಿ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಅದರಲ್ಲೂ ದೀಪಾವಳಿ, ಲಕ್ಷದೀಪೋತ್ಸವ, ಜಾತ್ರೆಗಳ ಜೊತೆಗೆ ಮದುವೆ ಮನೆಗೆ, ಮತ್ತು ಬೇಸಿಗೆ ಕಾಲಕ್ಕೆ ಬೇಕಾಗುವ ಕುಡಿಯುವ ನೀರಿಗಾಗಿ ಮಡಿಕೆಗಳನ್ನು ಸಂಗ್ರಹ ಮಾಡಿದ್ದರು.
ಆದರೆ ಕೆಲ ದಿನಗಳ ಹಿಂದೆ ರಾತ್ರಿ ಸುರಿದ ಮಳೆರಾಯಿಂದ ತಗಡಿನ ಶೆಡ್ಡಿನಲ್ಲಿ ಸಂಗ್ರಹ ಮಾಡಿದ್ದ ಮಡಿಕೆ, ಕುಡಿಕೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಇದರಿಂದ ವೃದ್ಧೆ ದೇವಕ್ಕ ಕಣ್ಣೀರು ಹಾಕುತ್ತಿದ್ದಾಳೆ. ಆದರೆ ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ, ವೃದ್ಧೆಯ ಆಗಿರುವ ಸಂಕಷ್ಟವನ್ನು ಆಲಿಸಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಗದಗದಲ್ಲಿ ಮಳೆರಾಯ ತಂದಿಟ್ಟ ಅವಾಂತರ
ಜಿಲ್ಲೆಯಲ್ಲಿ ಮಳೆರಾಯ ಅಬ್ಬರದಿಂದ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಗದಗ-ಬೆಟಗೇರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ಅವಾಂತರಗಳನ್ನ ಸೃಷ್ಟಿ ಉಂಟಾಗಿದ್ದವು. ಅದರಲ್ಲೂ ಬೆಟಗೇರಿಯ ದೇವರ ದಾಸಿಮಯ್ಯ ವೃತ್ತದ ಬಳಿಯ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗಿತ್ತು. ಪರಿಣಾಮ ಮನೆಯಲ್ಲಿನ ವಸ್ತುಗಳು ನೀರುಪಾಲಾಗಿದ್ದವು.
ಪಕ್ಕದ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿನ ಮಹಿಳೆಯರು, ವೃದ್ಧರು ಇಡೀ ರಾತ್ರಿ ಊಟ ನಿದ್ರೆ ಇಲ್ಲದೇ ಮಳೆ ನೀರು ಹೊರಹಾಕುವುದರಲ್ಲೇ ಕಾಲ ಕಳೆದಿದ್ದರು. ಅದರಲ್ಲೂ ಸುಮಾರು 8 ಮನೆಗಳು ಬಿದ್ದಿದ್ದು, ದುಡಿದು ತಿನ್ನುವ ವೃದ್ಧ ದಂಪತಿ ಒದ್ದಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೂರಲು, ಮಲಗಲು, ಅಡುಗೆ ಮಾಡಲು ಸಹ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಉಳಿದುಕೊಳ್ಳಲು ನಮಗೆ ಸರಿಯಾದ ಮನೆಗಳಿಲ್ಲ.
ಇಂದು ನಾಳೆ ಬೀಳುವಂತಹ ಸೋರುವ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಈ ಏರಿಯಾಗೆ ಸರಿಯಾದ ಮೂಲ ಸೌಕರ್ಯಗಳನ್ನು ಮಾಡಿಲ್ಲ. ಇಷ್ಟೆಲ್ಲಾ ಆವಾಂತರ ಸೃಷ್ಟಿಯಾಗಿದ್ದರೂ ಸಹ ನಗರಸಭೆಯ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಗಂಜಿ ಕೇಂದ್ರ ತೆರೆದು ಊಟದ ವ್ಯವಸ್ಥೆಯನ್ನಾದರೂ ಮಾಡಿ ಎಂದು ಇಲ್ಲಿನ ನಿವಾಸಿಗಳು ಗೋಳು ತೋಡಿಕೊಂಡಿದ್ದರು. ಇದಾದ ಬಳಿಕ ಒಬ್ಬೊಬ್ಬರೇ ಜನಪ್ರತಿನಿಧಿಗಳು ಮಳೆಹಾನಿ ಪ್ರದೇಶಕ್ಕೆ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.












Click it and Unblock the Notifications