ಗದಗ ಬಸ್ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು
ಗದಗ, ನವೆಂಬರ್ 24 : ಗದಗದಲ್ಲಿ ನೂತವಾಗಿ ನಿರ್ಮಾಣಗೊಂಡ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶ್ರೀ ಪುಟ್ಟರಾಜ ಗವಾಯಿ ಅವರ ಹೆಸರಿಡಲು ಕರ್ನಾಟಕ ಸರ್ಕಾರ ಆದೇಶ ನೀಡಿದೆ.
ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಕುರಿತು ಮಂಗಳವಾರ ಮಾಹಿತಿ ನೀಡಿದ್ದಾರೆ. 'ಗದಗ ಪಟ್ಟಣದ ನವೀಕೃತ ಬಸ್ ನಿಲ್ದಾಣಕ್ಕೆ ಗಾನಯೋಗಿ ಶ್ರೀ ಪಂಡಿತ್ ಪುಟ್ಟರಾಜ ಗವಾಯಿಗಳ ಹೆಸರನ್ನು ಇಡುವುದಕ್ಕೆ ಆದೇಶಿಸಲಾಗಿದೆ' ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
"ಇಂತಹ ಮಹಾತ್ಮರ ಹೆಸರನ್ನು ಇಡುವುದಕ್ಕೆ ಅವಕಾಶ ನನಗೆ ಸಿಕ್ಕಿರುವುದು ನನ್ನ ಸುಯೋಗ ಮತ್ತು ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ಅಷ್ಟೇ ಅಲ್ಲ ಇದರಿಂದಾಗಿ ಗವಾಯಿಗಳ ಅಸಂಖ್ಯಾತ ಭಕ್ತರ ಬೇಡಿಕೆಯನ್ನೂ ಈಡೇರಿಸಿದಂತಾಗಿದೆ" ಎಂದು ಹೇಳಿದ್ದಾರೆ.

"ನಮಗೆಲ್ಲಾ ದೊಡ್ಡ ಆದರ್ಶವಾಗಿ, ದಾರಿದೀಪವಾಗಿರುವ ಶ್ರೀ ಗವಾಯಿಗಳಿಗೆ ಇದರಿಂದಾಗಿ ನಮ್ಮೆಲ್ಲರ ಭಕ್ತಿ, ಗೌರವ ಸಲ್ಲಿಸಲು ಅವಕಾಶವಾದಂತಾಗಿದೆ" ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಗದಗ ನಗರದ ಹೃದಯ ಭಾಗದಲ್ಲಿ ಸುಮಾರು ಐದೂವರೆ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಹಳೆಯ ಬಸ್ ನಿಲ್ದಾಣದ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಸ್ಥಳದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಬಸ್ ನಿಲ್ದಾಣದ ಕಟ್ಟಡ ಶಿಥಿಲವಾಗಿತ್ತು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿಗಳು ಹೊಸ ಕಟ್ಟಡದ ನೀಲನಕ್ಷೆ ಸಿದ್ಧಪಡಿಸಿದ್ದರು.
ಸುಮಾರು 5 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಈಗ ಬಸ್ ನಿಲ್ದಾಣಕ್ಕೆ ಗದಗದ ಹೆಮ್ಮೆಯ ಗಾನ ಗಂಧರ್ವ ಎಂದು ಕರೆಸಿಕೊಳ್ಳುವ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರು ಇಡಲು ಒಪ್ಪಿಗೆ ನೀಡಲಾಗಿದೆ.












Click it and Unblock the Notifications