Breaking; ಗದಗ ಜಿಲ್ಲಾಧಿಕಾರಿಯಾಗಿ ಎಂ. ಎಲ್. ವೈಶಾಲಿ ನೇಮಕ
ಗದಗ, ಆಗಸ್ಟ್ 10; ಗದಗ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳ ನೇಮಕವಾಗಿದೆ. ಎಂ. ಎಲ್. ವೈಶಾಲಿಯವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಎಂ. ಎಲ್. ವೈಶಾಲಿ ನೂತನ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಕೆಎಎಎಸ್ ಅಧಿಕಾರಿಯಾಗಿದ್ದ ಎಂ. ಎಲ್. ವೈಶಾಲಿ ಕೆಲವು ದಿನಗಳ ಹಿಂದೆ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಗದಗ ಜಿಲ್ಲಾಧಿಕಾರಿಯಾಗಿದ್ದ ಸುಂದರೇಶಬಾಬು ವರ್ಗಾವಣೆ ಬಳಿಕ ಜಿಲ್ಲಾಧಿಕಾರಿ ಸ್ಥಾನ ತೆರವಾಗಿತ್ತು.
ಡಿಸಿ ವರ್ಗಾವಣೆಗೆ ಪ್ರಹಸನ; ಗದಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮನೆಗಳು ಕುಸಿದಿವೆ, ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಹುದ್ದೆ ಖಾಲಿ ಇದೆ.
ಒಂದು ತಿಂಗಳಿನಿಂದ ಜಿಲ್ಲಾಧಿಕಾರಿ, ಮೂರು ತಿಂಗಳಿನಿಂದ ಅಪರ ಜಿಲ್ಲಾಧಿಕಾರಿ ಹುದ್ದೆ ಗದಗದಲ್ಲಿ ಖಾಲಿ ಇತ್ತು. ಬಹುಮುಖ್ಯ ಆಡಳಿತ ತೀರ್ಮಾನ ಕೈಗೊಳ್ಳುವ ಹುದ್ದೆ ಖಾಲಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಗದಗ ಜಿಲ್ಲಾಧಿಕಾರಿಯಾಗಿದ್ದ ಸುಂದರೇಶಬಾಬು ಜುಲೈ 11ರಂದು ವರ್ಗಾವಣೆಗೊಂಡಿದ್ದರು. ಚುನಾವಣಾ ಆಯೋಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಐಎಎಸ್ ಅಧಿಕಾರಿ ಹೊನ್ನಾಂಬಾರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು.
ಆದರೆ ಅವರು ಅಧಿಕಾರ ಸ್ವೀಕಾರ ಮಾಡದ ಕಾರಣ ಜುಲೈ 30ರಂದು 2014ನೇ ಬ್ಯಾಚ್ ಐಎಎಸ್ ಅಧಿಕಾರಿ ದಿವ್ಯಾ ಪ್ರಭುರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಯಿತು. ಆದರೆ ಅವರು ಸಹ ಅಧಿಕಾರ ಸ್ವೀಕಾರ ಮಾಡಲಿಲ್ಲ.
ಬುಧವಾರ ಎಂ. ಎಲ್. ವೈಶಾಲಿಯನ್ನು ಹೊಸ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಜಿಲ್ಲೆಯ ಪ್ರಮುಖ ಹುದ್ದೆ ಭರ್ತಿ ಆದಂತೆ ಆಗಿದೆ.












Click it and Unblock the Notifications