ಗದಗ; ಗಾಂಜಾ ಉತ್ಪಾದನೆ, ಮಾರಾಟದಲ್ಲಿ ತೊಡಗಿದ್ದ ಐವರ ಬಂಧನ
ಗದಗ, ಸೆಪ್ಟೆಂಬರ್ 12: ತೋಟದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗದಗ ಜಿಲ್ಲಾ ಪೊಲೀಸರು 470 ಗ್ರಾಂ ಒಣಗಿಸಿದ ಗಾಂಜಾ ಪುಡಿ ಹಾಗೂ 1400 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈರಪ್ಪ ಯಮನಪ್ಪ ರಾಠೋಡ ಅವರ ತೋಟದ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಿಎಸ್ ಐ ಗುರುಶಾಂತ ದಾಶ್ಯಾಳ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈರಪ್ಪ ಯಮನಪ್ಪ ರಾಠೋಡ, ವಾಸೀಮ್ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವೀರೇಶ ಗೋವಿಂದಪ್ಪ ದ್ಯಾವನಕೊಂಡಿ, ಶಿವಕುಮಾರ ಕಾಶಪ್ಪ ಬೆಟಗೇರಿ ಎಂಬುವರನ್ನು ಬಂಧಿಸಿದ್ದಾರೆ.
ಈರಪ್ಪ ಯಮನಪ್ಪ ರಾಠೋಡ ಎಂಬಾತ 94,000 ರೂ ಮೌಲ್ಯದ, 470 ಗ್ರಾಂ ಒಣಗಿಸಿದ ಗಾಂಜಾ ಪುಡಿಯನ್ನು ಮಾರಾಟ ಮಾಡಲು ಅಣಿಯಾಗಿದ್ದ. ವಿಚಾರಣೆ ವೇಳೆ ತನ್ನ ಹೊಲದಲ್ಲಿ ಗಾಂಜಾ ಬೆಳೆ ಬೆಳೆಯುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಪೊಲೀಸರು ಇವರ ಬಳಿಯಿದ್ದ ಗಾಂಜಾ, 2 ಮೋಟಾರ್ ಸೈಕಲ್ ಹಾಗೂ 35,000 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. ಗಾಂಜಾ ಮಾರಾಟ ಅಥವಾ ಉತ್ಪಾದನೆ ಕುರಿತು ಕಂಡುಬಂದರೆ ಸಾರ್ವಜನಿಕರು ತಕ್ಷಣ ಗದಗ ಜಿಲ್ಲಾ ಪೊಲೀಸ್ ದೂರವಾಣಿ ಸಂ. 0872-236260ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಗದಗ ಜಿಲ್ಲೆಯ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.












Click it and Unblock the Notifications