ಸಿಎಂ ಹುದ್ದೆಗಾಗಿ ಎಲ್ಲರೂ ತಿರುಕನ ಕನಸು ಕಾಣುತ್ತಿದ್ದಾರೆ: ಹೊರಟ್ಟಿ
ಗದಗ, ಅಕ್ಟೋಬರ್ 26: ಕರ್ನಾಟಕ ರಾಜ್ಯದ ರಾಜಕಾರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ. ಎಲ್ಲ ಪಕ್ಷಗಳು ಗೊಂದಲದಿಂದ ಕೂಡಿದೆ. ಇದನ್ನೆಲ್ಲಾ ಯೋಚನೆ ಮಾಡಿದರೆ ರಾಜಕಾರಣ ಮಾಡದಿರುವುದೇ ಉತ್ತಮ ಎನಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ಸಿ ಬಸವರಾಜ್ ಹೊರಟ್ಟಿ, ಸಿಎಂ ಖುರ್ಚಿ ವಿಷಯವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಈಗಿನಿಂದಲೇ ಸಿಎಂ ಹುದ್ದೆಗಾಗಿ ಗುದ್ದಾಟ ಮಾಡುತ್ತಿರುವುದು ತಿರುಕನ ಕನಸು. ಕನಸಿನಲ್ಲಿ ಮುಖ್ಯಮಂತ್ರಿ ಆಗುವುದು ತಪ್ಪಲ್ಲ. ತಿರುಕನೂ ಸಹ ಕನಸಿನಲ್ಲಿ ರಾಜನಾಗಿರುತ್ತಾನೆ. ಎಲ್ಲರೂ ಕನಸುಗಾರರೇ, ಕನಸು ಕಾಣಲಿ ಬಿಡಿ. ನಾನೂ ಕೂಡ ಕನಸುಗಾರನೇ. ಸಿಎಂ ಹುದ್ದೆ ಕನಸು ಕಾಣುವ ನನ್ನ ಆದಿಯಾಗಿ ಎಲ್ಲರೂ ತಿರುಕರೇ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಈಗಿನ ರಾಜ್ಯ ರಾಜಕೀಯದಲ್ಲಿ ಯಾವುದೂ ಸರಿಯಾಗಿಲ್ಲ. ಕೆಲಸ ಮಾಡಿದ ನಾಯಕರಿಗೆ ಎಲ್ಲೂ ಬೆಲೆ ಇಲ್ಲದಂತಾಗಿದೆ. ಇದನ್ನೆಲ್ಲಾ ಗಮಿಸಿದರೇ ರಾಜಕಾರಣ ಮಾಡುವುದೇ ಬೇಡ ಅನ್ನಿಸುತ್ತದೆ ಎಂದರು.
ಸದ್ಯದ ರಾಜ್ಯ ರಾಜಕೀಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿರುವ ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ, ಈ ಮೂಲಕ ರಾಜಕೀಯ ನಿವೃತ್ತಿ ಹೊಂದುತ್ತಾರೆಯೇ ಎಂಬ ಅನುಮಾನ ಮೂಡಿದೆ.












Click it and Unblock the Notifications