ಗದಗ ಭೀಷ್ಮ ಕೆರೆ ಸರ್ವೆ ಕಾರ್ಯ ಆರಂಭ... ಒತ್ತುವರಿ ಪ್ರಭಾವಿಗಳಿಗೆ ಶುರುವಾಯ್ತು ಭೀತಿ
ಗದಗ, ಆಗಸ್ಟ್ 23: ನಗರದ ಹೃದಯ ಭಾಗದಲ್ಲಿರುವ ಬೃಹತ್ ಐತಿಹಾಸಿಕ ಭೀಷ್ಮ ಕೆರೆಯನ್ನ ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನ ನಿರ್ಮಿಸಿದ್ದ ಪ್ರಭಾವಿ ಕುಳಗಳಿಗೆ ಈಗ ಭೀತಿ ಶುರುವಾಗಿದೆ. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಒತ್ತುವರಿ ಸರ್ವೆ ಕಾರ್ಯ ಆರಂಭವಾಗಿದೆ.
ಸರ್ವೆ ನಂಬರ್ 33ರ ದಾಖಲೆಯಲ್ಲಿ ಕೆರೆಯ ವಿಸ್ತೀರ್ಣ 103.5 ಎಕರೆ ಎಂದು ನಮೂದಾಗಿರುವ ಭೀಷ್ಮಕೆರೆ ಇದೀಗ ಸಾಕಷ್ಟು ಒತ್ತುವರಿಯಾಗಿ ಉಳಿದಿರುವುದು ಕೇವಲ 35 ಎಕರೆ ಮಾತ್ರ. ಈ ಕೆರೆ ರಾಜ್ಯಪಾಲರ ಹೆಸರಿನಲ್ಲಿ ಆರ್ಟಿಸಿಯನ್ನು ಈ ಹಿಂದೆ ಹೊಂದಿತ್ತು. ಸಾಕಷ್ಟು ಒತ್ತುವರಿಯಾಗಿ ಈಗ ಉಳಿದಿರುವುದು ಕೇವಲ 35 ಎಕರೆ, ಇದರಲ್ಲಿ ಸಾರ್ವಜನಿಕರು, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಹೀಗೆ ಕೆರೆಯ ಅತ್ಯಮೂಲ್ಯ ಜಮೀನನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.
ಅನಧಿಕೃತ ಕಟ್ಟಡಗಳಿಗೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಗೆ ಹೈಕೋರ್ಟ್ ಸೂಚನೆ
ಕೆರೆ ಸಂರಕ್ಷಣಾ ಪ್ರಾಧಿಕಾರದ ನಿಯಮ 2014ರ ಹಾಗೂ ಪರಿಷ್ಕೃತ ನಿಯಮ 2018ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಕುರಿತು ಸಾರ್ವಜನಿಕರು ಸಾಕಷ್ಟು ಹೋರಾಟ ಮಾಡಿದರೂ ನಗರಸಭೆ ಅಧಿಕಾರಿಗಳು ಮಾತ್ರ ಭೀಷ್ಮ ಕೆರೆಯಲ್ಲಿ ಒತ್ತುವರಿಯಾಗಿಲ್ಲ, ಮೂಲ ಕೆರೆ ಎಷ್ಟುಇತ್ತು ಅಷ್ಟೇ ಇದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಒತ್ತುವರಿ ಮಾಡಿಕೊಂಡವರ ಪರವಾಗಿ ನಿಂತಿದ್ದರು.
ಹೈಕೋರ್ಟ್ನಲ್ಲಿ ಪ್ರಕರಣ
ಭೀಷ್ಮ ಕೆರೆ ಒತ್ತುವರಿ ವಿಷಯವಾಗಿ ತಾಲೂಕಿನ ಸಾರ್ವಜನಿಕರೊಬ್ಬರು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಂಖ್ಯೆ 28212/2019(ಜೆಎಂ-ಆರ್ ಇಎಸ್) ದಾಖಲಿಸಿದ್ದರು. ಇದರನ್ವಯ ಕಳೆದ ಮೂರುವರೆ ವರ್ಷದಿಂದ ಸುದೀರ್ಘ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರವು 11-2-2021ರಂದು ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿತ್ತು. ಕೊರೊನಾ ನೆಪದಿಂದ ಕಳೆದೆರಡು ವರ್ಷಗಳಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ನ್ಯಾಯಾಲಯದ ತೂಗುಗತ್ತಿ ತಪ್ಪಿಸಿಕೊಳ್ಳಲು ಅಕ್ರಮ ನಿವಾಸಿಗಳಿಗೆ ನೋಟಿಸ್ ನೀಡಿತ್ತು.
ಒತ್ತುವರಿಯಾದ ಜಾಗದಲ್ಲಿ ನಿವೇಶನ, ವಾಣಿಜ್ಯ ಮಳಿಗೆ, ಹೊಟೆಲ್, ಆಸ್ಪತ್ರೆ ಸೇರಿದಂತೆ ಅನೇಕ ಕಟ್ಟಡಗಳನ್ನು ನಿರ್ಮಿಸಿ ಕೆರೆಯ ಜಾಗವನ್ನು ನುಂಗಿ ನೀರು ಕುಡಿದಿದ್ದಾರೆ. ಆದರೆ ಇದೀಗ ಕೆರೆ ಒತ್ತುವರಿ ಮಾಡಿಕೊಂಡ ಪ್ರಭಾವಿಗಳಿಗೆ ಕಾನೂನಿನ ಭಯ ಆರಂಭವಾಗಿದೆ. ಹೈಕೋರ್ಟ್ ಆದೇಶದಂತೆ ಭೀಷ್ಮ ಕೆರೆಯ ಒತ್ತುವರಿ ಸರ್ವೆ ಕಾರ್ಯ ಶುರುವಾಗಿದೆ. ಅಧಿಕಾರಿಗಳು ಕೆರೆಯ ಒತ್ತವರಿಯನ್ನು ಪರಿಶೀಲಿಸಿ ಯುಪಿ ಮಾದರಿಯಲ್ಲಿ ಗದಗದಲ್ಲೂ ಬುಲ್ಡೋಜರ್ ಭಯ ಜಾರಿಗೊಳಿಸುವಂತೆ ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.