ಗದಗ: ಒಂದೇ ಊರಿನ 50 ಮಂದಿ ವಾಂತಿ, ಬೇಧಿಯಿಂದ ಅಸ್ವಸ್ಥ
ಗದಗ, ಫೆಬ್ರವರಿ 17 : ವಾಂತಿ, ಬೇಧಿಗೆ ಇಡೀ ಗ್ರಾಮಸ್ಥರೇ ಕಂಗಾಲಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಮಂದಿ ವಾಂತಿ, ಬೇಧಿಯಿಂದ ನರಳುತ್ತಿದ್ದಾರೆ. ಬಸ್ ನಿಲ್ದಾಣ, ರಸ್ತೆಯಲ್ಲಿ ನರಳಾಟ ಮುಂದುವರೆದಿದೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅನಾರೋಗ್ಯದ ಕುರಿತು ಮಾಹಿತಿ ನೀಡಿದ್ದರೂ ಆಂಬುಲೆನ್ಸ್ ಕಳುಹಿಸಿಲ್ಲ, ಅವರ ಬೇಜವಾಬ್ದಾರಿ ವರ್ತನೆಯಿಂದ ಮೂರು ಗಂಟೆ ತಡವಾಗಿ ಆಂಬುಲೆನ್ಸ್ ಬಂದಿದೆ. ಅಲ್ಲಿವರೆಗೆ ನಿಲ್ದಾಣದಲ್ಲಿಯೇ ಎಳನೀರು ಕುಡಿಸಿ ಆರೈಕೆ ಮಾಡಲಾಗಿದೆ. ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ 30 ಕ್ಕೂ ಹೆಚ್ಚು ಮಂದಿಯನ್ನು ದಾಖಲಿಸಲಾಗಿದೆ.
ಗ್ರಾಮದಲ್ಲಿ ಎಲ್ಲರಿಗೂ ಒಂದೇ ರೀತಿಯ ತೊಂದರೆ ಕಾಣಿಸಿಕೊಳ್ಳಲು ಕಾರಣ ಏನು ಎಂದು ಇದುವರೆಗೂ ತಿಳಿದುಬಂದಿಲ್ಲ, ನೀರಿನಿಂದಲೂ ಬಂದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ರೋಗಿಗಳ ಪರೀಕ್ಷೆ ನಂತರ ಕಾರಣ ತಿಳಿಯಲಿದೆ.