ಗದಗ; 2ಎ ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ, ವಚನಾನಂದ ಶ್ರೀ
ಗದಗ, ಅಕ್ಟೋಬರ್, 17; ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕುರಿತು ಹರಿಹರ ಪೀಠದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಜನ ಜಾಗೃತಿ ಅಭಿಯಾನವನ್ನು ಮಾಡಲಾಗಿತ್ತು. ಜಗದ್ಗುರು ನಡೆ ಗ್ರಾಮದ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗದಗದಲ್ಲಿ ವಚನಾನಂದ ಶ್ರೀಗಳಿಗೆ ಪಂಚಮಸಾಲಿ ಸಮಾಜದ ಮುಖಂಡರು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.
ಹರಿಹರ ಪೀಠದ ವಚನಾನಂದ ಶ್ರೀಗಳ ಮಾತನಾಡಿ, "ನಾವು ಮುತ್ತಿಗೆ ಹಾಕುವ ಹೋರಾಟ ಮಾಡುವವರಲ್ಲ. ನಮ್ಮದು ಸಂವಿಧಾನಾತ್ಮಕ ಹೋರಾಟ ಆಗಿರುತ್ತದೆ. ಕಾನೂನಾತ್ಮಕ ಹೋರಾಟದಲ್ಲಿ ಬಹಳ ಗಟ್ಟಿಯಾಗಿದೇವೆ. ನಾವು ಯಾವುದೇ ಹೋರಾಟ ಮಾಡುವಾಗ ಮತ್ತೊಬ್ಬರನ್ನು ಟೀಕೆ ಮಾಡುವುದು, ಸರ್ಕಾರವನ್ನು ಟೀಕಿಸುವ ಬಗ್ಗೆ ಆಸಕ್ತಿ ಇಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವ ವಿಚಾರದಲ್ಲಿ ಗಟ್ಟಿಯಾಗಿ ನಿಂತಿದ್ದೇವೆ," ಎಂದರು.
ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಮಾಡುತ್ತಿದೇವೆ. ಶಾಸಕರು, ಸಚಿವರು ಆಂತರಿಕವಾಗಿ ಕೆಲಸ ಮಾಡುತ್ತಿದ್ದು, ನಾವು ಬಾಹ್ಯವಾಗಿ ಹೋರಾಟ ಮಾಡುತ್ತಿದೇವೆ. 1994ರಿಂದ ಆರಂಭವಾದಂತಹ ಹೋರಾಟ ಇನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಹರಿಹರದ ಪಂಚಮಸಾಲಿ ಪೀಠದಿಂದಲೇ ಸರ್ಕಾರದಿಂದ 3ಬಿ ಮೀಸಲಾತಿ ಸಿಕ್ಕಿದೆ. ಆಗಲೇ 2ಎ ಮೀಸಲಾತಿ ಸಿಗಬೇಕಿತ್ತು. ಕಾರಣಾಂತರಗಳಿಂದ ಸಿಗಲಿಲ್ಲ.ಯಾರನ್ನು ಟೀಕೆ ಮಾಡದೆ ಪ್ರೀತಿಯಿಂದ ಹೃದಯವನ್ನು ಗೆದ್ದು ಮೀಸಲಾತಿಯನ್ನು ಪಡೆಯುತ್ತೇವೆ ಎಂದು ಹೇಳಿದರು.

ಶೀಘ್ರವೇ ಮೀಸಲಾತಿ ಜಾರಿಗೆ ಒತ್ತಾಯ
ಮೀಸಲಾತಿ ಪಡೆದುಕೊಳ್ಳುವ ದೃಷ್ಟಿಯಿಂದ ಜನ ಜಾಗೃತಿ ಅಭಿಯಾನವನ್ನು ಆರಂಭಿಸಿದೇವೆ. ಈಗಾಗಲೇ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದ್ದು, 18 ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮುಗಿದಿದೆ. ಕುಲಶಾಸ್ತ್ರ ಅಧ್ಯಯನದ ವರದಿಯನ್ನು ತರಿಸಿಕೊಂಡು ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ ಕೇಂದ್ರದಲ್ಲಿ ಓಬಿಸಿ, ರಾಜ್ಯದಲ್ಲಿ 2ಎ ಮೀಸಲಾತಿ ಘೋಷಣೆ ಮಾಡಬೇಕು. ಸರ್ಕಾರಕ್ಕೆ ಜನ ಜಾಗೃತಿ ಮೂಲಕ ಒತ್ತಡ ಹೇರುವ ಕಾರ್ಯಕ್ರಮವನ್ನು ಮಾಡುತ್ತಿದೇವೆ ಎಂದರು.

