ಭಾರತೀಯ ಜನತಾ ಪಕ್ಷವೇ ನನ್ನ ರಾಜಕೀಯ ಜೀವನ-ಗಾಲಿ ಜನಾರ್ದನ ರೆಡ್ಡಿ
ಗದಗ, ಡಿಸೆಂಬರ್ 7: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಜನಾರ್ದನ ರೆಡ್ಡಿ ಮಾತ್ರ ಯಾವುದಕ್ಕೂ ಸ್ಪಷ್ಟ ಉತ್ತರ ನೀಡದೆ ಕೊಪ್ಪಳ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಂಗಳವಾರ ಸಂಜೆ ತಮ್ಮ ಬೆಂಬಲಿಗರು ಮತ್ತು ಫೋಟೋ ವಿಡಿಯೋ ತಂಡದೊಂದಿದೆ ಗದಗದ ಬಸವೇಶ್ವರ ಗಾರ್ಡನ್ಗೆ ಭೇಟಿ ನೀಡಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಬಸವೇಶ್ವರ ಮೂರ್ತಿ ದರ್ಶನಕ್ಕೂ ಮೊದಲು ಸಾರಿಗೆ ಸಚಿವ ಶ್ರೀರಾಮುಲು ಅವರ ಮನೆಗೆ ಭೇಟಿ ನೀಡಿ ಬಂದಿದ್ದರು ಎನ್ನಲಾಗಿದೆ. ಬಳಿಕ ಜನಾರ್ದನ ರೆಡ್ಡಿ ಬಸವೇಶ್ವರ ಗಾರ್ಡನ್ನಲ್ಲಿ ವಿಡಿಯೋ ಹಾಗೂ ಫೋಟೋಶೂಟ್ ನಡೆಸಿದ್ದಾರೆ.

ಸ್ವಾಮೀಜಿಗಳ ಆಶಯದಂತೆ ಬಸವೇಶ್ವರ ಮೂರ್ತಿ ನಿರ್ಮಾಣ
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಬಸವೇಶ್ವರ ಮೂರ್ತಿ ನೋಡಲು ಇಲ್ಲಿಗೆ ಬಂದಿದ್ದೇನೆ. ತೋಂಟದಾರ್ಯ ಸ್ವಾಮೀಜಿಗಳ ಆಶಯದಂತೆ ಬಸವೇಶ್ವರ ಮೂರ್ತಿ ನಿರ್ಮಿಸಲಾಗಿದೆ. ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ನಾನು ಪ್ರವಾಸೋದ್ಯಮ ಸಚಿವನಾಗಿದ್ದೆ. ಆಗ ಬಸವೇಶ್ವರ ಪುತ್ತಳಿ ಸ್ಥಾಪನೆ ಒತ್ತಾಯ ಇತ್ತು. ಈ ಭಾಗದ ಜನರ ಆಶಯದಂತೆ ಪುತ್ತಳಿ ನಿರ್ಮಾಣವಾಗಿದೆ. ನುಡಿದಂತೆ ನಡೆದಿದ್ದೇವೆ. ನೆನಪಿಗಾಗಿ ಸ್ಥಳಕ್ಕೆ ಭೇಟಿ ನೀಡಿ ಫೋಟೋ ವಿಡಿಯೋ ತೆಗೆದುಕೊಂಡಿದ್ದೇನೆ. ಇಲ್ಲಿ ಬಸವಣ್ಣ ಜೀವಂತವಾಗಿ, ಸಾಕ್ಷಾತ್ ನಿಂತಂತಿದೆ ಎಂದರು.

