ಕೆಲವೇ ಕ್ಷಣಗಳಲ್ಲಿ ಗದಗ ಜಿಲ್ಲೆಗೆ ಬಿಜೆಪಿ ಚುನಾವಣಾ ಚಾಣಕ್ಯನ ಆಗಮನ
ಗದಗ, ಏಪ್ರಿಲ್, 28: ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ರಾಜ್ಯ ನಾಯಕರ ಪರವಾಗಿ ರಾಷ್ಟ್ರೀಯ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಹಾಗೆಯೆ ಇಂದು ಮಧ್ಯಾಹ್ನ 2 ಗಂಟೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣಕ್ಕೆ ಅಮಿತ್ ಶಾ ಆಗಮಿಸಲಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲಕ್ಷ್ಮೇಶ್ವರ ಪಟ್ಟಣದ ಅಗತ್ಯ ತೀರ್ಥದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಪರ ಪ್ರಚಾರ ನಡೆಸಲಿದ್ದಾರೆ.

ಈ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇರುವ ಹಿನ್ನೆಲೆ ಬೃಹತ್ ವೇದಿಕೆಯನ್ನು ಸಜ್ಜು ಮಾಡಲಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗದಗ ಎಸ್ಪಿ ಬಿ.ಎಸ್. ನೇಮಗೌಡ ಅವರು ಗುರುವಾರವೇ ವೇದಿಕೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕದಲ್ಲಿ ನಾವು ಗೆದ್ದರೆ ದೇಶ ಗೆಲ್ಲುತ್ತದೆ
ಈ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ನಾವು ಗೆದ್ದರೆ ದೇಶ ಗೆಲ್ಲುತ್ತದೆ. ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿ ರಸ್ತೆ ಮೇಲೆ ಹಾಕಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ 77ರಲ್ಲಿ ಇಂದಿರಾ ಗಾಂಧಿಯನ್ನೂ ಸಹ ಅನರ್ಹಗೊಳಿಸಿದ್ದರು. 1979ರಲ್ಲಿ ಚಿಕ್ಕಮಗಳೂರಿನಿಂದ ಚುನಾವಣೆಯಲ್ಲಿ ಗೆಲ್ಲಿಸಿ, ಇಡೀ ದೇಶದಲ್ಲಿ 1989ರಲ್ಲಿ ಸಂಪೂರ್ಣ ಬಹುಮತ ಬಂತು. ಅದೇ ರೀತಿ 2024ರಲ್ಲಿ ಕಾಂಗ್ರೆಸ್ಗೆ ಭಾರೀ ಬಹುಮತ ಬಂದು ಬಿಜೆಪಿ ಸೋಲುತ್ತೆ ಎಂದಿದ್ದರು.
ಕರ್ನಾಟಕ ರಾಜ್ಯ ಚುನಾವಣೆ ಗೆಲ್ಲುವುದು ಮುಖ್ಯ, ಯಾಕೆಂದರೆ ಜಿಎಸ್ ಪಾಟೀಲ್ ಗೆದ್ದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಅಧಿಕಾರ ಬಂದರೆ ದೇಶದಲ್ಲಿ ಬದಲಾವಣೆ ಆಗುತ್ತದೆ. ಬಹಿರಂಗ ಸಭೆಗೆ ಇಷ್ಟೊಂದು ಜನ ಬಂದಿದ್ದಾರೆ. ಬಿಸಿಲಿನಲ್ಲಿ ನಿಂತಿದ್ದಾರೆ. ಇನ್ನೊಂದು 20 ಸಾವಿರ ರೂಪಾಯಿ ಖರ್ಚು ಮಾಡಿದರೆ, ಇವರೆಲ್ಲರಿಗೂ ನೆರಳಾಗುತ್ತಿತ್ತು. ನಾವು ನೆರಳಲ್ಲಿ, ಅವರು ಬಿಸಿಲಿನಲ್ಲಿಯೇ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದರು.
ಮಾತು ಮುಂದುವರಿಸಿದ ಮಲ್ಲಿಕಾರ್ಜುನ ಖರ್ಗೆ, ಈಗಿನ ಸರ್ಕಾರ 40% ಕಮಿಷನ್ ಸರ್ಕಾರ. ಇವರಿಗೆ ಪಾಠ ಕಲಿಸಿಬೇಕು. ಮನ್ ಕಿ ಬಾತ್, ಘರ್ ಕಿ ಬಾತ್ನಲ್ಲಿ ಹೆಣ್ಣು ಮಕ್ಕಳ ಬಗ್ಗೆ, ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಮಾತನಾಡುತ್ತಾರೆ. ಆದರೆ ಲಂಚ ತೆಗೆದುಕೊಂಡವರ ಬಗ್ಗೆ ಮಾತನಾಡುವುದಿಲ್ಲ. 40% ತೆಗೆದುಕೊಂಡವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಎಲ್ಲಿದೆ ನಿಮ್ಮ ಈಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಇಲಾಖೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು.
ಕರ್ನಾಟಕದಲ್ಲಿ ಇಷ್ಟೊಂದು ಲಂಚ ಹೊಡೆಯುತ್ತಿದ್ದಾರೆ. ರಾಷ್ಟ್ರಪತಿಗೆ, ರಾಜ್ಯಪಾಲರಿಗೆ ಹಾಗೂ ಪ್ರಧಾನಿಗೆ ಬರವಣಿಗೆ ಮೂಲಕ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಅಂತಾರೆ. 70 ವರ್ಷದಿಂದ ನಾವು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದಕ್ಕೆ, ನಿಮ್ಮಂತ ಚಹಾ ಮಾರುವವನು ಪ್ರಧಾನಿಯಾಗಿದ್ದಾನೆ. ನನ್ನಂತ ಕೂಲಿ ಕಾರ್ಮಿಕನ ಮಗ ವಿರೋಧ ಪಕ್ಷದ ನಾಯಕನಾಗಿದ್ದೇನೆ ಎಂದು ಹೇಳಿದ್ದರು.












Click it and Unblock the Notifications