ಮೀಸಲಾತಿ ಬಗ್ಗೆ ಸಿಎಂ ಜೊತೆ ಮಾತುಕತೆ
ಸರ್ಕಾರಕ್ಕೆ ಇದುವರೆಗೆ ಯಾವುದೇ ಗಡುವು ಕೊಟ್ಟಿರಲಿಲ್ಲ. ಕಾನೂನಾತ್ಮಕ ತೊಡಕುಗಳು ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಸಮಯ ಕೊಟ್ಟಿದೇವೆ. ಈಗಾಗಲೇ ಮೀಸಲಾತಿ ಬಗ್ಗೆ ಸಿಎಂ ಜೊತೆಗೆ ಮಾತನಾಡಿದ್ದು, ಅವರು ಮಾಡಿಕೊಡುತ್ತೇವೆ ಅಂತಾ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ದೂರ ದೃಷ್ಟಿ ಇಟ್ಟುಕೊಂಡು ಹೋರಾಟ
ಕುಲಶಾಸ್ತ್ರದ ವರದಿ ಬಂದ ತಕ್ಷಣ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಅಂದಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಚುನಾವಣೆ ಆಗುತ್ತದೆ. ಚುನಾವಣೆ ಪೂರ್ವದಲ್ಲೇ ಸರ್ಕಾರ ಮೀಸಲಾತಿಯನ್ನು ಕೊಡುತ್ತದೆ. ಆದ್ದರಿಂದ ನಾವು ದೂರ ದೃಷ್ಟಿ ಇಟ್ಟುಕೊಂಡು ಹೋರಾಟ ಮಾಡಬೇಕಾಗುತ್ತದೆ. ಮೀಸಲಾತಿ ಘೋಷಣೆ ಮಾಡಲೇಬೇಕು ಎಂಬುದು ನಮ್ಮ ಒತ್ತಾಯ ಆಗಿದೆ ಎಂದರು.

ವರದಿ ತರಿಸಿ ಮೀಸಲಾತಿ ಘೋಷಣೆ ಮಾಡಿ
ಈ ಸರ್ಕಾರ ಇರುತ್ತದೆಯೋ ಅಥವಾ ಇನ್ನೊಂದು ಸರ್ಕಾರ ಬರುತ್ತದೆಯೋ ಗೊತ್ತಿಲ್ಲ. ಆದರೆ ನಮ್ಮ ಹೋರಾಟ ಮಾತ್ರ 28 ವರ್ಷಗಳಿಂದ ನಡೆದುಕೊಂಡು ಬಂದಿದೆ. ಸರ್ಕಾರ ಮತ್ತೆ ಜಾರಿಕೊಳ್ಳುವ ಪ್ರಯತ್ನವನ್ನು ಮಾಡಬಾರದು. ಮುಖ್ಯಮಂತ್ರಿಗಳು ನಮ್ಮವರೇ ಆಗಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿ ಘೋಷಣೆ ಮಾಡುವ ಸಂದರ್ಭದಲ್ಲಿ ಎಷ್ಟೊಂದು ಕ್ಲಿಷ್ಟಕರವಾದಂತಹ ವಾತಾವರಣ ಇತ್ತು. ಈಗಾಗಲೇ ಎಸ್ಸಿ ಎಸ್ಟಿಗೆ ಮೀಸಲಾತಿ ಹೆಚ್ಚಿಗೆ ಮಾಡಿದ್ದಾರೆ. ನಮ್ಮ ವರದಿಯನ್ನು ತಡ ಮಾಡದೇ, ಆದಷ್ಟು ಬೇಗ ವರದಿ ತರಿಸಿ ಮೀಸಲಾತಿ ಘೋಷಣೆ ಮಾಡಿ ಅಂತಾ ಸರ್ಕಾರಕ್ಕೆ ಹೇಳುತ್ತಿದೇವೆ ಎಂದರು.












Click it and Unblock the Notifications