ಏನೇ ಇದ್ದರೂ ಭಾರತೀಯ ಜನತಾ ಪಕ್ಷದ ಮೇಲೆ ನಮಗೆ ಅಭಿಮಾನ
ಇನ್ನು ಹೊಸ ರಾಜಕೀಯ ಪಕ್ಷ ಆರಂಭಿಸುತ್ತೀರಾ..? ಎನ್ನುವ ಪ್ರಶ್ನೆಗೆ ಉತ್ತರಿಸಿದ ಜನಾರ್ದನ ರೆಡ್ಡಿ, ಭಾರತೀಯ ಜನತಾ ಪಕ್ಷವೇ ನನ್ನ ಇಡೀ ರಾಜಕೀಯ ಜೀವನ. ಕಳೆದ 30 ವರ್ಷಗಳಿಂದ ಬಿಜೆಪಿಯೇ ನಮ್ಮ ಕುಟುಂಬ. ಬಿಜೆಪಿಯಿಂದ ರಾಜಕೀಯ ಆರಂಭವಾಗಿದೆ. ಎಲ್.ಕೆ ಅಡ್ವಾಣಿ ಅವರ ರಾಮ ರಥಯಾತ್ರೆ ಮೂಲಕ ಕೆಲಸ ಆರಂಭ ಮಾಡಿದ್ದೇವು. ಏನೇ ಇದ್ದರೂ ಭಾರತೀಯ ಜನತಾ ಪಕ್ಷದ ಮೇಲೆ ನಮಗೆ ಅಭಿಮಾನ ಇರುತ್ತದೆ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ. ಅಭಿಮಾನ ಅಂದ್ರೆ ಬಿಜೆಪಿ. ಹಿರಿಯರು, ನಾಯಕರು ಏನು ತೀರ್ಮಾನ ಮಾಡುತ್ತಾರೆ ಕಾದು ನೋಡುತ್ತೇನೆ. ಯಾವ ಕ್ಷೇತ್ರದಿಂದ ಚುನಾವಣೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.

ಜನರ ನಡುವೆಯೇ ಇರಲು ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ
ಇನ್ನು ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಬಳ್ಳಾರಿಯಿಂದ ಹೊರಗಿರಬೇಕಿದೆ. ನನಗೆ ಬೆಂಗಳೂರಿನಲ್ಲಿ ಇರಲು ಇಷ್ಟ ಇಲ್ಲ. ಉತ್ತರ ಕರ್ನಾಟಕದ ಬಳ್ಳಾರಿ, ಬೀದರ್ನಿಂದ ಬೆಳಗಾವಿವರೆಗೆ ಎಲ್ಲಿಯಾದರೂ ಇರಬೇಕು. ಮನಸ್ಸಿಗೆ, ಆರೋಗ್ಯಕ್ಕೆ ಈ ವಾತಾವರಣ ತೃಪ್ತಿ ತರುತ್ತದೆ. ನಮ್ಮ ಜನರ ನಡುವೆಯೇ ಇರಬೇಕು ಎನ್ನುವ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ. ಹೊಸ ಪಕ್ಷದ ವಿಚಾರವಾಗಿ ಹೆಚ್ಚು ಮಾತಾಡಲ್ಲ. ಇನ್ನೂ ಸಮಯ ಇದೆ. ಜನರ ಜೊತೆ ಸಂಪರ್ಕದಲ್ಲಿರಲು ಸಂಚಾರ ನಡೆಸುತ್ತಿದ್ದೇನೆ ಎಂದರು.

ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜನಾರ್ದನ್ ರೆಡ್ಡಿ
ಗಾಲಿ ಜನಾರ್ದನ್ ರೆಡ್ಡಿ ಅವರು ಸದ್ಯ ರಾಜಕೀಯವಾಗಿ ಮುಂದಿನ ನಡೆಯ ಬಗ್ಗೆ ಸಾಕಷ್ಟು ಕುತೂಹಲ ಇದೆ. ಈಗಾಗಲೇ ಜನರ ಜೊತೆ ಬೆರೆಯಲು ಜನಾರ್ದನ್ ರೆಡ್ಡಿ ಈಗಾಗಲೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಂಚಾರ ಆರಂಭಿಸಿದ್ದಾರೆ. ಸೋಮವಾರ ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ದರ್ಶನ ಪಡೆಯುವ ಮೂಲಕ ಅಧಿಕೃತ ಎಂಬಂತೆ ಗಂಗಾವತಿ ಕ್ಷೇತ್ರದಲ್ಲಿ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಮಂಗಳವಾರ ಜನಾರ್ದನ್ ರೆಡ್ಡಿ ಗಂಗಾವತಿಯ ಹಿರೇಜಂತಕಲ್ನಲ್ಲಿರುವ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಪಟ್ಟಣದ ಕಲ್ಮಠಕ್ಕೂ ಭೇಟಿ ನೀಡಿ ಕಲ್ಮಠದ ಗದ್ದುಗೆಗೆ ನಮಸ್ಕರಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದರು. ಅಲ್ಲದೇ ರೈತ ದಿನಾಚರಣೆ ಅಂಗವಾಗಿ ರೈತರಿಗೆ ಸನ್ಮಾನ ಮಾಡಿದರು. ಹೀಗೆ ಒಂದೊಂದಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನಾರ್ದನ್ ರೆಡ್ಡಿ ಭಾಗಿಯಾಗುತ್ತಿದ್ದಾರೆ.












Click it and Unblock the Notifications